ದೈಹಿಕ ಆರೋಗ್ಯಕ್ಕೆ ಗಮನ ನೀಡಿ: ಉಮೇಶ್‌

By Sujatha NRFirst Published Aug 17, 2023, 7:12 AM IST
Highlights

ಪ್ರತಿಯೊಬ್ಬರಿಗೆ ಮಾನಸಿಕ ಆರೋಗ್ಯ ಎಷ್ಟುಮುಖ್ಯವೋ, ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ ಎಂದು ರೋಟರಿ ಕ್ಲಬ್‌ನ ವಲಯ ರಾಜ್ಯಪಾಲರಾದ ಎಂ.ಎಸ್‌.ಉಮೇಶ್‌ ಹೇಳಿದರು.

 ತುರುವೇಕೆರೆ : ಪ್ರತಿಯೊಬ್ಬರಿಗೆ ಮಾನಸಿಕ ಆರೋಗ್ಯ ಎಷ್ಟುಮುಖ್ಯವೋ, ದೈಹಿಕ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ ಎಂದು ರೋಟರಿ ಕ್ಲಬ್‌ನ ವಲಯ ರಾಜ್ಯಪಾಲರಾದ ಎಂ.ಎಸ್‌.ಉಮೇಶ್‌ ಹೇಳಿದರು.

ಇಲ್ಲಿಯ ರೋಟರಿ ಉದ್ಯಾನವನದಲ್ಲಿ ಖಜಾನಾ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ನೀಡಲಾದ ಜಿಮ್‌ ಸಲಕರಣೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೂ ಅನಾರೋಗ್ಯ ಕಾಡುತ್ತಿದೆ. ದುಡಿದೆದ್ದೆಲ್ಲಾ ಆರೋಗ್ಯ ರಕ್ಷಣೆಗೆ ಎಂಬ ಸ್ಥಿತಿ ಬಂದು ತಲುಪಿದೆ. ಹಾಗಾಗಿ ಎಲ್ಲರೂ ತಮ್ಮ ಆರೋಗ್ಯ ಕಾಪಾಡುವತ್ತ ಗಮನಹರಿಸಬೇಕು. ದೈಹಿಕ ಕಸರತ್ತು ಮಾಡುವ ಮೂಲಕ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು. ಮಕ್ಕಳಿಗೂ ದೈಹಿಕ ಕಸರತ್ತು ನಡೆಸಲು ಜಿಮ್‌ನ ಅಗತ್ಯವಿದೆ. ತಮ್ಮ ರೋಟರಿ ಸಂಸ್ಥೆಯಿಂದ ಮಕ್ಕಳಿಗಾಗಿ ಜಿಮ್‌ ಸಲಕರಣೆಗಳನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ತಾಲೂಕಿನ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ಜಯರಾಮ್‌ ಮಾತನಾಡಿ, ದಾನಿಗಳಾದ ಪ್ರಕಾಶ್‌ ಗುಪ್ತಾರವರ ನೇತೃತ್ವದ ಖಜಾನಾ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಉತ್ತಮ ಸೇವಾ ಕಾರ್ಯ ನಡೆದಿದೆ. ವಯೋವೃದ್ಧರು ಮತ್ತು ಮಧ್ಯ ವಯಸ್ಕರಿಗೆ ನೀಡಿರುವ ಜಿಮ್‌ ಸಲಕರಣೆಗಳು ಅವರನ್ನು ಆರೋಗ್ಯವಂತರನ್ನಾಗಿ ಮಾಡಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಮ್‌ ಅಳವಡಿಸಲು ನೆರವಾದ ಸಾವಿತ್ರಮ್ಮ, ಸರಳಮ್ಮ, ಟಿ.ಎಸ್‌.ಪ್ರಕಾಶ್‌ ಗುಪ್ತಾ, ಡಾ.ಮಂಜುನಾಥ್‌ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.

ರೋಟರಿ ಸಂಸ್ಥೆಯ ಅಧ್ಯಕ್ಷರಾದ ಸಿ.ಎಸ್‌.ರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹರಿಪ್ರಸಾದ್‌, ರೋಟರಿ ಕ್ಲಬ್‌ನ ಸಹಾಯಕ ರಾಜ್ಯಪಾಲರಾದ ಶ್ರೀನಿವಾಸ್‌ ಮೂರ್ತಿ, ಇನ್ನರ್‌ ಕ್ಲಬ್‌ ಆಫ್‌ ಸಂಕಲ್ಪದ ಅಧ್ಯಕ್ಷೆ ಲತಾ ಪ್ರಸನ್ನ, ಪ್ರಕಾಶ್‌ ಗುಪ್ತಾ, ಸಾವಿತ್ರಮ್ಮ ಪಟ್ಟಣ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್‌ ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.

click me!