ನವಲಗುಂದ ಬಸ್ ಡಿಪೋದಲ್ಲಿ ಸಿಬ್ಬಂದಿ ರಜೆ: ಪ್ರಯಾಣಿಕರ ಪರದಾಟ

By Suvarna NewsFirst Published Dec 11, 2019, 7:34 AM IST
Highlights

ನವಲಗುಂದ ಬಸ್‌ ನಿಲ್ದಾಣದಲ್ಲಿ ನಿತ್ಯ ಗ್ರಾಮೀಣರ ಪರದಾಟ| ಘಟಕದಲ್ಲಿ ಸಿಬ್ಬಂದಿ ರಜೆಯಿಂದ ದಿನಕ್ಕೆ 7-8 ಶೆಡ್ಯೂಲ್‌ಗಳು ರದ್ದು| ನವಲಗುಂದ ಡಿಪೋದಲ್ಲಿ ಒಟ್ಟು 297 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ| 70 ಬಸ್‌ ಚಾಲಕರು ಹಾಗೂ 28 ನಿರ್ವಾಹಕರು ಮತ್ತು 125 ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ| ಇನ್ನು, ಕಚೇರಿ ಸಿಬ್ಬಂದಿ 37 ಮತ್ತು ಮೆಕ್ಯಾನಿಕಲ್‌ ವಿಭಾಗದ ಸಿಬ್ಬಂದಿ 37| ಇವರಲ್ಲಿ ಹಲವರು ರಜೆ ಹೋಗುತ್ತಿರುವ ಪರಿಣಾಮ ಪ್ರಯಾಣಿಕರಿಗೆ ಸಮಸ್ಯೆ|

ಈಶ್ವರ ಜಿ. ಲಕ್ಕುಂಡಿ

ನವಲಗುಂದ(ಡಿ.11): ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಇಲ್ಲಿಯ ಡಿಪೋ ಚಾಲಕರು, ನಿರ್ವಾಹಕರ ಅನಿಯಮಿತ ಗೈರು, ಸಿಬ್ಬಂದಿ ಕೊರತೆಯಿಂದಾಗಿ ತಾಲೂಕಿನ ಜನತೆ ಸಂಕಷ್ಟ ಪಡುವಂತಾಗಿದೆ. ಸಮಯಕ್ಕೆ ಬಸ್‌ ಬಂದಿಲ್ಲ ಎನ್ನುವುದು ಇಲ್ಲಿನವರ ನಿತ್ಯದ ಗೋಳಾಗಿ ಪರಿಣಮಿಸಿದೆ.

ಸರಿಯಾದ ಸಮಯಕ್ಕೆ ಬಸ್ಸುಗಳು ಬಾರದೆ ಇರುವುದರಿಂದ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಜನರಿಗೆ, ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಜನರು ತೊಂದರೆಗೆ ಈಡಾಗುವುದು ಸಾಮಾನ್ಯ ಎಂಬ ಸ್ಥಿತಿ ತಾಲೂಕಿನಲ್ಲಿದೆ. ಗ್ರಾಮಗಳಲ್ಲಿನ ಬಸ್‌ ನಿಲ್ದಾಣಕ್ಕೆ ಆಗಮಿಸಿದರೆ ಬಸ್‌ ಬಂದರೆ ಬಂತು, ಇಲ್ಲದಿದ್ದರೆ ಇಲ್ಲವೆಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದಕ್ಕೆ ಜವಾಬ್ದಾರಿ ಯಾರು ಎಂಬುದು ಗ್ರಾಮೀಣರ ಪ್ರಶ್ನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನವಲಗುಂದ ಡಿಪೋದಲ್ಲಿ ಒಟ್ಟು 297 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 70 ಬಸ್‌ ಚಾಲಕರು ಹಾಗೂ 28 ನಿರ್ವಾಹಕರು ಮತ್ತು 125 ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿಯಿದ್ದಾರೆ. ಇನ್ನು, ಕಚೇರಿ ಸಿಬ್ಬಂದಿ 37 ಮತ್ತು ಮೆಕ್ಯಾನಿಕಲ್‌ ವಿಭಾಗದ ಸಿಬ್ಬಂದಿ 37 ಇದ್ದಾರೆ. ಇವರಲ್ಲಿ ಹಲವರು ರಜೆ ಹೋಗುತ್ತಿರುವ ಪರಿಣಾಮ ಪ್ರಯಾಣಿಕರು ಸಮಸ್ಯೆಗೆ ಸಿಲುಕುವಂತಾಗಿದೆ.

