ಈ ಊರಲ್ಲಿ ಹದಗೆಟ್ಟ ರಸ್ತೆಯಲ್ಲಿಯೇ ಬತ್ತದ ನಾಟಿ ಮಾಡ್ತಾರೆ!

By Web DeskFirst Published Oct 4, 2019, 8:45 AM IST
Highlights

ರಸ್ತೆಯಲ್ಲಿ ಬತ್ತ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ಜನತೆ|  ಹೊಸಳ್ಳಿ ಮುಖ್ಯ ರಸ್ತೆಯು ಡಾ. ಮಧುಸೂದನ್‌ ಮನೆಯಿಂದ ನಗರಸಭೆಯ ವ್ಯಾಪ್ತಿಯವರೆಗೂ ಸಂಪೂರ್ಣವಾಗಿ ಹದಗೆಟ್ಟ ರಸ್ತೆ| ಈ ರಸ್ತೆಯ ಮೇಲೆ ಬತ್ತ ನಾಟಿ ಮಾಡುವುದರ ಮೂಲಕ ವಾರ್ಡಿನ ಸದಸ್ಯ ಎಫ್‌. ರಾಘವೇಂದ್ರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು| ಹಲವು ವರ್ಷಗಳ ಹಿಂದೆಯೇ ಈ ರಸ್ತೆ ತುಂಬಾ ಹದಗೆಟ್ಟಿದ್ದು|ಪೂರ್ಣ ಪ್ರಮಾಣದಲ್ಲಿ ತಗ್ಗು- ಗುಂಡಿಗಳಿಂದ ಕೂಡಿದೆ| ಈ ರಸ್ತೆಯಲ್ಲಿ ಶಾಲೆಗಳು ಇರುವುದರಿಂದ ಶಾಲಾ ಮಕ್ಕಳು ಸೈಕಲ್‌ ಸವಾರಿ ಮಾಡುವ ಸಂದರ್ಭದಲ್ಲಿ ಅನೇಕ ಮಕ್ಕಳು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ|
 

ಗಂಗಾವತಿ[ಅ.4] ನಗರಸಭೆ ವ್ಯಾಪ್ತಿಯ 28ನೇ ವಾರ್ಡ್‌ನಲ್ಲಿ ಬರುವ ಹೊಸಳ್ಳಿ ಮುಖ್ಯ ರಸ್ತೆಯು ಡಾ. ಮಧುಸೂದನ್‌ ಮನೆಯಿಂದ ನಗರಸಭೆಯ ವ್ಯಾಪ್ತಿಯ ವರೆಗೂ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆಯ ಮೇಲೆ ಬತ್ತ ನಾಟಿ ಮಾಡುವುದರ ಮೂಲಕ ವಾರ್ಡಿನ ಸದಸ್ಯ ಎಫ್‌. ರಾಘವೇಂದ್ರ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಸದಸ್ಯ ಎಫ್‌. ರಾಘವೇಂದ್ರ ಅವರು, ಹಲವು ವರ್ಷಗಳ ಹಿಂದೆಯೇ ಈ ರಸ್ತೆ ತುಂಬಾ ಹದಗೆಟ್ಟಿದ್ದು, ಪೂರ್ಣ ಪ್ರಮಾಣದಲ್ಲಿ ತಗ್ಗು- ಗುಂಡಿಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಶಾಲೆಗಳು ಇರುವುದರಿಂದ ಶಾಲಾ ಮಕ್ಕಳು ಸೈಕಲ್‌ ಸವಾರಿ ಮಾಡುವ ಸಂದರ್ಭದಲ್ಲಿ ಅನೇಕ ಮಕ್ಕಳು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ರಸ್ತೆಯು ಹೊಸಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದ್ದು, ಹಾಗೂ ಕಂಪ್ಲಿ ಬೈಪಾಸ್‌ ರಸ್ತೆಯಾಗಿದೆ. ಹೊಸಳ್ಳಿ ಗ್ರಾಮದ ಸಾರ್ವಜನಿಕರು ರಾತ್ರಿಯ ಸಮಯದಲ್ಲಿ ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಗೂ ಯುಜಿಡಿ ಕಾಮಗಾರಿಗಳ ಅಡಿಯಲ್ಲಿ ಡ್ರೈನೇಜ್‌ಗಾಗಿ ಎಲ್ಲೆಂದರಲ್ಲಿ ತಗ್ಗು- ಗುಂಡಿಗಳನ್ನು ತೆಗೆದು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಹಾಗೂ ಕೊಪ್ಪಳ ಜಲಮಂಡಳಿಯವರ 24/7 ನೀರು ಸರಬರಾಜು ಯೋಜನೆಯೂ ಕೂಡ ಈ ರಸ್ತೆಯಲ್ಲಿ ಪೂರ್ಣಗೊಂಡಿರುವುದಿಲ್ಲ. ಈ ರಸ್ತೆಯ ಅಭಿವೃದ್ಧಿಗಾಗಿ ನಗರಸಭೆ ಪೌರಾಯುಕ್ತರಿಗೆ, ಯುಜಿಡಿ ಕಾಮಗಾರಿ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಮತ್ತು ಕೊಪ್ಪಳ ಜಲಮಂಡಳಿಯವರಿಗೂ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಇಲ್ಲಿಯ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿಯಲ್ಲಿ 2017-18ನೇ ಸಾಲಿನಲ್ಲಿಯೇ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರಿಂದ ಮಂಜೂರಾದ 1 ಕೋಟಿ ಅನುದಾನದಲ್ಲಿ ಮುಂಬರುವ ಒಂದು ತಿಂಗಳೊಳಗಾಗಿ ಗುಣಮಟ್ಟದ ರಸ್ತೆಯನ್ನಾಗಿ ಪುನರ್‌ ನಿರ್ಮಿಸಿ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸರ್ವೇಶ್‌ ಹಿರೇಮಠ, ಆನಂದ ಸಾರಂಗಮಠ, ವೀರಭದ್ರಗೌಡ, ಎಂ. ಮಲ್ಲಪ್ಪ, ಆನಂದ ಲಂಕಿ, ಜಯರಾಮ, ಬಸವರಾಜ, ವೆಂಕಟೇಶ ಇ, ಶಿವರಾಜ ಹೊಸಳ್ಳಿ, ಮಂಜುನಾಥ ದೇವರಮನಿ, ಆಸಿಫ್‌ ಅಹ್ಮದ್‌, ವೆಂಕಟರಾವ್‌, ಎನ್‌. ಶರಣಪ್ಪ ಮೆಟ್ರಿ, ಬಾಬುಸಾಬ್‌ ಅತ್ತಾರ್‌, ಪ್ರಲ್ಹಾದರಾವ್‌, ವೀರೇಶ ಇಲ್ಲೂರು, ಶಿವನಗೌಡ ಪಾಟೀಲ್‌ ಹಾಗೂ ಮತ್ತಿತರರು ಭಾಗವಹಿಸಿದ್ದರು.

click me!