ಕೂಡ್ಲಿಗಿ: ಕೊಲೆ ಮಾಡಿನಿ ಎಂದು ಸುಳ್ಳು ಹೇಳಿ ಪೊಲೀಸರನ್ನೇ ದಂಗು ಬಡಿಸಿದ ಕುಡುಕ..!

By Kannadaprabha NewsFirst Published Apr 28, 2024, 11:58 AM IST
Highlights

ಕೊಲೆ ಮಾಡಿದ್ದೇನೆಂದು ಸುಳ್ಳು ಹೇಳಿ ಪೊಲೀಸರನ್ನು ದಂಗು ಬಡಿಸಿದ ಮದ್ಯ ವ್ಯಸನಿ ವೀರೇಶನ ವಿರುದ್ಧ ಹೊಸಹಳ್ಳಿ ಪೊಲೀಸರು 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.

ಕೂಡ್ಲಿಗಿ(ಏ.28):  ನಾನು ನನ್ನ ಮಗನಿಗೆ ಬೈಯುವಾಗ ಹೆಂಡತಿ ಮಗನ ಪರ ನಿಲ್ಲುತ್ತಾಳೆ. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿ ಬಂದಿದ್ದೇನೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ತೆರಳಿ, ಸುಳ್ಳು ಹೇಳಿ ಪೊಲೀಸರನ್ನೇ ದಂಗು ಬಡಿಸಿದ ಘಟನೆ ಕೂಡ್ಲಿಗಿ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಸ್ಥಳೀಯ ನಿವಾಸಿ ವೀರೇಶ (45) ಎಂಬಾತನೇ ಪೊಲೀಸರಿಗೆ ಸುಳ್ಳು ಹೇಳಿದಾತ. ಈತನ ಮಗ ಡಿಎಡ್ ಓದಿದ್ದು, ಮಗ ಹಾಗೂ ತಂದೆ ನಡುವೆ ಮನೆಯಲ್ಲಿ ಜಗಳ ನಡೆದಿದೆ. ಆಗ ಆತನ ಹೆಂಡತಿ ಮಗನ ಪರ ನಿಂತಿದ್ದಾಳೆ. ಪ್ರತಿದಿನ ತಂದೆ ಮದ್ಯ ಸೇವಿಸಿ ಮನೆಗೆ ಬಂದು ತಾಯಿಯನ್ನು ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದರಿಂದ ಮಗ ಬುದ್ದಿಮಾತು ಹೇಳಿದ್ದಾನೆ. ಹೆಂಡತಿ ಸಹ ಮಗನ ಪರ ವಹಿಸಿ ಮಾತನಾಡಿದ್ದಾಳೆ. ಇದರಿಂದ ಬೇಸತ್ತ ಈತ ಶುಕ್ರವಾರ ಕುಡಿದು ಬಂದು ಪತ್ನಿಯೊಂದಿಗೆ ಮತ್ತೆ ಜಗಳ ಮಾಡಿದ್ದಾನೆ. ನನಗೆ ನೀನು ಬೇಡ ಎಂದು, ನಿನ್ನ ವಿರುದ್ಧ ಠಾಣೆಗೆ ದೂರು ನೀಡುವೆ ಎಂದು ಕಾನಾಹೊಸಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಅಲ್ಲಿ ಕರ್ತವ್ಯನಿರತ ಪೊಲೀಸರಿಗೆ, 'ನಾನು ನನ್ನ ಹೆಂಡತಿಯನ್ನು ಕೊಲೆ ಮಾಡಿ ಬಂದಿದ್ದೇನೆ' ಎಂದು ತಿಳಿಸಿದ್ದಾನೆ. ಆ ಮಾತು ಕೇಳಿ ಕಾನಾಹೊಸಹಳ್ಳಿ ಪೊಲೀಸರು ದಂಗಾಗಿ ಹೋಗಿದ್ದಾರೆ.

ಕುಡುಕ ಯುವಕರಿಂದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷನ ಕಾರು ಅಡ್ಡಗಟ್ಟಿ ಕಿರಿಕ್; ಟಿಎಂಸಿ ಕೈವಾಡ ಆರೋಪ

ಈ ಹಿಂದೆ ಹೊಸಹಳ್ಳಿ ಠಾಣೆಯ ಕನ್ನಿಬೋರಯ್ಯನಹಟ್ಟಿ ಗ್ರಾಮದ ಫಾಗಲ್ ಪ್ರೇಮಿಯೊಬ್ಬ ಪ್ರೇಮಿಸಿದವಳ ರುಂಡವನ್ನೇ ಕಡಿದು ಪೊಲೀಸ್ ಠಾಣೆಗೆ ತಂದಿದ್ದ ಘಟನೆ ನಡೆದಿತ್ತು. ಈ ಘಟನೆ ಮರೆಯುವ ಮುನ್ನವೇ ಅದೇ ರೀತಿಯ ಪ್ರಕರಣ ಮರುಕಳಿಸಿದೆ ಎಂದು ತಿಳಿದು ಠಾಣೆಯಲ್ಲಿದ್ದ ಪೊಲೀಸರು ಅಲರ್ಟ್ ಆದರು. ಠಾಣೆಯಿಂದ ಆತನನ್ನು ಕರೆದುಕೊಂಡು ಆತನ ಸ್ವಗ್ರಾಮ ಹಾರಕಬಾವಿಗೆ ಪೊಲೀಸರು ತೆರಳಿದರು. ಅಲ್ಲಿಗೆ ತೆರಳಿ ನೋಡಿದರೆ, ಕೊಲೆಯಾಗಿದ್ದಾಳೆ ಎಂದು ಹೇಳಲಾದ ಮಹಿಳೆ ಮನೆಗೆ ನೀರು ತಂದು ಹಾಕುತ್ತಿದ್ದರು. ಇದನ್ನು ಕಂಡ ಪೊಲೀಸರಿಗೆ ದಿಗ್ಧಮೆಯಾಯಿತು. ಪೊಲೀಸರಿಗೆ ಸಿಟ್ಟುಮಾಡಿಕೊಳ್ಳಬೇಕೋ ಅಥವಾ ನಗಬೇಕೋ ಗೊತ್ತಾಗಲಿಲ್ಲ. 

ಕೇಸು ದಾಖಲು: 

ಕೊಲೆ ಮಾಡಿದ್ದೇನೆಂದು ಸುಳ್ಳು ಹೇಳಿ ಪೊಲೀಸರನ್ನು ದಂಗು ಬಡಿಸಿದ ಮದ್ಯ ವ್ಯಸನಿ ವೀರೇಶನ ವಿರುದ್ಧ ಹೊಸಹಳ್ಳಿ ಪೊಲೀಸರು 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.

click me!