Belagavi: ಪೊಲೀಸರು ವರ್ತನೆ ಬದಲಿಸಿಕೊಳ್ಳಬೇಕು: ಸತೀಶ ಜಾರಕಿಹೊಳಿ

By Govindaraj SFirst Published Dec 5, 2022, 10:43 PM IST
Highlights

ನಗರದ ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಗೆ ಜಾತಿಲೇಪನ ಮಾಡುವುದು ಸರಿಯಲ್ಲ. ಪೊಲೀಸರು ಸಂಯಮದಿಂದ ವರ್ತನೆ ಮಾಡಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳಿರುವುದು ಪೊಲೀಸರ ನಡೆ ಸರಿ ಇಲ್ಲ.

ಬೆಳಗಾವಿ (ಡಿ.05): ನಗರದ ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಗೆ ಜಾತಿಲೇಪನ ಮಾಡುವುದು ಸರಿಯಲ್ಲ. ಪೊಲೀಸರು ಸಂಯಮದಿಂದ ವರ್ತನೆ ಮಾಡಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳಿರುವುದು ಪೊಲೀಸರ ನಡೆ ಸರಿ ಇಲ್ಲ. ಬೇರೆ ರೀತಿಯಲ್ಲಿ ನಿರ್ವಹಣೆ ಮಾಡಬೇಕಿತ್ತು. ಸರ್ಕಾರಕ್ಕೆ ಇಂಥ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳುವ ಅಥವಾ ಯಾವುದೇ ಪ್ರಕರಣದಲ್ಲಿ ಕ್ರಮ ಜರುಗಿಸುವ ಧಮ್‌ ಇಲ್ಲ. ಸುಮ್ಮನೇ ಧಮ್‌ ಹಾಗೂ ತಾಕತ್‌ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಇಲ್ಲಿ ಉಸ್ತುವಾರಿ ಸಚಿವರು, ಶಾಸಕರಿಗೆ ಸರ್ಕಾರಕ್ಕೆ ಹೇಳುವ ಶಕ್ತಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ವಿಷಯದಲ್ಲಿಯೂ ಬಿಜೆಪಿ ಸರ್ಕಾರದ ವೈಫಲ್ಯ ಹಲವು ಬಾರಿ ಸಾಬೀತಾಗಿದೆ. ಇದನ್ನು ಹೆಚ್ಚು ಮುಂದುವರಿಸುವುದು ಸರಿಯಲ್ಲ. ಅಲ್ಲದೆ, ಪೊಲೀಸರು ಕನ್ನಡದ ಧ್ವಜದ ಬಗ್ಗೆ ಬಳಕೆ ಮಾಡಿರುವ ಪದ ಸರಿಯಲ್ಲ. ಪೊಲೀಸರು ಕೂಡ ಒಮ್ಮೊಮ್ಮೆ ತಪ್ಪು ದಾರಿಗೆ ಹೋಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಪದೇ ಪದೇ ಕನ್ನಡ, ಮರಾಠಿ ಆಗಬಾರದು. ಪೊಲೀಸರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಈ ಹಿಂದೆಯೂ ಬೆಳಗಾವಿಯಲ್ಲಿ ಹಿಂದೂ, ಮುಸ್ಲಿಂ ಗಲಾಟೆಯಾಗಿತ್ತು. 

ನಿಜಗಲ್ ಸಿದ್ದರ ಬೆಟ್ಟದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ

ಈಗ ಅದು ತಣ್ಣಗಾಗಿದೆ. ಯಾವುದೊಂದು ವಿಷಯಕ್ಕೆ ದೊಡ್ಡದಾಗಿ ಮಾಡುವುದು ಸರಿಯಲ್ಲ. ಈ ವಿಷಯವನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಬಿಜೆಪಿಯವರು ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಅದು ಅವರ ಪಕ್ಷದ ವಿಚಾರ, ನಾವು ಅದನ್ನು ಹೇಳಕಾಗಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಸಾಧ್ಯವಿಲ್ಲ, ಅವರ ಪಕ್ಷದ ವೇದಿಕೆಯಲ್ಲಿಯೇ ಚರ್ಚೆ ಮಾಡಬೇಕು ಎಂದರು.

