
ಬಳ್ಳಾರಿ (ಮೇ.26): ಬಳ್ಳಾರಿಯಲ್ಲಿ ಐವತ್ತಕ್ಕೂ ಹೆಚ್ಚು ಗೋವುಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಹಳೇ ಬೈಪಾಸ್ನ ಗೋಲಬಡಿ ರಸ್ತೆಯಲ್ಲಿರುವ ಕೊಟ್ಟಿಗೆಯಲ್ಲಿ ಗೋವುಗಳನ್ನು ಇರಿಸಲಾಗಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳಿಗೆ ಸುಳಿವು ಸಿಗುತ್ತಿದ್ದಂತೆ ಎಚ್ಚತ್ತ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಗೋವುಗಳಿರುವುದು ಪತ್ತೆಹಚ್ಚಿದ್ದಾರೆ. ಬಳಿಕ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಹಿಂದೂ ಸಂಘಟನೆಯ ಮುಖಂಡರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಕೌಲಬಜಾರ್ ಪೊಲೀಸರು ಗೋವುಗಳನ್ನ ಕೂಡಿಹಾಕಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ದೊಡ್ಡ ಸಂಖ್ಯೆಯಲ್ಲಿ ಗೋವುಗಳು ಪತ್ತೆಯಾಗಿವೆ.
ಇಷ್ಟೊಂದು ಪ್ರಮಾಣದ ಗೋವುಗಳನ್ನು ಕೊಟ್ಟಿಗೆಯಲ್ಲಿ ಯಾಕೆ ಸಂಗ್ರಹಿಸಿಡಲಾಗಿತ್ತು ಎಂಬ ಪ್ರಶ್ನೆಗೆ ಸ್ಥಳದಲ್ಲಿದ್ದವರು ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಗೋವು ಕೂಡಿಹಾಕಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.
ಬಕ್ರೀದ್ ಹಿನ್ನೆಲೆ ಆರೋಪ
ಹಿಂದೂ ಸಂಘಟನೆಗಳು ಆರೋಪಿಸುವಂತೆ, ಬಕ್ರೀದ್ ಹಬ್ಬದ ಹಿನ್ನೆಲೆ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸಲು ಸಂಗ್ರಹಿಸಲಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿವೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಶಕ್ಕೆ ಪಡೆದ ಗೋವುಗಳು ಗೋಶಾಲೆಗೆ
ಸದ್ಯ ಪತ್ತೆಯಾದ ಎಲ್ಲ ಗೋವುಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಕ್ರಮ ಗೋವುಗಳ ಸಾಗಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರೂ ರಾಜ್ಯಾದ್ಯಂತ ಅವ್ಯಹತವಾಗಿ ಅಕ್ರಮ ಗೋ ಸಾಗಾಟ ನಡೆಯುತ್ತಿರುವುದು ದುರಂತವೇ ಸರಿ.