ಚಿಕ್ಕಮಗಳೂರು: ಮಲೆನಾಡಲ್ಲಿ ಮನೆ ಸಮೀಪವೇ ಬರುತ್ತಿರುವ ಕಾಡಾನೆಗಳು, ಆತಂಕದಲ್ಲಿ ಜನತೆ..!

By Girish GoudarFirst Published Jan 4, 2023, 12:30 AM IST
Highlights

ಮೂಡಿಗೆರೆ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆ ಹಾವಳಿಯಿಂದ ಕಳೆದ ಆರು ತಿಂಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಇದೀಗ, ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ತಕ್ಕ ಮಟ್ಟಿಗೆ ಕಡಿಮೆಯಾಗಿದ್ದು ಕಳಸ ತಾಲೂಕಿನಲ್ಲಿ ಆರಂಭವಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿವೆ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.04):  ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿರುವುದರಿಂದ ಹಳ್ಳಿಗರು ನಿತ್ಯ ಆತಂಕದಲ್ಲಿ ಬದುಕುವಂತಾಗಿದೆ. 

ಮಲೆನಾಡಿನಲ್ಲಿ ಮನೆ ಸಮೀಪವೇ ಬರುತ್ತಿರುವ ಕಾಡಾನೆಗಳು : 

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆ ಹಾವಳಿಯಿಂದ ಕಳೆದ ಆರು ತಿಂಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಇದೀಗ, ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ತಕ್ಕ ಮಟ್ಟಿಗೆ ಕಡಿಮೆಯಾಗಿದ್ದು ಕಳಸ ತಾಲೂಕಿನಲ್ಲಿ ಆರಂಭವಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಕಾಡಾನೆಗಳು ಮನೆ ಬಾಗಿಲಿಗೆ ಬರುತ್ತಿವೆ. ಇದರಿಂದ ಗಣಪತಿಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರೋದಕ್ಕೂ ಭಯಪಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತ ಸ್ಥಳಿಯರಲ್ಲಿ ಆತಂಕ ಹುಟ್ಟಿಸಿದೆ. ಅರಣ್ಯ ಅಧಿಕಾರಿಗಳು ಆನೆಗಳನ್ನ ಓಡಿಸಲು ಹುಡುಕಾಡುತ್ತಾ ಹರಸಾಹಸ ಪಡುತ್ತಿದ್ದಾರೆ. ಆದರೆ, ಒಮ್ಮೆ ಒಂದು ಜಾಗದಲ್ಲಿ ಕಂಡರೆ ಮತ್ತೊಮ್ಮೆ ಮತ್ತೊಂದು ಜಾಗಕ್ಕೆ ಹೋಗುತ್ತಿರುವುದರಿಂದ ಸ್ಥಳೀಯರು ಹಾಗೂ ಅಧಿಕಾರಿಗಳು ಹೈರಾಣಾಗಿದ್ದಾರೆ. ಗಣಪತಿಕಟ್ಟೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿದೆ. ಈ ಮಾರ್ಗದಲ್ಲಿ ಹೆಚ್ಚಾಗಿ ವಾಹನಗಳು ಓಡಾಡುವುದರಿಂದ ಭಕ್ತರು ಹಾಗೂ ಪ್ರವಾಸಿಗರು ಭಯಗೊಂಡಿದ್ದಾರೆ.

ಚಿಕ್ಕಮಗಳೂರು: ಮಲೆನಾಡಲ್ಲಿ ಹೆಜ್ಜೆ ಗುರುತು ಬಿಟ್ಟು ಹೋದ ಸಿದ್ದೇಶ್ವರ ಶ್ರೀಗಳು..!

ಗಣಪತಿಕಟ್ಟೆಯಲ್ಲೇ ಬೀಡು ಬಿಟ್ಟಿರುವ ಎರಡು ಕಾಡಾನೆಗಳು ರಾತ್ರಿ ವೇಳೆ ಮನೆ ಬಳಿಯೇ ಬರುತ್ತಿವೆ. ಸ್ಥಳಿಯರು ಮನೆ ಬಳಿ ಬಂದ ಆನೆಗಳನ್ನ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. 20 ಜನ ಅಧಿಕಾರಿಗಳ ತಂಡದ ಜೊತೆ ಸ್ಥಳಿಯರು ಆನೆ ಓಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ತರೀಕೆರೆಯಲ್ಲೂ ಕಾಡಾನೆ ದಾಳಿಗೆ ರಾಗಿ ಹೊಲದಲ್ಲಿದ್ದ ರೈತ ಸಾವನ್ನಪ್ಪಿದ್ದರು. 

ಬಣಕಲ್ನಲ್ಲಿ ಶೆಡ್‌ನಲ್ಲಿ ಮಲಗಿದ್ದವರ ಮೇಲೆ ಒಂಟಿ ಸಲಗ ದಾಳಿ ಮಾಡಿದ್ದು ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ, ಕಳೆದ ಎರಡ್ಮೂರು ದಿನಗಳಿಂದ ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಕಾಡಾನೆಗಳು ಮನೆಬಾಗಿಲಿಗೆ ಬರ್ತಿರೋದ್ರಿಂದ ಸ್ಥಳಿಯರು ಕಂಗಾಲಾಗಿದ್ದಾರೆ.

click me!