
ಕಲಬುರಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸ್ವತಃ ಶ್ರೀರಾಮಚಂದ್ರನೇ ಪ್ರತ್ಯಕ್ಷವಾಗಿ ಎಲ್ಲರ ಗಮನ ಸೆಳೆದ ಘಟನೆ ನಡೆದಿದೆ. ಹೌದು, ಕೈಯಲ್ಲಿ ಬಾಣ.. ಬೆನ್ನಿಗೆ ಬತ್ತಳಿಕೆ ನೋಡಿದರೆ ಸಾಕು ಇದು ಶ್ರೀರಾಮಚಂದ್ರನೇ ಅಂತ ಯಾರಾದರೂ ಗುರುತಿಸುವ ರೂಪ. ಆದರೆ ಈ ಶ್ರೀರಾಮಚಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ಅಹವಾಲು ಸ್ವೀಕಾರ ಸಭೆಯಲ್ಲಿ ಸರದಿಯಲ್ಲಿ ಬಂದು ತಮಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಳ್ಳಲಾರಂಭಿಸಿದಾಗ ಇಡೀ ಸಭೆಯೇ ಅಚ್ಚರಿಯಿಂದ ನೋಡುತ್ತಿತ್ತು.
ಹಗಲು ವೇಷ ಧರಿಸಿಯೇ ಜೀವನ ನಡೆಸುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಆಗಮಿಸಿದ ವ್ಯಕ್ತಿಯೊಬ್ಬ, ತಮ್ಮ ನಿತ್ಯ ಕಾಯಕದ ಶ್ರೀರಾಮನ ಹಗಲು ವೇಷದಲ್ಲಿಯೇ ಸಚಿವರ ಸಭೆಗೆ ಬಂದು ಗಮನ ಸೆಳೆದರು. ತಮ್ಮ ಜಮೀನು ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದಾರೆ, ದಯಮಾಡಿ ಬಿಡಿಸಿಕೊಡಿ ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
ಯಾವುದೇ ಲಿಖಿತ ಮನವಿ ಇಲ್ಲದಿದ್ದದನ್ನು ಗಮನಿಸಿದ ಸಚಿವರು, ಸ್ಥಳದಲ್ಲೇ ಮನವಿ ಬರೆದು ಪತ್ರ ಬರೆದು ಕೊಡಿ ಎಂದು ಸಲಹೆ ನೀಡಿದರು. ಒಟ್ಟಾರೆ ಶ್ರೀರಾಮಚಂದ್ರ ವೇಷಧಾರಿಯ ಅಹವಾಲು ಸಲ್ಲಿಕೆ ಪ್ರಿಯಾಂಕ್ ಖರ್ಗೆ ಅವರ ಸಭೆಯಲ್ಲಿ ತೀವ್ರ ಗಮನ ಸೆಳೆಯಿತು.
ಇನ್ನು, ಮುಂಗಾರು ಮಳೆಯ ಕೊರತೆಯಿಂದ ಹಾನಿಗೊಳಗಾಗಿರುವ ಬೆಳೆ ಪ್ರದೇಶಗಳನ್ನು ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, 224 ಶಾಸಕ ಪೈಕಿ ಕೇವಲ ಶೇಕಡಾ 15 ಮಂದಿಗೆ ಮಾತ್ರ ಸ್ಥಾನ ನೀಡಲು ಅವಕಾಶವಿದೆ. ಕಾಂಗ್ರೆಸ್ ಪಕ್ಷದ 135 ಶಾಸಕರಲ್ಲಿ ಯಾರಿಗೆ ಸಚಿವ ಮಾಡಬೇಕು ಎಂಬುವುದು ಸಿಎಂ ಅವರಿಗೆ ಸವಾಲಿನ ಕೆಲಸ. ನನಗೆ ಗೃಹ ಸಚಿವರ ಜವಾಬ್ದಾರಿ ನೀಡಲಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಒಂದೊಮ್ಮೆ ನಿಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಎಂದು ಹೇಳಿದರು.