ಬಳ್ಳಾರಿ: ಆಂಧ್ರ ಗಡಿಭಾಗದಲ್ಲಿ ಭಾರೀ ಮಳೆ, ನದಿಯಲ್ಲಿ ಕೊಚ್ಚಿಹೋದ ಎತ್ತು

By Kannadaprabha NewsFirst Published Aug 30, 2022, 11:35 AM IST
Highlights

ತುಂಬಿ ಹರಿಯುತ್ತಿರುವ ವೇದಾವತಿ ನದಿ, ರಾರಾವಿ ಬಳಿಯ ಸೇತುವೆ ಮೇಲೆ ಹರಿಯುತ್ತಿರುವ ನೀರು, ಬ್ಯಾರಿಕೇಡ್‌ ಹಾಕಿ ಸೇತುವೆ ಮೇಲಿನ ಸಂಚಾರ ತಡೆದ ಪೊಲೀಸರು

ಸಿರುಗುಪ್ಪ(ಆ.30):  ತಾಲೂಕಿನಗಡಿ ಗ್ರಾಮಗಳಲ್ಲಿ ಹಾಗೂ ಆಂಧ್ರದ ಗಡಿಭಾಗದಲ್ಲಿ ಭಾರಿ ಸುರಿದಿದೆ. ಇದರಿಂದ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ನೀರು ಕುಡಿಯುತ್ತಿದ್ದ ಎತ್ತು ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಚಾಣಕನೂರು ಗ್ರಾಮದ ರೈತ ಈರಪ್ಪ ಭಾನುವಾರ ಸಂಜೆ ಎತ್ತಿನಗಾಡಿ ಸಮೇತ ಎತ್ತುಗಳಿಗೆ ನೀರು ಕುಡಿಸಲು ನದಿಯ ಬಳಿ ಹೋದ ಸಂದರ್ಭದಲ್ಲಿ ಏಕಾಏಕಿ ಪ್ರವಾಹ ಹೆಚ್ಚಾಗಿದೆ. ಈರಪ್ಪ ಮತ್ತು ಒಂದು ಎತ್ತು ಈಜಿ ದಡ ಸೇರಿದರೆ ಎತ್ತಿನಗಾಡಿ ಮತ್ತು ಇನ್ನೊಂದು ಎತ್ತು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಎಸ್‌. ಸೋಮಲಿಂಗಪ್ಪರೈತನಿಗೆ ವೈಯಕ್ತಿಕವಾಗಿ ಹತ್ತು ಸಾವಿರ ಪರಿಹಾರ ನೀಡಿದರು.
ನದಿಯಲ್ಲಿ ಪ್ರವಾಹ ಮಟ್ಟಹೆಚ್ಚಾಗಿದ್ದು, ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಪೊಲೀಸ್‌ ಇಲಾಖೆಯಿಂದ ಸುರಕ್ಷತಾ ದೃಷ್ಟಿಯಿಂದ ನದಿಯ ಎರಡು ಬದಿಯಲ್ಲಿ ಅಡ್ಡವಾಗಿ ಬ್ಯಾರಿಕೇಡ್‌ ಅಳವಡಿಸಿ ರಸ್ತೆ ಸಂಚಾರ ತಡೆದಿದೆ.

ಅರ್ಧ ಕರ್ನಾಟಕದಲ್ಲಿ ಭರ್ಜರಿ ಮಳೆ: ಇಬ್ಬರ ಸಾವು

ಪ್ರಸ್ತುತ ಸೇತುವೆ ತೀರಾ ತಳಮಟ್ಟದಲ್ಲಿದೆ. ಹೀಗಾಗಿ, ಎತ್ತರದ ಸೇತುವೆ ನಿರ್ಮಾಣಕಾರ್ಯ ಪ್ರಾರಂಭವಾಗಿ ದಶಕಗಳೇ ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಜನ ಈ ಕಾಮಗಾರಿ ಮುಗಿಯುವುದು ಯಾವಾಗ ಎಂದು ಸಂಬಂಧಿಸಿದವರಿಗೆ ಹಿಡಿಶಾಪ ಹಾಕುವಂತಾಗಿದೆ.

ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ತಡೆದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ನದಿ ದಂಡೆಯ ಎರಡೂ ಕಡೆ ಸುಮಾರು ಎರಡು ಕಿಮೀಗಿಂತಲೂ ದೂರ ವಾಹನಗಳ ಸಾಲಾಗಿ ನಿಂತಿವೆ.
 

click me!