ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೂತ್ರ ವಿಸರ್ಜನೆಗೆ ಬಯಲೇ ಗತಿ..!

By Kannadaprabha NewsFirst Published Aug 26, 2022, 9:05 PM IST
Highlights

ಹಳೇಬಸ್‌ ನಿಲ್ದಾಣ ಸಮೀಪ ಮೂತ್ರಾಲಯಕ್ಕೆ ಬರ, 36 ಹೊಸ ಮೂತ್ರಾಲಯ ನಿರ್ಮಿಸಲು ಪಾಲಿಕೆ ಚಿಂತನೆ

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ(ಆ.26):  ಸ್ಮಾರ್ಟ್‌ಸಿಟಿ ಆಗುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜನಸಂದಣಿ ದಿನೇ ದಿನೇ ಹೆಚ್ಚುತ್ತಿದೆ. ಆದರೆ ನಾಗರಿಕರ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಮೂತ್ರವಿಸರ್ಜನೆಗೆ ‘ಬಯಲೇ ಗತಿ’ ಎಂಬ ಪರಿಸ್ಥಿತಿ ಇದೆ! ಮಹಾನಗರದಲ್ಲಿ ಒಟ್ಟು 29 ಸಾರ್ವಜನಿಕ ಮೂತ್ರಾಲಯಗಳಿವೆ. ಪ್ರಮುಖ ಮಾರುಕಟ್ಟೆ, ಜನಸಂದಣಿ ಪ್ರದೇಶ ಗಮನಿಸಿದರೆ ಮೂತ್ರಾಲಯಗಳ ಸಂಖ್ಯೆ ಕಡಿಮೆಯೆ. ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಜನಸಂದಣಿ ಉಂಟಾಗುವ ರಾಣಿ ಚೆನ್ನಮ್ಮ ವೃತ್ತದ ಸುತ್ತಮುತ್ತಲಿನಲ್ಲಿ ಒಂದೇ ಒಂದು ಸಾರ್ವಜನಿಕ ಮೂತ್ರಾಲಯ ಇಲ್ಲ. ಹೀಗಾಗಿ ನಿತ್ಯ ನೂರಾರು ನಾಗರಿಕರು ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ.

ವಿವಿಧ ಜಿಲ್ಲೆ, ತಾಲೂಕು, ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ಜನರು ಮಹಾನಗರಕ್ಕೆ ಬರುತ್ತಾರೆ. ಸಾಕಷ್ಟು ಜನರು ಮೂತ್ರಾಲಯಕ್ಕೆ ಗೋಡೆ, ಗಿಡದ ಮರೆ ಅವಲಂಬಿಸಿದ್ದಾರೆ. ಇನ್ನು ಹಲವರಿಗೆ ಹಳೇಬಸ್‌ ನಿಲ್ದಾಣದಲ್ಲಿ ಶೌಚಾಲಯ ಇದೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ.

ಹುಬ್ಬಳ್ಳಿ: ಗಣೇಶ ಹಬ್ಬಕ್ಕೆ ಡಿಜೆ ಹಾಕಂಗಿಲ್ಲಾ, ಬಾಡಿಗೆಗೆ ಕೊಡಂಗಿಲ್ಲ: ಖಾಕಿ ನೋಟಿಸ್‌

ನಗರದಲ್ಲಿ ಈ ಹಿಂದೆ ಇದ್ದ ಸಾರ್ವಜನಿಕ ಮೂತ್ರಾಲಯಗಳಲ್ಲಿ ಕೆಲವು ಈಗಾಗಲೇ ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ. ಎಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆಯೋ ಅಲ್ಲಿ ಮಾತ್ರ ನಿರ್ವಹಣೆಗೆ ಪಾಲಿಕೆ ವ್ಯವಸ್ಥೆ ಮಾಡಿದೆ. ಉಳಿದೆಡೆ ಕಾಲಿಡುವ ಸ್ಥಿತಿಯಲ್ಲಿಯೂ ಮೂತ್ರಾಲಯಗಳು ಇಲ್ಲ.

ಎಲ್ಲಿಲ್ಲಿವೆ ಮೂತ್ರಾಲಯ:

ನಗರದ ಹೊಸ ಮತ್ತು ಹಳೇ ಬಸ್‌ನಿಲ್ದಾಣ, ಎಂ.ಜಿ. ಮಾರ್ಕೆಟ್‌, ನ್ಯೂ ಮೇದಾರ ಓಣಿ, ನೂರಾನಿ ಮಾರ್ಕೆಟ್‌, ರಾಜಗೋಪಾಲ ನಗರ, ಪ್ರಾದೇಶಿಕ ಬಸ್‌ ನಿಲ್ದಾಣ, ಸಿಬಿಟಿ, ನೆಹರು ಸ್ಟೇಡಿಯಂ, ಗ್ಲಾಸ್‌ಹೌಸ್‌, ಇಂಡಿಪಂಪ್‌, ಗೋಪನಕೊಪ್ಪ, ಉಣಕಲ್‌ ಸೇರಿ ವಿವಿಧೆಡೆ 29 ಮೂತ್ರಾಲಯಗಳಿವೆ. ಪ್ರತ್ಯೇಕ ತಂಡ ರಚಿಸಿಸುವ ಮೂಲಕ ಇವುಗಳ ನಿರ್ವಹಣೆಗೆ ಪಾಲಿಕೆ ಮುಂದಾಗಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸದನ ಸಮಿತಿ ರಚನೆ

36 ಹೊಸ ಮೂತ್ರಾಲಯ?:

ನಗರದಲ್ಲಿ ಬೇಡಿಕೆ ಇರುವ ನೀಲಿಜನ್‌ ರಸ್ತೆ, ನ್ಯೂ ಕಾಟನ್‌ ಮಾರ್ಕೆಟ್‌ ಸೇರಿ 36 ಕಡೆ ಈಗಾಗಲೇ ಸಾರ್ವಜನಿಕ ಮೂತ್ರಾಲಯ ನಿರ್ಮಿಸಲು ಪಾಲಿಕೆ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾಮಗ್ರಿ ಖರೀದಿಸಲಾಗಿದೆ. ಗುತ್ತಿಗೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಮೂತ್ರಾಲಯಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಜನಸಂದಣಿ ಹಾಗೂ ಮಾರುಕಟ್ಟೆಪ್ರದೇಶ ಸೇರಿ ಬೇಡಿಕೆ ಇರುವ ವಿವಿಧ ಕಡೆಗಳಲ್ಲಿ ಮೂತ್ರಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ಮಾರ್ಚ್‌ಸಿಟಿ ಹಾಗೂ ರಸ್ತೆ ಕಾಮಗಾರಿಯಿಂದ ವಿಳಂಬವಾಗುತ್ತಿದೆ ಅಂತ ಪಾಲಿಕೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಬಿ.ಎಂ. ತಿಳಿಸಿದ್ದಾರೆ.  
 

click me!