ರೈತರ ಕೈ ಹಿಡಿದ ಮಾಗಿಯ ಬೆಳೆ ಅವರೆ

By Kannadaprabha NewsFirst Published Dec 25, 2023, 9:52 AM IST
Highlights

ಕೊಡಗಿನ ಮಲೆನಾಡು ವಲಯಕ್ಕೆ ಹೊಂದಿಕೊಂಡಂತಿರುವ ಹುಣಸೂರಿನಲ್ಲಿ ಅವರೆಕಾಯಿ ವ್ಯಾಪಾರ ಸಾಂದರ್ಭಿಕವಾಗಿದ್ದು, ಮಾಗಿಕಾಲ ಬರುತ್ತಿದಂತ್ತೆ ಬಿಸಿ ಬಿಸಿಯೂಟಕ್ಕೆ ಅವರೆಕಾಯಿ ಸೊಗಡು ಜನರನ್ನು ಅಕರ್ಷಿಸುತ್ತದೆ ಹಾಗೂ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ.

 ಕೆ. ಕೃಷ್ಣ ಹುಣಸೂರು

  ಹುಣಸೂರು :  ಕೊಡಗಿನ ಮಲೆನಾಡು ವಲಯಕ್ಕೆ ಹೊಂದಿಕೊಂಡಂತಿರುವ ಹುಣಸೂರಿನಲ್ಲಿ ಅವರೆಕಾಯಿ ವ್ಯಾಪಾರ ಸಾಂದರ್ಭಿಕವಾಗಿದ್ದು, ಮಾಗಿಕಾಲ ಬರುತ್ತಿದಂತ್ತೆ ಬಿಸಿ ಬಿಸಿಯೂಟಕ್ಕೆ ಅವರೆಕಾಯಿ ಸೊಗಡು ಜನರನ್ನು ಅಕರ್ಷಿಸುತ್ತದೆ ಹಾಗೂ ಎಲ್ಲರ ಬಾಯಲ್ಲೂ ನೀರೂರಿಸುತ್ತದೆ.

Latest Videos

ಡಿಸೆಂಬರ್ ತಂಪು ಹಿಮದ ವಾತಾವರಣದಲ್ಲಿ ಮಾಗಿಯ ಚಳಿಯ ಮುದದ ನಡುವೆ ಬಾಯಿ ಚಪ್ಪರಿಸುವ ಆಸೆಗೆ ಸೊಗಡು ಎಲ್ಲರ ಬಾಯಲ್ಲೂ ನೀರುರಿಸುತ್ತದೆ. ಮೈಸೂರು ಜಿಲ್ಲೆಯ ಹುಣಸೂರು ಸುತ್ತ ಮುತ್ತ ಬೆಳೆಯುವ ಅವರೆಕಾಯಿ ಘಮಲು ದೂರದ , ದೊಡ್ಡಬಳ್ಳಾಪುರ, ಪಾವಗಡ, ಸತ್ತಿ, ತುಮಕೂರು, ಮಂಗಳೂರು, ಬಾಂಬೆ, ಚೆನ್ನೈ, ತಮಿಳುನಾಡು, ಆಂಧ್ರಪ್ರದೇಶಕ್ಕೆ ತಟ್ಟುತ್ತದೆ.

ಈ ಬಾರಿ ಹಿಂಗಾರು ಮಳೆಯ ಕೆಲವು ಹಂತದಲ್ಲಿ ಸರಿಯಾಗಿ ಮಳೆಯಾಗದೆ ಕೆಲವು ಕಡೆ ಬಿತ್ತನೆ ಹಾಳಾಗಿ ಕಳೆದ ಬಾರಿಗಿಂತ ಈ ಬಾರಿ ಇಳುವರಿ ಕಡಿಮೆಯಾಗಿದೆ. ಅಕ್ಟೋಬರ್ ಕಳೆದು ನವೆಂಬರ್ ಬರುತ್ತಿದ್ದಂತೆ ಅವರೆಯ ಸೊಗಡು ಎಲ್ಲರ ಮೂಗನ್ನು ತಾಕಿ ಮನ ಸೆಳೆಯುತ್ತದೆ. ಜನರನ್ನು ಮುಗಿ ಬಿಳಿಸುವಂತೆ ಮಾಡುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಅವರೆಕಾಯಿ ಮಾರಾಟ ಡಿಸೆಂಬರ್ ಮಾಹೆಯಲ್ಲಿ ಬಿರುಸಾಗಿ ನಡೆಯುತ್ತದೆ.

