ರೈತರಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡಿ​ : ಶಾಸಕ ಎಚ್‌.ಪಿ. ಮಂಜುನಾಥ್‌

By Kannadaprabha NewsFirst Published Jan 29, 2023, 5:58 AM IST
Highlights

ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಬೆಳೆಗಳಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಸುವತ್ತ ಅಧಿಕಾರಿಗಳು ಗಮನಹರಿಸಬೇಕೆಂದು ಶಾಸಕ ಎಚ್‌.ಪಿ. ಮಂಜುನಾಥ್‌ ಸೂಚಿಸಿದರು.

  ಹುಣಸೂರು :  ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಬೆಳೆಗಳಿಗೆ ನಿಗದಿತ ಅವಧಿಯೊಳಗೆ ಹಣ ಪಾವತಿಸುವತ್ತ ಅಧಿಕಾರಿಗಳು ಗಮನಹರಿಸಬೇಕೆಂದು ಶಾಸಕ ಎಚ್‌.ಪಿ. ಮಂಜುನಾಥ್‌ ಸೂಚಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ-ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಈ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿದ್ದು, ರಾಗಿ ಬೆಳೆದಿರುವ ರೈತರಿಗೆ ಆಶಾದಾಯಕವಾಗಿದೆ. ಭತ್ತಕ್ಕೆ 2040-2060 ರು. ಗೆ ಖರೀದಿಸಲು ನಿರ್ಧರಿಸಿರುವುದು ರೈತರಿಗೆ ನಷ್ಟಉಂಟಾಗಲಿದ್ದು, ಮರು ಪರಿಶೀಲನೆ ಮಾಡಲು ಒತ್ತಾಯಿಸಲಾಗುವುದು. ಮದ್ಯವರ್ತಿಗಳಿಗೆ ಅವಕಾಶ ನೀಡಬಾರದು, ನಿಗದಿತ ದಿನದೊಳಗೆ ರೈತರ ಖಾತೆಗೆ ಹಣ ಪಾವತಿಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ವಹಿವಾಟು ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ಸಾಗಾಟ ವೆಚ್ಚ ಕಡಿಮೆಯಾಗಲಿದೆ. ಈಗಾಗಲೆ ಸಾಕಷ್ಟುರೈತರು ಭತ್ತವನ್ನು ಮಾರಾಟ ಮಾಡಿದ್ದು, ಕೆಲ ರೈತರಿಗೆ ಮಾತ್ರ ನೆರವಾಗಲಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಸ್ಥಳೀಯ ಭತ್ತ ಕ್ವಿಂಟಾಲ್‌ಗೆ 500 ರು. ಹೆಚ್ಚುವರಿಯಾಗಿ ನೀಡುತ್ತಿದ್ದು, ಇದು ತಾರತಮ್ಯ ನೀತಿಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

ರಾಜ್ಯ ಕೃಷಿ ಮಾರಾಟ ಮಂಡಳಿಯ ಜಂಟಿ ನಿರ್ದೇಶಕಿ ಎಂ.ವಾಣಿಶ್ರೀ ಮಾತನಾಡಿ, ಸರ್ಕಾರವು 5 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಹಾಗೂ 2 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಗೆ ಅವಕಾಶ ಕಲ್ಪಿಸಿದೆ. ಹುಣಸೂರು ಖರೀದಿ ಕೇಂದ್ರದಲ್ಲಿ ರಾಗಿ ಬೆಳೆಗೆ 5,301 ಹಾಗೂ ರತ್ನಪುರಿ ಕೇಂದ್ರದಲ್ಲಿ 1,850 ಮಂದಿ ಸೇರಿದಂತೆ 7,151ಮಂದಿ ಒಟ್ಟು 1.18 ಲಕ್ಷ ಕ್ವಿಂಟಾಲ್‌ ಹಾಗೂ ಭತ್ತಕ್ಕೆ ಹುಣಸೂರು ಕೇಂದ್ರದಲ್ಲಿ 848 ಮಂದಿ, ರತ್ನಪುರಿಯಲ್ಲಿ 173ಮಂದಿ ಸೇರಿದಂತೆ 1021 ರೈತರು 32 ಸಾವಿರ ಕ್ವಿಂಟಾಲ್‌ ಮಾರಾಟ ಮಾಡಲು ನೊಂದಾಯಿಸಿದ್ದಾರೆ. ರೈತರು ಇನ್ನೂ ನೊಂದಾಯಿಸಿಕೊಳ್ಳಲು ಅವಕಾಶವಿದ್ದು, ಕೃಷಿಕರು ಸದ್ಬಳಕೆ ಮಾಡಿಕೊಳ್ಳಬೇಕು. ರಾಗಿ, ಭತ್ತ ಪೂರೈಸುವ ರೈತರ ಖಾತೆಗೆ 8-10 ದಿನಗಳಲ್ಲಿ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಲಿದ್ದು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದೆಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್‌, ಸದಸ್ಯೆ ಪ್ರಿಯಾಂಕ ಥಾಮಸ್‌, ಖರೀದಿ ಕೇಂದ್ರದ ಅಧಿಕಾರಿಗಳಾದ ಸೋಮಣ್ಣ, ನಿತಿನ್‌ನಾಯಕ್‌, ಆಹಾರ ಇಲಾಖೆ ಶಿರಸ್ತೆದಾರ್‌ ರಾಮಚಂದ್ರ, ಎಪಿಎಂಸಿ ಕಾರ್ಯದರ್ಶಿ ಓ. ಹಂಪಣ್ಣ, ರೈತ ಸಂಘಧ ತಾಲೂಕು ಅಧ್ಯಕ್ಷ ಜಯರಾಂ, ಮುಖಂಡರಾದ ಪ್ರಭಾಕರಾರಾಧ್ಯ, ನಟರಾಜ್‌ ಇದ್ದರು.

click me!