ಹಂಪಿ ಉತ್ಸವದಲ್ಲಿ ಜನರ ಕೊರತೆ: ಎಲ್ಲರಿಗೂ ಅವಕಾಶ ಕಲ್ಪಿಸಿದ ಜಿಲ್ಲಾಡಳಿತ

By Kannadaprabha NewsFirst Published Jan 28, 2023, 12:25 PM IST
Highlights

ಪಿ ಉತ್ಸವದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನ ಬಾರದನ್ನು ಕಂಡು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ನಮ್ಮ ಲೋಪ-ದೋಷ ಎರಡನೇ ದಿನ ಮತ್ತು ಮೂರನೆ ದಿನ ತಿದ್ದುಕೊಳ್ಳುತ್ತೇವೆ. ಈ ಬಗ್ಗೆ ಜಿಲ್ಲಾಡಳಿತದ ಜತೆಗೆ ಚರ್ಚಿಸುವೆ ಎಂದು ಉದ್ಘಾಟನಾ ಕಾರ್ಯಕ್ರಮದ ಭಾಷಣದಲ್ಲೇ ಉಲ್ಲೇಖಿಸಿದರು!

ಕೃಷ್ಣ ಎನ್‌. ಲಮಾಣಿ

ಹಂಪಿ(ಗಾಯತ್ರಿ ಪೀಠ ವೇದಿಕೆ): (ಜ.28) : ಹಂಪಿ ಉತ್ಸವದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನ ಬಾರದನ್ನು ಕಂಡು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ನಮ್ಮ ಲೋಪ-ದೋಷ ಎರಡನೇ ದಿನ ಮತ್ತು ಮೂರನೆ ದಿನ ತಿದ್ದುಕೊಳ್ಳುತ್ತೇವೆ. ಈ ಬಗ್ಗೆ ಜಿಲ್ಲಾಡಳಿತದ ಜತೆಗೆ ಚರ್ಚಿಸುವೆ ಎಂದು ಉದ್ಘಾಟನಾ ಕಾರ್ಯಕ್ರಮದ ಭಾಷಣದಲ್ಲೇ ಉಲ್ಲೇಖಿಸಿದರು!

ಗಾಯತ್ರಿ ಪೀಠದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಹಂಪಿ ಉತ್ಸವಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಬಂದಿಲ್ಲ. ವಿಜಯನಗರ ಜಿಲ್ಲಾಡಳಿತದಿಂದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆದರೂ ಜನರು ಬಂದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಹಂಪಿ ಉತ್ಸವಕ್ಕೆ ಕೆಲ ನಿರ್ಬಂಧಗಳಿವೆ. ಇದು, ಸ್ಮಾರಕಗಳ ತವರೂರು. ಕೆಲ ನಿಯಮ ಪಾಲನೆಯೊಂದಿಗೆ ಉತ್ಸವ ನಡೆಸಬೇಕಾಗುತ್ತದೆ. ಹಾಗಾಗಿ ಇಲ್ಲಿ, ನಿರೀಕ್ಷಿತ ಮಟ್ಟದಲ್ಲಿ ಜನ ಬರಲು ಆಗಿಲ್ಲ. ನಾವು ಈ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸುತ್ತೇವೆ. ಇನ್ನೂ ಜನರು ಹೆಚ್ಚಿನ ಮಟ್ಟದಲ್ಲಿ ಬರಲು ಕೆಲ ನಿರ್ಬಂಧ ಸಡಿಸಲಾಗುವುದು ಎಂದರು.

Hampi Utsav: ಹಂಪಿ ಉತ್ಸವಕ್ಕೆ ಮೆರುಗು ನೀಡಿದ ಫಲಪುಷ್ಪ ಪ್ರದರ್ಶನ

ಇನ್ನೂ ಉತ್ಸವದಲ್ಲಿ ನಾಲ್ಕು ವೇದಿಕೆ ನಿರ್ಮಿಸಲಾಗಿದೆ. ಜತೆಗೆ ಪುಸ್ತಕ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಎದುರು ಬಸವಣ್ಣ ವೇದಿಕೆ ಬಳಿ ನಡೆಯುತ್ತಿದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜನರು ಇತ್ತ ಕಡೆ ಬಂದಿಲ್ಲ ಎಂದು ಹೇಳುತ್ತಾರೆ. ಇದು ಒಂದು ಕಾರಣ ಇರಬಹುದು ಎಂದರು.

ಗೋಪಾಲಕೃಷ್ಣ ಸಲಹೆ:

ಆನಂದ ಸಿಂಗ್‌ ಈ ರೀತಿ ಮಾತನಾಡುತ್ತಿದ್ದಂತೆ ಹಿರಿಯ ಶಾಸಕ ಎನ್‌.ವೈ. ಗೋಪಾಲಕೃಷ್ಣ, ಸಿಂಗ್‌ರ ಬಳಿ ಆಗಮಿಸಿ, ಜನರು ಎದುರು ಬಸವಣ್ಣ ವೇದಿಕೆ ಬಳಿಯೂ ಇದ್ದಾರೆ ಎಂದು ಸಲಹೆ ನೀಡಿದರು. ಬಳಿಕ ಆನಂದ ಸಿಂಗ್‌ ಅವರು ತಮ್ಮ ಭಾಷಣದ ವರಸೆ ಬದಲಿಸಿದರು.