ಈ ಬಾರಿ ಅವರೆಕಾಯಿ ಕೆಲವು ಹಂತದಲ್ಲಿ ಒಳ್ಳೆಯ ಮಳೆ ಬಾರದ ಕಾರಣ ಗಿಡಗಳು ಹುಲುಸಾಗಿ ಬೇಳೆಯದೆ, ಇಳುವರಿ ಕಡಿಮೆಯಾಗಿದ್ದರೂ, ಪ್ರತಿ ದಿನ ಬರುವಂತಹ ಅವರೆಕಾಯಿ ಹಾದಿ ಬೀದಿಯಲೆಲ್ಲಾ ಮಾರಾಟವಾಗಿ ಮನೆ ಮನೆ ತಲುಪುತ್ತಿದೆ.

ಈ ಬಾರಿ ಇಳುವರಿ ಕಡಿಮೆ ಇದ್ದರೂ ಪ್ರತಿ ದಿನ 40 ರಿಂದ 50ಟನ್ ಅವರೆ ಕಾಯಿ ತಾಲೂಕಿನಲ್ಲಿ ಮಾರಾಟವಾಗುತ್ತಿದೆ. ಬನ್ನಿಕುಪ್ಪೆ ಮುಖ್ಯರಸ್ತೆಯಲ್ಲಿ ಪ್ರತಿ ದಿನ 25 ಟನ್, ಎ.ಪಿ.ಎ.ಸಿಯಲ್ಲಿ 10 ಟನ್, ಕೋರ್ಟ್ ವೃತ್ತದ ಬಳಿ 8 ಟನ್ ಹಾಗೂ ರಾಮಪಟ್ಟಣ, ಕಾಡನಕೊಪ್ಪಲು ಗೇಟು, ಮರದೂರು ಗೇಟು, ಅಲ್ಲದೆ ತಾಲೂಕಿನ ವಿವಿಧೆಡೆ ಅವರೆ ಕಾಯಿ ವ್ಯಾಪಾರ ಬಿರುಸಿನಿಂದ ಸಾಗಿದೆ.

ಅವರೆಕಾಯಿ ನವಂಬರ್ ಕೊನೆ ವಾರದಲ್ಲಿ ಕೆ.ಜಿ. ಒಂದಕ್ಕೆ 60 ರಿಂದ 70 ರೂ.ಗೆ ಮಾರಾಟವಾಗುತ್ತಿದ್ದು, ಈಗ ಕೆ.ಜಿ. ಗೆ 45 ರಿಂದ 50 ರೂಪಾಯಿ ದರದಲ್ಲಿ ಮಾರಾಟ ನಡೆಯುತಿದೆ. ಮುಂದೆ ಹೆಚ್ಚಿನ ಅವರೆಕಾಯಿ ಮಾರುಕಟ್ಟೆಗೆ ಬಂದರೆ 25 ರಿಂದ 30 ರೂ .ಗೆ ಇಳಿಯಲಿದೆ. ಇಲ್ಲಿನ ಹಿಮಚಾದಿತ ಸೊಗಡಿನ ಅವರೆಕಾಯಿಗೆ ಸಾಕಷ್ಟು ಬೆಡಿಕೆ ಇದ್ದು ಬೆಂಗಳೂರು ಸೇರಿದಂತ್ತೆ ಹೊರ ರಾಜ್ಯಗಳಿಗೂ ಹೋಗುತ್ತದೆ ಎಂದು ಅವರೆಕಾಯಿ ವ್ಯಾಪಾರಿಗಳು ಹೇಳುತ್ತಾರೆ.