ಎಲ್ಲ ಕ್ಷೇತ್ರಗಳಲ್ಲೂ ಸರ್ವೆ: ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಭೇಟಿಯ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಬಿ.ಇನಾಮದಾರ ನಮ್ಮ ಪಕ್ಷದ ನಾಯಕರು, ಮಾಜಿ ಶಾಸಕರು, ಪಕ್ಷ ಸಂಘಟನೆ ಸೇರಿದಂತೆ ಸಾಕಷ್ಟುವಿಷಯದ ಬಗ್ಗೆ ಚರ್ಚೆ ಮಾಡಿದ್ದೇವು. ಅಲ್ಲದೇ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಸಮೀಕ್ಷೆಯಲ್ಲಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುತ್ತೇವೆ. ಬಾಬಾಸಾಹೇಬ ಪಾಟೀಲ ಅವರದ್ದು ಬಂದರೆ ಅವರಿಗೆ, ಡಿ.ಬಿ.ಇನಾಮದಾರ ಅವರುದ್ದು ಬಂದರೆ ಅವರಿಗೆ. 

ಈಗಾಗಲೇ ಬೆಳಗಾವಿಯ ಎಲ್ಲ ಕ್ಷೇತ್ರದಲ್ಲಿ ಸರ್ವೆ ನಡೆಸಲಾಗುತ್ತಿದೆ. ಎಐಸಿಸಿ, ಕೆಪಿಸಿಸಿ, ಸಿಎಲ್‌ಪಿ ಕಡೆಯಿಂದ ಪ್ರತಿಕ್ಷೇತ್ರದಲ್ಲಿ ಸುಮಾರು 10 ಜನ ಆಕಾಂಕ್ಷಿಗಳಿದ್ದಾರೆ ಎಂದು ತಿಳಿಸಿದರು. ಸವದತ್ತಿ ಮತಕ್ಷೇತ್ರದಲ್ಲಿ ಎಚ್‌.ಎಂ.ರೇವಣ್ಣ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರಲ್ಲು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರ್ಜಿ ಹಾಕಲು ಎಲ್ಲರಿಗೂ ಅವಕಾಶ ಇದೆ. ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಬೇಕೆಂಬ ಉದ್ದೇಶ ಇದೆ ಎಂದರು.

ಸಿದ್ದರಾಮಯ್ಯ ಸೇಫ್‌ ಮತಕ್ಷೇತ್ರ ನೋಡಿಕೊಂಡರೆ ಒಳ್ಳೆಯದು: ಸಿದ್ದರಾಮ್ಯನವರ ಸ್ಪರ್ಧೆ ಬಗ್ಗೆ ಸಾಕಷ್ಟುಚರ್ಚೆಯಾಗುತ್ತಿದೆ. ಅದರ ಬಗ್ಗೆ ಅಂತಿಮ ನಿರ್ಧಾರ ಅವರೇ ತೆಗೆದುಕೊಳ್ಳುತ್ತಾರೆ, ಆದಷ್ಟುಸೇಫ್‌ ಇರುವ ಕಡೆಗೆ ನೋಡಿದರೆ ಅವರಿಗೂ ಅನುಕೂಲ, ನಮಗೂ ಅನುಕೂಲ. ಇಲ್ಲವಾದರೆ ಕಳೆದ ಬಾರಿ ಬಾದಾಮಿ ಕ್ಷೇತ್ರದಲ್ಲಾದಂತೆ ಕಷ್ಟವಾಗಲಿದೆ ಎಂದರು. ಪರಿಶಿಷ್ಟಸ್ವಾಮೀಜಿಗಳು ದಲಿತ ಸಿಎಂ ಆಗಬೇಕೆಂಬ ಸಮಾವೇಶ ನಡೆಸುತ್ತಿದ್ದಾರೆ. ಆದರೆ, ಅಹಿಂದ ಸಂಘಟನೆಯನ್ನು ಗಟ್ಟಿಗೊಳಿಸುವುದು ಬಿಜೆಪಿಗೆ ಬೇಕಿಲ್ಲ. ಜಾರಕಿಹೊಳಿ ಸಹೋದರರು ಅಹಿಂದ ಸಮಾವೇಶ ಮಾಡುತ್ತಿರುವುದು ನನಗೆ ಗೊತ್ತಿಲ್ಲ. 