ಸ್ಥಳೀಯ ಬಸ್‌ ನಿಲ್ದಾಣದಿಂದ 1200 ಬಸ್‌ಗಳು ಸಂಚರಿಸುತಿದ್ದು, ನಮ್ಮ ಡಿಪೋದಿಂದ 60 ಬಸ್‌ಗಳು ಕಾರ್ಯನಿರ್ವಹಿಸುತ್ತವೆ. ವಿಜಯಪುರ-5, ಸಾಧಾರಣಾ ಬಸ್‌ಗಳು 45, ಕಾರವಾರ-3, ಸುವರ್ಣ ಬಸ್‌-4, ಅಣ್ಣಿಗೇರಿ-2, ಬಾರ್ಸಿ-1 ಸೇರಿ 60 ಶೆಡ್ಯೂಲ್‌ಗಳಿವೆ. ಒಂದು ಲೆಕ್ಕದ ಪ್ರಕಾರ ಕೆಲದಿನ ಹಲವು ಚಾಲಕರು, ನಿರ್ವಾಹಕರು ರಜೆಯಲ್ಲಿರುತ್ತಾರೆ ಎಂದು ಘಟಕದ ವ್ಯವಸ್ಥಾಪಕ ಮಹೇಶ್ವರಿ ಬಿ. ಹೇಳಿದರು. ಇದರಿಂದ ಪ್ರತಿದಿನವು 7ರಿಂದ 8 ಶೆಡ್ಯೂಲ್‌ಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಕುಮಾರಗೊಪ್ಪ ಗ್ರಾಮಕ್ಕೆ ಪ್ರತಿನಿತ್ಯ 2 ಬಸ್‌ಗಳು ಸಂಚರಿಸುತ್ತಿವೆ. ಆದರೆ, ಅವುಗಳಲ್ಲಿ ಸಂಜೆ ಹೋಗುವ ಬಸ್‌ಗಳು ಬಾರದೆ ಇರುವುದರಿಂದ ಒಂದು ವಾರದ ಹಿಂದೆ ಶಾಲಾ ವಿದ್ಯಾರ್ಥಿಗಳು ರಸ್ತೆಯನ್ನು ತಡೆದು ಪ್ರತಿಭಟನೆ ಮಾಡಿದ ನಂತರ ಕೆಲವೇ ಕೆಲವು ಬಸ್‌ಗಳು ನಿಗದಿತ ವೇಳೆಗೆ ಆಗಮಿಸುತ್ತಿವೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರೂ ತೊಂದರೆ ಅನುಭವಿಸುವ ಪರಿಸ್ಥಿತಿ ಬಂದಿದೆ. ಇಷ್ಟೆಲ್ಲ ತೊಂದರೆ ಆಗುತ್ತಿರುವುದು ಕೆಎಸ್‌ಆರ್‌ಟಿಸಿ ಮೇಲಧಿಕಾರಿಗಳ ಗಮನಕ್ಕೆ ಬಂದಿಲ್ಲವೋ ಬಂದರೂ ಕೂಡ ಸುಮ್ಮನಿದ್ದಾರೆಯೇ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಘಟಕದಲ್ಲಿ ಸಿಬ್ಬಂದಿ ರಜೆಯಿಂದ ಸಮಸ್ಯೆ ಇದೆ. ಹಾಜರಿರುವ ಸಿಬ್ಬಂದಿಗಳಿಂದ ಆದಷ್ಟುಜನರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸುವ ಹಾಗೆ ಮಾಡಿದ್ದೇವೆ. ನಮ್ಮ ಡಿಪೋಗೆ ಇನ್ನೂ 3 ಟಿಸಿಗಳ ಕೊರತೆ ಮತ್ತು ಕಿರಿಯ ಸಹಾಯಕರ ಕೊರತೆ ಇದೆ ಎಂದು ಘಟಕ ವ್ಯವಸ್ಥಾಪಕ ಮಹೇಶ್ವರಿ ಬಿ. ಅವರು ಹೇಳಿದ್ದಾರೆ. 

ಸರಿಯಾಗಿ ಬಸ್‌ಗಳನ್ನು ಬಿಡದ ಪರಿಣಾಮ ಸಮಸ್ಯೆಯಾಗಿದೆ. ಇದರ ವಿರುದ್ಧ ಮೌಖಿಕವಾಗಿ ಹೇಳಿ ಸಾಕಾಗಿದ್ದು, ಪ್ರತಿಭಟನೆಗೆ ಸಿದ್ಧವಾಗಿದ್ದೇವೆ ಎಂದು ಸಾರ್ವಜನಿಕ ಪ್ರವೀಣ ಪಾಟೀಲ ಅವರು ತಿಳಿಸಿದ್ದಾರೆ. 

click me!