ಹುಣಸೂರು ತಾಲೂಕಿನಲ್ಲಿ ಕಳೆದ ಬಾರಿ 9850 ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಅವರೆ ಈ ಬಾರಿ ಮಳೆಯ ಕೊರತೆಯಿಂದ 6400 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಳೆದ ಬಾರಿ ತಾಲೂಕಿನ ಕಸಬಾ ಹೋಬಳಿಯಲ್ಲಿ 3450 ಹೆಕ್ಟರ್, ಬಿಳಿಕೆರೆ ಹೋಬಳಿಯಲ್ಲಿ 1995 ಹೆಕ್ಟರ್, ಗಾವಡಗೆರೆ ಹೋಬಳಿಯಲ್ಲಿ 2825 ಹೆಕ್ಟರ್, ಹನಗೋಡು ಹೋಬಳಿಯಲ್ಲಿ 1580 ಹೆಕ್ಟರ್ ಪ್ರದೇಶದಲ್ಲಿ ಬೇಳೆಯಲಾಗಿದ್ದ ಅವರೆ ಈ ಬಾರಿ ಕಸಬಾ ಹೋಬಳಿಯಲ್ಲಿ 2350, ಬಿಳಿಕೆರೆ ಹೋಬಳಿಯಲ್ಲಿ 1250 ಹೆಕ್ಟರ್, ಗಾವಡಗೆರೆ ಹೋಬಳಿಯಲ್ಲಿ 1650 ಹೆಕ್ಟರ್, ಹನಗೋಡು ಹೋಬಳಿಯಲ್ಲಿ 1580 ಹೆಕ್ಟರ್ ಪ್ರದೇಶಕ್ಕೆ ಇಲಿದಿದೆ.

ಕಳೆದ ಬಾರಿ ಒಂದು ಹೆಕ್ಟೆರ್‍ ಗೆ 20 ರಿಂದ 25 ಕ್ವಿಂಟಾಲ್ ಇಳುವರಿ ಬಂದಿದ್ದ ಅವರೆ ಈ ಬಾರಿ 15 ರಿಂದ 18 ಕ್ವಿಂಟಾಲ್ ಇಳುವರಿ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು.

ಕಳೆದ ಬಾರಿ ತಾಲೂಕಿನ ಕಸಬಾ ಹೋಬಳಿಯಲ್ಲಿ 10,987 ಕ್ವಿಂಟಾಲ್, ಬಿಳಿಕೆರೆ ಹೋಬಳಿಯಲ್ಲಿ 7612 ಕ್ವಿಂಟಾಲ್, ಗಾವಡಗೆರೆ ಹೋಬಳಿಯಲ್ಲಿ 10680 ಕ್ವಿಂಟಾಲ್, ಹನಗೋಡು ಹೋಬಳಿಯಲ್ಲಿ 8025 ಕ್ವಿಂಟಾಲ್ ಸೇರಿದಂತೆ ಒಟ್ಟು ತಾಲೂಕಿನಲ್ಲಿ 37274 ಕ್ವಿಂಟಾಲ್ ಅವರೆ ಬೆಳೆ ಇಳುವರಿ ಬಂದಿತ್ತು. ಅದರೆ ಈ ಬಾರಿ ಮಳೆ ಕಡಿಮೆಯಾದ ಕಾರಣ ಇಳುವರಿ ಕಡಿಮೆಯಾಗಿ ಕಸಬಾ ಹೋಬಳಿಯಲ್ಲಿ 10,575 ಕ್ವಿಂಟಾಲ್, ಬಿಳಿಕೆರೆ ಹೋಬಳಿಯಲ್ಲಿ 5,625 ಕ್ವಿಂಟಾಲ್, ಗಾವಡಗೆರೆ ಹೋಬಳಿಯಲ್ಲಿ 7,425 ಕ್ವಿಂಟಾಲ್, ಹನಗೋಡು ಹೋಬಳಿಯಲ್ಲಿ 5,775 ಕ್ವಿಂಟಾಲ್ ಸೇರಿದಂತೆ ಒಟ್ಟು 28,800 ಕ್ವಿಂಟಾಲ್ ಇಳುವರಿ ಬರುವುದಾಗಿ ನಿರೀಕ್ಷಿಸಲಾಗಿದೆ.