ಅವರು ನನ್ನನ್ನು ಕರೆದಿಲ್ಲ, ಕರೆದರೆ ನೋಡುತ್ತೇನೆ ಎಂದರು. ಸತೀಶ ಜಾರಕಿಹೊಳಿ ಅವರು ಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂಬ ಚರ್ಚೆ ಇದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಮಕನಮರಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನ್ನ ಸೋಲಿಸಲು ಹಾಗೂ ಐದಾರು ಜನರನ್ನು ಕಳೆದ ಮೂರು ವರ್ಷದಿಂದ ಬಿಜೆಪಿಯವರು ನಿಯೋಜಿಸಿದ್ದಾರೆ. ನಮಗೆ ಬಿಜೆಪಿಯಿಂದ ಯಾವುದೇ ತೊಂದರೆ ಇಲ್ಲ. ಬಗಲ್ ಮೇ ದುಷ್ಮನ್‌ ಬಗ್ಗೆ ಕೊಂಚ ಆತಂಕ ಇದೆ ಅಷ್ಟೇ ಎಂದರು.

ಜನವರಿ ತಿಂಗಳಾಂತ್ಯಕ್ಕೆ 3 ದಿನಗಳ ಕಾಲ ಹಂಪಿ ಉತ್ಸವ: ಸಚಿವೆ ಶಶಿಕಲಾ ಜೊಲ್ಲೆ

ಮಹಾ ಸಚಿವರಿಗೆ ನಿಪ್ಪಾಣಿಯಲ್ಲೇ ತಡೆ: ಮಹಾರಾಷ್ಟ್ರದಲ್ಲಿ ಇರುವ ಜತ್ತ, ಅಕ್ಕಲಕೋಟೆಯ ಜನ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದಾರೆ. ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೋಕೆ ಆಗಲ್ಲ. ಅದು ಕೇವಲ ಭಾವನಾತ್ಮಕ ಚರ್ಚೆಗೆ ಸೀಮಿತವಾಗುತ್ತದೆ. ಒಂದು ಬಾರಿ ವಿಭಜನೆಯಾದರೆ ಅಂತಿಮ ಚರ್ಚೆ ನಡೆಯಲಿದೆ. ಈ ಭಾಗದ ಜನರಿಗೆ ಕುಡಿಯುವ ನೀರು ಕೊಡದೇ ಇರುವುದು ಮಹಾರಾಷ್ಟ್ರದ ರಾಜಕೀಯ ಗಿಮಿಕ್‌ ಅಷ್ಟೇ. ಸಚಿವರು ಬೆಳಗಾವಿ ಒಳಗೆ ಬರಲು ನಮ್ಮ ಪೊಲೀಸರು ಬಿಡುವುದಿಲ್ಲ. ಅವರನ್ನು ನಿಪ್ಪಾಣಿಯಲ್ಲಿಯೇ ತಡೆ ಹಿಡಿಯುತ್ತಾರೆ ಂಬ ವಿಶ್ವಾಸವಿದೆ ಎಂದು ಸತೀಶ ಜಾರಕಿಹೊಳಿ ಅವರು ಹೇಳಿದರು.

click me!