ಚಿಕ್ಕಮಗಳೂರು: ಕಾಡು ಗೂಬೆಗಳ ಮಾರಾಟ, 7 ಮಂದಿ ಬಂಧನ

By Kannadaprabha NewsFirst Published Sep 29, 2019, 3:16 PM IST
Highlights

ಚಿಕ್ಕಮಗಳೂರಿನಲ್ಲಿ ಕಾಡುಗೂಬೆಗಳನ್ನು ಹಿಡಿದು ಮಾರಾಟ ಮಾಡಲು ಪ್ರಯತ್ನಿಸಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾದೇಶಿಕ ಅರಣ್ಯ ಇಲಾಖೆ ವಲಯಾರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ಶನಿವಾರ ಬೆಳಗಿನ ಜಾವ ದಾಳಿ ನಡೆಸಿ ಒಟ್ಟು 7 ಮಂದಿಯನ್ನು ಬಂಧಿಸಿದೆ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಚಿಕ್ಕಮಗಳೂರು(ಸೆ.29): ಬೇಟೆಗಾರರಿಗೆ ಈಗ ಗೂಬೆಗಳು ಸಹ ಬಲಿಯಾಗುತ್ತಿವೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಎರಡು ಭಾರೀ ಗಾತ್ರದ ಗೂಬೆಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸುತ್ತಿದ್ದುದು ಪತ್ತೆಯಾಗಿದೆ.

ಈ ಪ್ರಕರಣಗಳಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ವಲಯಾರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ಶನಿವಾರ ಬೆಳಗಿನ ಜಾವ ದಾಳಿ ನಡೆಸಿ ಒಟ್ಟು 7 ಮಂದಿಯನ್ನು ಬಂಧಿಸಿದೆ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿವೆ.

ಶನಿವಾರ ಬೆಳಗ್ಗೆ 3.30 ಗಂಟೆ ಹೊತ್ತಲ್ಲಿ ಬೇಲೂರು ಚಿಕ್ಕಮಗಳೂರು ರಸ್ತೆಯಲ್ಲಿ ಪಾಂಡುರಂಗ ಸಾಮಿಲ್‌ ಬಳಿ ರಿಟ್ಸ್‌ ಕಾರು ಹಾಗೂ ಹೋಂಡಾ ಬೈಕ್‌ನಲ್ಲಿ ಭಾರಿ ಗಾತ್ರದ ಜೀವಂತ ಕಾಡುಗೂಬೆಯೊಂದನ್ನು ತರುತ್ತಿದ್ದ ಹಾಸನ ನಗರ ತಣ್ಣೀರಳ್ಳದ ಚಂದನ್‌, ಚಿಕ್ಕಮಗಳೂರು ಅಂಡೆಛತ್ರದ ವಿಕಾಸ್‌ ಅಹಮ್ಮದ್‌, ನೂರಾಣಿ ಮಸೀದಿ ರಸ್ತೆಯ ವಸಂತಕುಮಾರ್‌, ಕುಶಾಲನಗರದ ಸಾಧಿಕ್‌ ಪಾಷಾ ಎಂಬವರನ್ನು ಅಡ್ಡಗಟ್ಟಿ, ಗೂಬೆಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ಅದೇ ರಸ್ತೆಯಲ್ಲಿ ಬೆಳಗ್ಗೆ 7 ಗಂಟೆಗೆ ಓರ್ವ ಮಹಿಳೆಯೂ ಸೇರಿದಂತೆ ಮೂರು ಮಂದಿ ಬೈಕ್‌ವೊಂದರಲ್ಲಿ ಕಾಡುಗೂಬೆಯೊಂದನ್ನು ತರುತ್ತಿದ್ದುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಹಗರೆಯ ಅಂಗಡಿಹಳ್ಳಿ ನಿವಾಸಿ ಸೋನಿಕುಮಾರ್‌, ಹಾಸನದ ಅಣ್ಣಪ್ಪ ಹಾಗೂ ಆಲೂರು ಹಂಪನಗುಪ್ಪೆಯ ವಿನೋದ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

ಈ ಎರಡೂ ಗುಂಪುಗಳು ಬಳಸುತ್ತಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಗೂಬೆಗಳನ್ನು ಜೀವಂತವಾಗಿ ರಕ್ಷಿಸಲಾಗಿದೆ. ಅಲ್ಲದೇ ಸದ್ಯದಲ್ಲೇ ಅವುಗಳನ್ನು ಕಾಡಿಗೆ ಬಿಡಲಾಗುವುದು. ಈ ಪ್ರಕರಣ ಭೇದಿಸುವಲ್ಲಿ ವಲಯಾರಣ್ಯಾಧಿಕಾರಿ ಶಿಲ್ಪಾ ಜೊತೆಗೆ ಉಪವಲಯ ಅರಣ್ಯಾಧಿಕಾರಿಗಳಾದ ವೆಂಕಟೇಶ್‌, ಸಂತೋಷ್‌, ಪ್ರದೀಪ್‌, ರವಿರಾಜ್‌, ಗೌತಮ್‌ ಹಾಗೂ ಅರಣ್ಯ ರಕ್ಷಕರಾದ ಶಿವರಾಜ್‌, ನಂದೀಶ್‌, ವಸಂತ, ನಾರಾಯಣ ಮತ್ತು ಚಾಲಕ ಮಹಮ್ಮದ್‌ ಗೌಸ್‌ ಭಾಗವಹಿಸಿದ್ದರು.

ಟ್ರಾಫಿಕ್ ಪೊಲೀಸ್ ಕಿರಿಕಿರಿ: ರಿಸಿಪ್ಟ್ ಕೇಳಿದ್ದಕ್ಕೆ ಬಿತ್ತು ಗೂಸಾ..!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ವನ್ಯಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುವ ಗುಂಪುಗಳು ಜಾಸ್ತಿಯಾಗುತ್ತಿವೆ. ಇತ್ತೀಚೆಗೆ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಗುಂಪೊಂದು ಪತ್ತೆಯಾಗಿತ್ತು. ಆಗಾಗ ಇಮ್ಮಂಡೆ ಹಾವುಗಳನ್ನು ಹಿಡಿದು ಮಾರಾಟ ಮಾಡುವ ಗುಂಪುಗಳು ಕಂಡುಬರುತ್ತಿವೆ. ಆದರೆ ಮೊದಲ ಬಾರಿಗೆ ಕಾಡುಗೂಬೆಗಳನ್ನು ಹಿಡಿದು ಮಾರುವ ತಂಡ ಪತ್ತೆಯಾಗಿದೆ.

ಈ ಗೂಬೆಗಳನ್ನು ಹಾಗೂ ಇನ್ನಿತರ ಕೆಲವು ವನ್ಯಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟಎಂಬ ಮೂಢನಂಬಿಕೆ ಈ ರೀತಿ ಬೇಟೆಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರೆ, ಅನೇಕ ಪ್ರಕರಣಗಳಲ್ಲಿ ಮಾಟ, ಮಂತ್ರಗಳಿಗೂ ಇವುಗಳನ್ನು ಬಳಸಲು ಲಕ್ಷಾಂತರ ರೂ. ನೀಡಿ ಖರೀದಿಸುವವರು ಇರುವುದರಿಂದ ಇಂತಹ ಗುಂಪುಗಳು ತಲೆ ಎತ್ತಲು ಕಾರಣವಾಗಿವೆ.

click me!