ಅದರೆ ಇತ್ತಿಚೆಗೆ ಮೋಡದ ವಾತಾವರಣ ಹೋಗಿ ಬಿಸಿಲಿನ ಮತ್ತು ಹಿಮದ ವಾತವರಣವಿದ್ದರೂ ಹೆಚ್ಚಿನ ಬಿತ್ತನೆ ಪ್ರದೇಶಗಳು ಹಾಳಾಗಿರುವ ಕಾರಣ ಅವರೆಕಾಯಿ ಇಳುವರಿ ಹೆಚ್ಚಾಗಿ ಬರುವ ಸಾಧ್ಯತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ವಿರಣ್ಣ ತಿಳಿಸಿದ್ದಾರೆ.

ಅವರೆ ಬೆಳೆಗೆ ಈ ಬಾರಿ ಬಿತ್ತನೆ ಸಮಯದಲ್ಲಿ ಉತ್ತಮ ಮಳೆ ಇಲ್ಲದ ಬಿತ್ತನೆ ನಾಶವಾಗಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲು ಸಾದ್ಯವಾಗದೆ ಉತ್ತಮ ಇಳುವರಿ ಇಲ್ಲದೆ ಸಾಧಾರಣ ಇಳುವರಿ ಬಂದಿದೆ. ಈ ಕಾರಣದಿಂದ ಈ ಬಾರಿ ಅವರೆ ಕಾಯಿಗೆ ಬಾರಿ ಬೆಡಿಕೆ ಇದ್ದು ಬೆಲೆಯು ಜಾಸ್ತಿಯಾಗಿ ಗ್ರಾಹಕರ ಕೈ ಸುಡುತ್ತಿದೆ. ಅವರೆ ಬೆಳೆದಿರುವ ರೈತರಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ಅವರೆ ಉಳಿಸಿಕೊಂಡಿರುವ ರೈತರು ಖುಷಿಯಾಗಿದ್ದಾರೆ. ಈಗ ಕೆ.ಜಿ ಒಂದಕ್ಕೆ ರೂ. 45 ರಿಂದ 50 ರೂ. ದೊರೆಯುತ್ತಿದೆ. ಮುಂದೆ ಹೆಚ್ಚು ಹೆಚ್ಚು ಅವರೆ ಮಾರುಕಟ್ಟೆಗೆ ಬಂದರೆ ಬೆಲೆ ಕಡಿಮೆಯಾಗಬಹುದು.

ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌. ನಗರ, ಎಚ್‌.ಡಿ. ಕೋಟೆಗಳಲ್ಲಿ ಬೆಳೆಯುವ ಅವರೆಕಾಯಿ ಬೆಂಗಳೂರು, ದೊಡ್ಡಬಳ್ಳಾಪುರ, ಪಾವಗಡ, ತಮಿಳುನಾಡಿನ ಸತ್ತಿ, ಈರೋಡ್‌, ಕೊಯಮತ್ತೂರು, ಮಂಗಳೂರು, ಬಾಂಬೆ, ಆಂಧ್ರಗಳಿಗೆ ಸೆರಿದಂತೆ ಅನೇಕ ಕಡೆಗೆ ರವಾನೆಯಾಗುತ್ತದೆ. ಈ ಬಾರಿ ಇಳುವರಿ ಕಡಿಮೆಯಾಗಿದ್ದು ಅವರೆ ಬೆಳೆದಿರುವ ರೈತರ ಶ್ರಮಕ್ಕೆ ಉತ್ತಮ ಬೆಲೆ ಸಿಗುತ್ತಿದ್ದರೂ ಶ್ರಮಕ್ಕೆ ಸರಿಯಾದ ಬೆಲೆ ಸಿಗದೆ ನಿರಾಶರಾಗಿದ್ದಾರೆ.

