ಕೊಡಗು: ವನ್ಯಜೀವಿ ಪಳಿಯುಳಿಕೆ ವಾಪಸ್ ಆದೇಶದ ಹಿಂದೆ ರಾಜಕೀಯ ಕುತಂತ್ರ..?

By Girish GoudarFirst Published Feb 20, 2024, 9:04 PM IST
Highlights

ಇದು ಮುಂದೆಯೂ ಕೊಡಗಿನ ಜನರ ಪಾಲಿಗೆ ಮುಳುವಾಗಬಹುದು. ಹೀಗಾಗಿ ಸರ್ಕಾರದ ಆ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ಮಾಜಿ ಸ್ವೀಪಕರ್ ಕೆ.ಜಿ. ಬೋಪಯ್ಯ 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಫೆ.20):  ಹಬ್ಬ, ಆಚರಣೆ ವಿಶಿಷ್ಠ ಸಂಸ್ಕೃತಿಯಿಂದ ದೇಶದಲ್ಲಿಯೇ ವಿಶೇಷತೆಯನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಕೊಂಬಾಟ್ ಎನ್ನುವುದು ಇನ್ನೂ ವಿಶೇಷ. ಆದರೆ ರಾಜ್ಯ ಸರ್ಕಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹೊರಡಿಸಿದ್ದ ವನ್ಯಜೀವಿ ಪಳಯುಳಿಕೆಗಳ ವಾಪಸ್ ನಿಯಮಕ್ಕೆ ಜಿಲ್ಲೆಯಲ್ಲಿ ಆತಂಕ ಶುರುವಾಗಿತ್ತು. ಸದ್ಯ ಈ ಕಾನೂನಿಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಸರ್ಕಾರ ಈ ನಿಯಮ ಜಾರಿ ಮಾಡಲು ಹೊರಟಿದ್ದರ ಹಿಂದೆ ರಾಜಕೀಯ ಅಡಗಿದೆಯಾ ಎನ್ನುವ ಅನುಮಾನ ಶುರುವಾಗಿದೆ ಎನ್ನುತ್ತಾರೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ.

ಹೌದು, 1974 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇರುವ ನಿಯಮವನ್ನು ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಜಾರಿಗೆ ತರಲು ಹೊರಟಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಇನ್ನು ಮೂರು ತಿಂಗಳ ಒಳಗಾಗಿ ಜಿಂಕೆ ಕೊಂಬು, ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಸಂಪತ್ತು ವಾಪಸ್ ನೀಡಬೇಕು ಎಂದು ಘೋಷಿದ್ದರು. ಇದು ಕೊಡಗಿನ ಜನತೆಯಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು. ಕೊಡಗಿನಲ್ಲಿ ಇರುವ ವನ ಭದ್ರಕಾಳಿ, ಭದ್ರಕಾಳಿ ದೇವಸ್ಥಾನಗಳಲ್ಲಿ ವಿಶೇಷವಾಗಿ ಜಿಂಕೆ ಕೊಂಬು ಮುಂತಾದವುಗಳನ್ನು ತಲೆಯ ಮೇಲೆ ಹೊತ್ತು ನೃತ್ಯ ಮಾಡಲಾಗುತ್ತದೆ. ಇದು ಒಂದು ರೀತಿಯ ಹರಕೆಯೂ ಹೌದು. ಅಷ್ಟೇ ಅಲ್ಲ ಇಂದೊಂದು ವಿಶಿಷ್ಟ ಆಚರಣೆ. ಮಾರ್ಚಿ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬಗಳು ನಡೆಯಬೇಕಾಗಿದೆ. ಆದರೆ ಸರ್ಕಾರದ ನಿಯಮದಿಂದ ಆತಂಕ ಶುರುವಾಗಿತ್ತು. ಇದೀಗ ಹೈಕೋರ್ಟ್ ತಡೆ ನೀಡಿರುವುದು ಸಂತಸ ತಂದಿದೆ ಎನ್ನುತ್ತಿದ್ದಾರೆ ಜನರು. ಆದರೆ ಕಾಂಗ್ರೆಸ್ ಸರ್ಕಾರ ಈ ನಿಯಮ ಜಾರಿ ಮಾಡುತ್ತಿದ್ದಂತೆ ದೇವಾಲಯಗಳನ್ನು ಮುಚ್ಚಿಬಿಡಬೇಕಾ ಎನ್ನುವ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ರಂಜಿ ಪೂಣಚ್ಚ ಮತ್ತು ಕುಟ್ಟಪ್ಪ ಅವರು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮುಟ್ಟಿಲೇರಿದ್ದರು. ಸದ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದ್ದರೂ ಅದು ಶಾಶ್ವತ ರಿಲೀಫ್ ಅಲ್ಲ. ಇದು ಮುಂದೆಯೂ ಕೊಡಗಿನ ಜನರ ಪಾಲಿಗೆ ಮುಳುವಾಗಬಹುದು. ಹೀಗಾಗಿ ಸರ್ಕಾರದ ಆ ಆದೇಶವನ್ನು ವಾಪಸ್ ಪಡೆಯಬೇಕು ಎಂದು  ಮಾಜಿ ಸ್ವೀಪಕರ್ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ. 