ಜಗತ್ತಿನ ಅತಿ ದೊಡ್ಡ ಎರಡನೆ ಸಾಮ್ರಾಜ್ಯ:

ರೋಮ್‌ ಸಾಮ್ರಾಜ್ಯದ ಬಳಿಕ ಜಗತ್ತಿನ ದೊಡ್ಡ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಆಗಿದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ಕಾರ್ಯ ಹಂಪಿ ಉತ್ಸವದ ಮೂಲಕ ಮಾಡಲಾಗುವುದು ಎಂದು ಆನಂದ ಸಿಂಗ್‌ ತಮ್ಮ ಭಾಷಣದಲ್ಲಿ ಹೇಳಿದರು.

ಸಚಿವದ್ವಯರಲ್ಲಿ ಅಸಮಾಧಾನ ಇಲ್ಲ ಸಿಎಂ:

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಚಿವ ಆನಂದ ಸಿಂಗ್‌ ಹಾಗೂ ಶಶಿಕಲಾ ಜೊಲ್ಲೆ ಅವರ ನಡುವಿನ ಅಸಮಾಧಾನವೇ ಜನರು ಉತ್ಸವದತ್ತ ಬರಲು ಹಿಂದೇಟು ಹಾಕಿದ್ದಾರೆಯೇ? ಎಂದು ಸುದ್ದಿಗಾರರು ಕೇಳಿದಾಗ, ಸಚಿವರಲ್ಲಿ ಅಸಮಾಧಾನ ಇಲ್ಲ. ನೀವು ಸೃಷ್ಟಿಮಾಡಬೇಡಿ. ಈಗಷ್ಟೇ ಚಾಲನೆ ನೀಡಲಾಗಿದೆ. ಜನರು ಉತ್ಸವ ನೋಡಲು ಬರುತ್ತಾರೆ ಎಂದು ಸಮಜಾಯಿಷಿ ನೀಡಿದರು.

ಸಚಿದ್ವಯರ ಅಸಮಾಧಾನದ್ದೇ ಚರ್ಚೆ!

ಈ ಬಾರಿ ಹಂಪಿ ಉತ್ಸವದಲ್ಲಿ ಸಚಿವರಾದ ಆನಂದ ಸಿಂಗ್‌ ಹಾಗೂ ಶಶಿಕಲಾ ಜೊಲ್ಲೆ ನಡುವೆ ಸಮನ್ವಯತೆ ಕೊರತೆ ಉಂಟಾಗಿದೆ. ಹಾಗಾಗಿ ಜನ ಬಂದಿಲ್ಲ. ಕಾಟಾಚಾರದ ಉತ್ಸವ ನಡೆಸಲಾಗುತ್ತಿದೆ ಎಂಬುದರ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಪುಷ್ಟಿನೀಡುವಂತೇ ಆನಂದ ಸಿಂಗ್‌ ತಮ್ಮ ಭಾಷಣದಲ್ಲೇ ಜನರ ಕೊರತೆ ಬಗ್ಗೆ ಉಲ್ಲೇಖಿಸಿದರು.

ಗಾಯತ್ರಿ ಪೀಠದ ಮುಖ್ಯವೇದಿಕೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ವಿಜಯನಗರ ಕಾಲದಲ್ಲಿ ಬಳ್ಳದಲ್ಲಿ ವಜ್ರ, ವೈಢೂರ್ಯ ಮಾರಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದಲ್ಲಿ ರೈತರು, ಮಹಿಳೆಯರು ಮತ್ತು ಪ್ರಜೆಗಳಿಗೆ ಗೌರವ ಮನ್ನಣೆ ಇತ್ತು. ಮುಂದಿನ ಪೀಳಿಗೆಗೆ ಇದನ್ನು ಮನವರಿಕೆ ಮಾಡಲಾಗುವುದು. ಹಂಪಿಯ ಗತ ವೈಭವ ಮರುಕಳಿಸುವ ಮಾದರಿ ಉತ್ಸವ ನಡೆಸಲಾಗುತ್ತಿದೆ ಎಂದರು.

ವಿಜಯನಗರ : ಹ‌ಂಪಿ ಉತ್ಸವಕ್ಕೆ ಬರೋ ಜನರಿಗೆ ಇಂದು ಮುಕ್ತ ಅವಕಾಶ

ಇಂದು ನಾಳೆ ನಡೆಯುವ ಹಂಪಿ ಉತ್ಸವದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ ಇರಲಿದೆ. ಸಾರ್ವಜನಿಕರು ಭಾಗವಹಿಸುವಂತೆ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

Hampi Utsav: ಹಂಪಿ ಆಗಸದಲ್ಲಿ ಲೋಹದ ಹಕ್ಕಿಯ ಹಾರಾಟ!

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ಪಾಸ್ ಅವಶ್ಯಕತೆ ಇಲ್ಲ. ಎಲ್ಲಾ ವೇದಿಕೆಗಳಲ್ಲಿನ ಆಸನಗಳಿಗೆ ಕಾಯ್ದಿರುಸುವಿಕೆ ಇರುವುದಿಲ್ಲ. ಸಾರ್ವಜನಿಕರು ಮುಕ್ತವಾಗಿ  ಭಾಗವಹಿಸಬಹುದಾಗಿದೆ.  ಸರಿಯಾದ ಮಾಹಿತಿ ಇಲ್ಲದೆ ಹಂಪಿ ಉತ್ಸವದ ಮೊದಲ ದಿನವಾದ ನಿನ್ನೆ ಜನ ಬಂದಿರಲಿಲ್ಲ. ಕುರ್ಚಿಗಳು ಖಾಲಿ, ಖಾಲಿಯಾಗಿದ್ದವು.  ಹೀಗಾಗಿ ಇಂದು ಎಲ್ಲ ಕಾರ್ಯಕ್ರಮಗಳಿಗೆ ವಿಜಯನಗರ ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

click me!