ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!

By Kannadaprabha NewsFirst Published Jun 24, 2022, 9:47 AM IST
Highlights

*   2024ರ ಬಳಿಕ ಹಲವು ಹೊಸ ರಾಜ್ಯ ರಚನೆ
*  ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಹೊಸ ರಾಜ್ಯಗಳು ನಿರ್ಮಾಣ
*  ಅಭಿವೃದ್ಧಿ ದೃಷ್ಟಿಯಲ್ಲಿ ನೂತನ ರಾಜ್ಯಗಳ ಸ್ಥಾಪನೆ ಉತ್ತಮ ನಿರ್ಧಾರ 

ಬೆಳ್ತಂಗಡಿ(ಜೂ.24): ಮುಂದಿನ 2024ರ ಲೋಕಸಭೆ ಚುನಾವಣೆ ಬಳಿಕ ದೇಶದಲ್ಲಿ ನೂತನ ರಾಜ್ಯಗಳನ್ನು ಸ್ಥಾಪಿಸುವ ಬಗ್ಗೆ ಪ್ರಧಾನಿ ಚಿಂತನೆ ನಡೆಸಿದ್ದಾರೆ. ಇದರಿಂದ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಹೊಸ ರಾಜ್ಯಗಳು ನಿರ್ಮಾಣವಾಗಲಿವೆ ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬಡಕೋಡಿಗೆ ಗುರುವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಭಿವೃದ್ಧಿ ದೃಷ್ಟಿಯಲ್ಲಿ ನೂತನ ರಾಜ್ಯಗಳ ಸ್ಥಾಪನೆ ಉತ್ತಮ ನಿರ್ಧಾರ. ರಾಜ್ಯಗಳ ಜನಸಂಖ್ಯೆಆಧಾರದಲ್ಲಿ ವಿಂಗಡಣೆ ನಡೆಯಬಹುದು. ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣ ಆಗುವುದರಲ್ಲಿ ತಪ್ಪಿಲ್ಲ. ಕರ್ನಾಟಕದಲ್ಲಿ 2.5 ಕೋಟಿ ಇದ್ದ ಜನಸಂಖ್ಯೆ ಈಗ 6.5 ಕೋಟಿ ಆಗಿದೆ. ಇದೇ ರೀತಿಯಾಗಿ ಉತ್ತರ ಪ್ರದೇಶವು ನಾಲ್ಕು ರಾಜ್ಯಗಳಾಗಿ, ಮಹಾರಾಷ್ಟ್ರ ಮೂರು ರಾಜ್ಯಗಳಾಗಿ, ಕರ್ನಾಟಕ ಎರಡು ರಾಜ್ಯಗಳಾಗಿ ವಿಂಗಡಿಸುವ ಬಗ್ಗೆ ಸ್ವತಃ ಪ್ರಧಾನ ಮಂತ್ರಿಗಳೇ ಚಿಂತಿಸಿದ್ದಾರೆ. ಉತ್ತರ ಕರ್ನಾಟಕದ ಶಾಸಕರಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಮುಖ್ಯಮಂತ್ರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದು ಮುಂದೆಯೂ ಮಾಡುತ್ತೇನೆ. ಪ್ರತ್ಯೇಕ ರಾಜ್ಯವನ್ನು ಸ್ವಾಗತಿಸುತ್ತೇನೆ. ಪ್ರತ್ಯೇಕ ರಾಜ್ಯ ವಿಂಗಡಣೆ ತಪ್ಪಿಲ್ಲ ಎಂದರು.

ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬಿಜೆಪಿಗರಿಂದಲೇ ಆಕ್ಷೇಪ

ಮೋದಿ ಸ್ಪಷ್ಟನೆ ನೀಡಲಿ

ರಾಜ್ಯ ಇಬ್ಭಾಗಕ್ಕೆ ಪ್ರಧಾನಿ ಮೋದಿ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ ಎಂಬ ಸಚಿವ ಕತ್ತಿ ಹೇಳಿಕೆ ಆಘಾತಕಾರಿ. ಈ ಬಗ್ಗೆ ಮೋದಿಯೇ ಸ್ಪಷ್ಟನೆ ನೀಡಬೇಕು. ಕತ್ತಿ ಸುಳ್ಳು ಹೇಳಿದ್ದರೆ ಅವರನ್ನು ವಜಾಗೊಳಿಸಬೇಕು ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 
 

click me!