ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಜಾಗದಲ್ಲಿ ಪೆಟ್ರೋಲ್ ಬಾಂಬ್

By Kannadaprabha NewsFirst Published Jan 12, 2020, 8:40 AM IST
Highlights

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿದ್ದು, ಸಮ್ಮೇಳನಲ್ಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಇದೇ ವೇಳೆ ಆತಂಕಕಾರಿ ವಿಚಾರ ಒಂದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

ಚಿಕ್ಕಮಗಳೂರು[ಜ.12]:  ಜಿಲ್ಲೆಯ ಶೃಂಗೇರಿಯಲ್ಲಿ ಪೆಟ್ರೋಲ್‌ ಬಾಂಬ್‌ ತಯಾರಿಸಲು ಬಳಸುತ್ತಿದ್ದ ಕಚ್ಚಾ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಲು ಪ್ಲಾನ್‌ ಮಾಡಿರುವುದನ್ನು ಪೊಲೀಸರು ನಿಷ್ಕ್ರೀಯಗೊಳಿಸಿರುವ ಸ್ಫೋಟಕ ಮಾಹಿತಿ ಶನಿವಾರ ಹೊರಬಿದ್ದಿದೆ.

ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೆ, ಹೊರಭಾಗದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅಶಾಂತಿ ಉಂಟುಮಾಡಲು ಇಲ್ಲಿಗೆ ಸಮೀಪದಲ್ಲಿರುವ ಕಟ್ಟಡವೊಂದರ ಬಳಿ ಪೆಟ್ರೋಲ್‌ ಬಾಂಬ್‌ ತಯಾರಿಕೆ ನಡೆಯುತ್ತಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ತಂಡದಲ್ಲಿ ಯುವಕರು ಪರಾರಿಯಾಗಿದ್ದು, ಅವರು ಪೆಟ್ರೋಲ್‌ ಬಾಂಬ್‌ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳಾದ ಪೆಟ್ರೋಲ್‌, ಖಾಲಿ ಬಾಟಲಿ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚುವ ಕಿಡಿಗೇಡಿಗಳು ಟೈರ್‌ಗಳನ್ನು ಸಂಗ್ರಹ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಈ ಪ್ರಯತ್ನವನ್ನು ಸಹ ಪೊಲೀಸರು ವಿಫಲಗೊಳಿಸಿದ್ದಾರೆ. ಈ ಎರಡು ಕಾರಣಗಳನ್ನು ನೀಡಿ ಶೃಂಗೇರಿ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರು ಕೊಟ್ಟಿರುವ 3ನೇ ನೋಟಿಸ್‌ ಆಧಾರದ ಮೇಲೆ ಸಮ್ಮೇಳನವನ್ನು ಒಂದೇ ದಿನಕ್ಕೆ ಮೊಟಕುಗೊಳಿಸಲಾಗಿದೆ.

ಚಿಕ್ಕಮಗಳೂರು ಅಕ್ಷರ ಜಾತ್ರೆ: ಹಣ ಕೊಡದ ಸರ್ಕಾರ, ಕೈ ಬಿಡದ ಶೃಂಗೇರಿ ಮಠ..

ನೋಟೀಸ್‌ನಲ್ಲಿ ಏನಿದೆ?:  ಶೃಂಗೇರಿ ವೃತ್ತ ನಿರೀಕ್ಷಕರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಕೊಟ್ಟಿರುವ ನೋಟಿಸ್‌ನಲ್ಲಿರುವ ಪ್ರಮುಖಾಂಶಗಳು. ಹಲವು ಕಾರಣದಿಂದಾಗಿ ಸಮ್ಮೇಳವನ್ನು ಮುಂದೂಡುವಂತೆ ತಿಳಿಸಲಾಗಿತ್ತು. 2 ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು. ಧ್ವನಿವರ್ಧಕ ಬಳಸದಂತೆ ಸೂಚನೆ ನೀಡಲಾಗಿತ್ತು. ಇದನ್ನು ಮೀರಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿ 2-3 ಗುಂಪುಗಳು ಪ್ರತಿಭಟನೆ ಹಾಗೂ ಅಕ್ರಮ ಸಭೆಗೆ ಪ್ರವೇಶಿಸಲು ಪ್ರಯತ್ನ ಪಟ್ಟಿದ್ದರು. ಈ ಸಂಬಂಧ 90 ಜನರನ್ನು ವಶಕ್ಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನಗರದ ಹಲವು ಕಡೆ ಟೈರ್‌ಗೆ ಬೆಂಕಿ ಹಚ್ಚಲು, ಪೆಟ್ರೋಲ್‌ ಬಾಂಬ್‌ ಬಳಸುವುದು ಮಾಹಿತಿ ಬಂದಿದ್ದರಿಂದ ತಕ್ಷಣವೇ ಅವುಗಳನ್ನೆಲ್ಲ ನಿಲ್ಲಿಸಿ ಕಾನೂನು ಸುವ್ಯವಸ್ಥೆಗೆ ಕಷ್ಟಕರ ಮತ್ತು ಉದ್ವಿಘ್ನ ಸ್ಥಿತಿ ಇದ್ದರೂ ಕೂಡ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ನಿಮ್ಮ ಅಕ್ರಮ ಸಭೆಯನ್ನು ವಿರೋಧಿಸುವ ಜಿಲ್ಲೆಯಲ್ಲಿರುವ ವ್ಯಕ್ತಿಗಳು ಶೃಂಗೇರಿ ನಗರವನ್ನು ಬಂದ್‌ ಮಾಡಿ, ಸಾವಿರಾರು ಜನರು ಬಂದು ಅಕ್ರಮ ಸಭೆಯನ್ನು ತಡೆಯುವ ಸಾಧ್ಯತೆಯನ್ನು ಕಂಡುಬಂದಿದೆ. ಆದ್ದರಿಂದ ಸಮ್ಮೇಳನವನ್ನು ಮುಂದೂಡುವಂತೆ ಕೋರಿಕೊಂಡಿದ್ದರು.

click me!