ವೈರಸ್‌ ಹಾವಳಿ, ಸದ್ಯ ಮಠ-ಮಂದಿರಕ್ಕೆ ಬರಬೇಡಿ..!

By Kannadaprabha NewsFirst Published Jul 11, 2020, 12:12 PM IST
Highlights

ಭಕ್ತರು ಮುಂದೆ ತಾವು ಸೂಚಿಸುವವರೆಗೂ ಮಠಗಳಿಗಾಗಲೀ, ತಮ್ಮ ದರ್ಶನಕ್ಕಾಗಲೀ ಬರಬಾರದು. ಭಕ್ತರು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು ಎಂದು ದಾವಣಗೆರೆ ಜಿಲ್ಲೆಯ ಮಠದ ಸ್ವಾಮೀಜಿಗಳಿ ಭಕ್ತರಿಗೆ ಕಿವಿ ಮಾತುಗಳನ್ನು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಜು.11): ದಿನ ದಿನಕ್ಕೂ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ ಕೆಲ ಮಠ, ಮಂದಿರಗಳಲ್ಲಿ ದೇವರ ದರ್ಶನ, ಗುರುಗಳ ಆಶೀರ್ವಾದ ಇರುವುದಿಲ್ಲವೆಂಬ ಸಂದೇಶ ಭಕ್ತರಿಗೆ ರವಾನಿಸಲಾಗಿದೆ. ಮತ್ತೆ ವೈರಸ್‌ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಮುಂಜಾಗ್ರತೆಯಾಗಿ ಧಾರ್ಮಿಕ ಕ್ಷೇತ್ರಗಳು, ಮಠ ಮಾನ್ಯಗಳು ಇಂತಹದ್ದೊಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಭಕ್ತರ ಆರೋಗ್ಯ, ಹಿತ ಕಾಯಲು ಮುಂದಾಗಿವೆ.

ಹರಿಹರ ತಾ. ಬೆಳ್ಳೂಡಿ ಗ್ರಾಮದ ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹಾವೇರಿ ಜಿಲ್ಲೆ ಕಾಗಿನೆಲೆ, ಹರಿಹರ ತಾ. ಬೆಳ್ಳೂಡಿ, ಬಳ್ಳಾರಿ ಜಿಲ್ಲೆ ಮೈಲಾರದ ಕನಕ ಪೀಠಗಳಲ್ಲಿ ಯಾವುದೇ ರೀತಿಯ ದರ್ಶನ, ಆಶೀರ್ವಾದ ಇರುವುದಿಲ್ಲವೆಂಬ ಸಂದೇಶ ಸಾರಿದ್ದಾರೆ.

43% ಮಧ್ಯ ವಯಸ್ಕರು ಕೊರೋನಾಗೆ ಬಲಿ!

ಭಕ್ತರು ಸಹ ಮುಂದೆ ತಾವು ಸೂಚಿಸುವವರೆಗೂ ಮಠಗಳಿಗಾಗಲೀ, ತಮ್ಮ ದರ್ಶನಕ್ಕಾಗಲೀ ಬರಬಾರದು. ಭಕ್ತರು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು. ಕೊರೋನಾ ಹಾವಳಿ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಮಾಸ್ಕ್‌ ಕಡ್ಡಾಯವಾಗಿ ಧರಿಸಲು, ಸ್ಯಾನಿಟೈಸರ್‌ ಬಳಸಲು, ಅನಾವಶ್ಯಕ ಸುತ್ತಾಟ ಮಾಡದಂತೆ ಅವರು ಕಿವಿಮಾತು ಸಹ ಹೇಳಿದ್ದಾರೆ.

ಉಕ್ಕಡಗಾತ್ರಿ ಕ್ಷೇತ್ರಕ್ಕೆ ಸದ್ಯ ಬರಲೇಬೇಡಿ....

ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ತಟದ ಹರಿಹರ ತಾ. ಉಕ್ಕಡಗಾತ್ರಿ ಸುಕ್ಷೇತ್ರದಲ್ಲೂ ಕರಿಬಸವೇಶ್ವರ ಅಜ್ಜನ ಗದ್ದುಗೆ, ದೇವಸ್ಥಾನದಲ್ಲಿ ದರ್ಶನ ಸೇವೆಯನ್ನು ಸ್ಥಗಿತಗೊಳಿಸಲಾಗದೆ. ಹರಿಹರ ತಾಲೂಕಿನ ಕೆಲ ಪ್ರದೇಶಗಳಲ್ಲಿ ಕೊರೋನಾ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ದರ್ಶನ ಸ್ಥಗಿತಕ್ಕೆ ದೇವಸ್ಥಾನ ಸಮಿತಿ ಕ್ರಮ ಕೈಗೊಂಡಿದೆ. ಕೊರೋನಾ ನಿಯಂತ್ರಣಕ್ಕೆ ಬರುವ ತನಕ ಕರಿಬಸವೇಶ್ವರ ಸ್ವಾಮಿಯ ಗದ್ದುಗೆಯ ದರ್ಶನಕ್ಕೆ ಅವಕಾಶ ಇಲ್ಲ. ಯಾರೂ ಸಹ ಉಕ್ಕಡಗಾತ್ರಿ ಸುಕ್ಷೇತ್ರಕ್ಕೆ ಬರಬೇಡಿ ಎಂದು ಗದ್ದುಗೆ ಟ್ರಸ್ಟ್‌ ಕಾರ್ಯದರ್ಶಿ ಸುರೇಶ್‌ ಇತರರು ತಿಳಿಸಿದ್ದಾರೆ.
 

click me!