ನವಂಬರ್ ಕೊನೆಯವಾರದಲ್ಲಿ ಪ್ರಾರಂಭವಾದ ಅವರೆಕಾಯಿ ವ್ಯಾಪಾರ ಪ್ರಾರಂಭದಲ್ಲಿ 40 ರಿಂದ 50 ರೂ. ಒಳ್ಳೆಯ ಬೆಲೆ ದೊರೆತರೂ, ಡಿಸೆಂಬರ್‍ ನಲ್ಲಿ ಬೆಲೆ ಕಡಿಮೆಯಾಗದೆ ಹಾಗೆ ಅಳಿದ್ದು, ಅವರೆ ಬೆಳೆದಿರುವ ರೈತರು ಮೂಟೆಗಟ್ಟಲೆ ಅವರೆಕಾಯಿ ತಂದು ಬಿರುಸಿನ ವ್ಯಾಪಾರಮಾಡಿ ಜೇಬು ತುಂಬಸಿಕೊಂಡು ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ಹುಣಸೂರು ನಗರ ಹಾಗೂ ಗ್ರಾಮಾಂತರ ಮುಖ್ಯ ಕೇಂದ್ರಗಳ ರಸ್ತೆ ಬದಿಯಲ್ಲೆ ಸಾಕಷ್ಟು ನೇರ ಖರೀದಿದಾರರು ಇದ್ದು, ಸಾಕಷ್ಟು ವಹಿವಾಟು ನಡೆಯುತ್ತಿದ್ದರೂ ಹೆಚ್ಚಿನ ಇಳುವರಿ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ತೀವ್ರ ಬೆಡಿಕೆ ಉಂಟಾಗಿದೆ.

ರೈತರು ಅವರೆ ಬಿತ್ತನೆಯನ್ನು ಮಳೆ ಬೀಳುವ ಸಮಯದಲ್ಲಿ ಉತ್ತಮ ಬಿತ್ತನೆ ಮಾಡಿದರೆ ಮತ್ತು ಕಾಯಿ ಕೊರಕ ಹುಳು ಹಾವಳಿಯನ್ನು ಕ್ರಿಮಿನಾಸಕಗಳಿಂದ ತಡೆದುಕೊಂಡರೆ ಉತ್ತಮ ಇಳುವರಿ ಪಡೆದುಕೊಳ್ಳಬಹುದು. ಅಲ್ಲದೆ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಪೂಷಕಾಂಶ ಮಿಶ್ರಣ ಸ್ಪ್ರೇ ಬಳಕೆ ಮಾಡಿದರೆ ಒಂದು ಹೆಕ್ಟರ್ ಗೆ 2 ಕ್ವಿಂಟಾಲ್ ಬೆಳೆಯುವ ಭೂಮಿಯಲ್ಲಿ ನಾಲ್ಕು ಕ್ವಿಂಟಾಲ್ ಬೆಳೆಯಬಹುದು. ಇದರಿಂದ ಎರಡು ಪಟ್ಟು ಇಳುವರಿ ಹೆಚ್ಚಾಗಲಿದೆ. ಈ ಕಾರಣಕ್ಕಾಗಿ ಕಾಲ ಕಾಲಕ್ಕೆ ರೈತ ಸಂಪರ್ಕ ಕೇಂದ್ರದಿಂದ ಮಾಹಿತಿ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿ ಎಂದು ರೈತರಿಗೆ ಕರೆ ನೀಡಿದರು.

ವಿಶೇಷವಾಗಿ ರೈತರು ಔಷಧಿ ಸಿಂಪಡಿಸುವಾಗ ಬೇವಿನ ಮೂಲದ ಕಿಟನಾಶಕ (ಬೇವಿನ ಎಣ್ಣೆ) ಬಳಸಿ ಸಿಂಪಡಣೆ ಮಾಡಿದರೆ ಅತಿ ಹೆಚ್ಚಿನ ಕೀಟಗಳು ನಿಯಾಂತ್ರಣವಾಗುವ ಜೊತೆಗೆ ಸಿಂಪಡಣೆ 4 ಬಾರಿ ಮಾಡುವ ಬದಲು ಮೂರು ಬಾರಿ ಮಾಡಿದರೆ ಸಾಕು. ಇದರಿಂದ ರೈತರಿಗೆ ಹೆಚ್ಚು ಲಾಭವಾಗಲಿದೆ ಎಂದರು.

click me!