ಕಾಡ್ಗಿಚ್ಚು ತಡೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 2000ಕಿಮೀ ಫೈರ್‌ಲೈನ್! ಏನಿದು ಅಗ್ನಿರೇಖೆ?

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಜನರಿಗೆ ತೊಂದರೆ ಕೊಡುವುದಕ್ಕೆ. ಒಂದೆಡೆ ಸಚಿವರು ವನ್ಯಜೀವಿ ಪಳೆಯುಳಿಕೆಗಳನ್ನು ವಾಪಸ್ ನೀಡಬೇಕು ಎಂದು ಕಾನೂನು ಮಾಡಿದರೆ ಮತ್ತೊಂದೆಡೆ ಅವರದೇ ಶಾಸಕರು ಕೋರ್ಟಿನಿಂದ ತಡೆಯಾಜ್ಞೆ ದೊರೆತ್ತಿದೆ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ. ಇಂತಹ ನಾಟಕ ಯಾಕೆ.? ನಿಮ್ಮದೇ ಸರ್ಕಾರ ಕಾನೂನನ್ನು ಜಾರಿ ಮಾಡಲು ಹೊರಟಿರುವುದು ಅಲ್ಲವೆ.? ಆ ಆದೇಶವನ್ನೇ ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ. ಅಂದರೆ ತಾನೇ ಒಡೆದಂತೆ ಮಾಡಿ, ಮತ್ತೊಂದೆಡೆ ತಾನೇ ಸಮಾಧಾನ ಮಾಡುವಂತಹ ಕೆಲಸ ಮಾಡುವುದೇಕೆ. ಇದರ ಉದ್ದೇಶ, ಮುಂದೆ ಚುನಾವಣೆ ಬರುತ್ತಿರುವುದರಿಂದ ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಜನರೇ ಸರಿಯಾದ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಏನೇ ಆಗಲಿ ತಲತಲಾಂತರಗಳಿಂದ ಹಬ್ಬ ಆಚರಣೆಗಳಲ್ಲಿ ನೂರಾರು ಜನರು ಜಿಂಕೆ ಕೊಂಬುಗಳನ್ನು ತಲೆಯ ಮೇಲೆ ಒತ್ತು ನರ್ತಿಸುತ್ತಿದ್ದವರಿಗೆ ಸರ್ಕಾರದ ನಿಯಮ ಆತಂಕ ತಂದೊಡ್ಡಿದ್ದಂತು ಸತ್ಯ. ಸದ್ಯ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆಯಾದರೂ ಇದು ಯಾವಾಗ ಮತ್ತೆ ಸಮಸ್ಯೆ ತಂದೊಡ್ಡುವುದೋ ಎನ್ನುವ ಭಯವಂತು ಇದ್ದೇ ಇದೆ.

click me!