ಲಾಕ್‌ಡೌನ್‌ ಅಸ್ತ್ರಕ್ಕೆ ಮಣಿದ ಧಾರವಾಡಿಗರು: ಜನರ ಓಡಾಟ ಸಂಪೂರ್ಣ ಸ್ತಬ್ಧ..!

Kannadaprabha News   | Asianet News
Published : Jul 17, 2020, 01:53 PM IST
ಲಾಕ್‌ಡೌನ್‌ ಅಸ್ತ್ರಕ್ಕೆ ಮಣಿದ ಧಾರವಾಡಿಗರು: ಜನರ ಓಡಾಟ ಸಂಪೂರ್ಣ ಸ್ತಬ್ಧ..!

ಸಾರಾಂಶ

ಧಾರವಾಡದ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ| ಬೆಳಗ್ಗೆ 10ರ ವರೆಗೆ ಹೋಲ್‌ಸೇಲ್‌ಗೆ ಅವಕಾಶ| ಸಾಮಾಜಿಕ ಅಂತರ ಕಾಯ್ದುಕೊಂಡ ವ್ಯಾಪಾರಸ್ಥರು| ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವ ಕಾರಣ ಸಾಕಷ್ಟು ಮಳೆಯ ಮಧ್ಯೆಯೂ ಕೆಲವರು ಹೊರ ಬಂದು ಔಷಧ, ಹಾಲು ಹಾಗೂ ಇತರ ವಸ್ತುಗಳ ಖರೀದಿ ಮಾಡಿದರು|

ಧಾರವಾಡ(ಜು.17):  ದಿನದಿಂದ ದಿನಕ್ಕೆ ಜೋರುಗತಿಯಲ್ಲಿರುವ ಕೋವಿಡ್‌ ಪಾಸಿಟಿವ್‌ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಘೋಷಿಸಿರುವ ಲಾಕ್‌ಡೌನ್‌ ಅಸ್ತ್ರಕ್ಕೆ ಧಾರವಾಡ ಜನತೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ.

ಮೊದಲ ದಿನ ಬುಧವಾರ ಲಾಕ್‌ಡೌನ್‌ ಇದ್ದರೂ ಇಡೀ ದಿನ ಜನರ, ವಾಹನಗಳ ಓಡಾಟ ನಿರಾತಂಕವಾಗಿತ್ತು. ಕೆಲವು ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮನೆಯಿಂದ ಹೊರ ಬಂದ ಜನರ ತಪಾಸಣೆ, ವಿಚಾರಣೆ ಮಾಡಿದ್ದರು. ಗುರುವಾರ ಮಾತ್ರ ಜನರ ಓಡಾಟ ಸಂಪೂರ್ಣ ಸ್ತಬ್ಧವಾಗಿತ್ತು. ಜನಸಂಚಾರಕ್ಕೆ ಬರೀ ಲಾಕ್‌ಡೌನ್‌ ಅಸ್ತ್ರವಲ್ಲದೇ ದಿನಪೂರ್ತಿ ಬಂದ ಜಡಿ ಮಳೆಯೂ ಕಾರಣ ಮನೆಯಿಂದ ಯಾರೂ ಹೊರ ಹೋಗದಂತೆ ಪೊಲೀಸರಿಂದ ಸಾಧ್ಯವಾಗದ ಕೆಲಸವನ್ನು ಗುರುವಾರ ಮಳೆ ಮಾಡಿತು. ನಿರಂತರ ಮಳೆಯಿಂದ ಜನರ ಹೊರ ಬರದೇ ಮನೆಯಲ್ಲಿಯೇ ಬೆಚ್ಚಗೆ ಕೂತರು.

ಹುಬ್ಬಳ್ಳಿ: ಲಾಕ್‌ಡೌನ್‌ ಇದ್ದರೂ ಓಡಾಟ ನಿರಾತಂಕ, ರಸ್ತೆಗಿಳಿದವರಿಗೆ ಲಾಠಿ ರುಚಿ

ಪ್ರಮುಖ ರಸ್ತೆಗಳಲ್ಲಿ ಪೊಲೀಸರ ತಪಾಸಣೆಯೊಂದಿಗೆ ಜಿಲ್ಲೆಯ 16 ಕಡೆ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲೂ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಾಹನ ತಪಾಸಣೆ ನಿರಂತರವಾಗಿ ನಡೆಯುತ್ತಿತ್ತು. ಧಾರವಾಡದ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದು ಬೆಳಗ್ಗೆ 10ರ ವರೆಗೆ ಹೋಲ್‌ಸೇಲ್‌ಗೆ ಅವಕಾಶ ನೀಡಲಾಗಿತ್ತು. ಪೊಲೀಸರು ಸ್ಥಳದಲ್ಲಿ ಹಾಜರಿದ್ದು, ನಿಭಾಯಿಸಿದರು. ಹೀಗಾಗಿ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡರು. ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವ ಕಾರಣ ಸಾಕಷ್ಟು ಮಳೆಯ ಮಧ್ಯೆಯೂ ಕೆಲವರು ಹೊರ ಬಂದು ಔಷಧ, ಹಾಲು ಹಾಗೂ ಇತರ ವಸ್ತುಗಳ ಖರೀದಿ ಮಾಡಿದರು.

ಬರೀ ಧಾರವಾಡ ಅಲ್ಲದೇ ಅಳ್ನಾವರ, ಕಲಘಟಗಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಲಾಕ್‌ಡೌನ್‌ ಗುರುವಾರ ಯಶಸ್ವಿಯಾಗಿದೆ. ಅನವಶ್ಯಕವಾಗಿ ಅಲೆದಾಡುತ್ತಿದ್ದ ಯುವಕರ ಬೈಕ್‌ ಹಾಗೂ ಕಾರುಗಳನ್ನು ಗುರುವಾರ ಸಹ ಪೊಲೀಸರು ವಶ ಪಡಿಸಿಕೊಂಡು ದಂಡ ವಿಧಿಸಿದ್ದಾರೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!