
ಮೈಸೂರು (ಮೇ.26): ಘೋಷಣೆ, ಅನುಷ್ಠಾನ ಆಧಾರಿತ ರಾಜಕಾರಣ ನಮ್ಮ ಧ್ಯೇಯ. ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ಕೊನೆಯ ಜನರನ್ನೂ ತಲುಪಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಹೊರ ವಲಯದ ಲಿಂಗದೇವರಕೊಪ್ಪಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಆಶ್ರಮದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ - 2026 ಅಂಗವಾಗಿ ಬಿಜೆಪಿಯ ಮೈಸೂರು ನಗರದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಶಿಸ್ತಿಲ್ಲದ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಅಂತಹ ಪಕ್ಷ ದೃಶ್ಯದಲ್ಲಿ ಯಾವ ಸ್ಥಿತಿಗೆ ಬಂದಿದೆ ಎಂದು ನೋಡಿದ್ದೇವೆ. ಪಕ್ಷದ ಪ್ರತಿಯೊಬ್ಬನೂ ಗೌರವ ಪಡೆಯಲು ಪಕ್ಷದ ಮೂಲ ಸಿದ್ಧಾಂತ ತಿಳಿಯಬೇಕು ಎಂಬ ಕಾರಣಕ್ಕೆ ಪ್ರಶಿಕ್ಷಣ ವರ್ಗ ಆರಂಭವಾಗಿದೆ. ಪಕ್ಷದ ಕಾರ್ಯಕರ್ತ ಬಲಿಷ್ಠನಾದಾಗ ಪಕ್ಷ ಬಲಿಷ್ಠನಾಗುತ್ತಾನೆ ಎಂದರು. ರಾಜಕಾರಣದಲ್ಲಿ ವಿಚಾರಗಳನ್ನು ಒಳಗಿಟ್ಟುಕೊಂಡು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರೆ, ಕಾರ್ಯಕರ್ತ ಬೆಳವಣಿಗೆ ಆಗುವುದಿಲ್ಲ. ಬಿಜೆಪಿ ವಿಚಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿಕೊಂಡು ಬಂದಿದೆ. ದೇಶ ಮೊದಲು ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡಿದೆ. ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ.
ಆರ್ಟಿಕಲ್ 370 ವಿಚಾರಗಳನ್ನು ಅಧಿಕಾರ ಇದ್ದಾಗ ಇಲ್ಲದಾಗಲೂ ಪ್ರತಿಪಾದಿಸಿದ್ದೆವು. ಸ್ವಾಭಿಮಾನಿ, ಸಮೃದ್ಧ ದೇಶದ ವಿಚಾರಕ್ಕೆ ಬದ್ದವಾದ ರಾಜಕೀಯ ನೀತಿ ಬರಲು ಬಿಜೆಪಿ ರೂಪುಗೊಂಡಿದ್ದಾಗಿ ಅವರು ಹೇಳಿದರು. ರಾಜಕಾರಣಿಗಳಿಗೂ ಪುನಶ್ಚೇತನ ಕಾರ್ಯಕ್ರಮ ಇರುತ್ತದೆ. ಬದಲಾವಣೆಗೆ ಅನುಗುಣವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಹಿರಿಯರ ವಿಚಾರಕ್ಕೆ ಬದ್ಧವಾಗಿ ನಾವು ಕೆಲಸ ಮಾಡಬೇಕು. ನೀವು ಜನರ ಬಳಿಗೆ ಯೋಜನೆ ತಲುಪಿಸಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಯಶಸ್ವಿಯಾಯಿತು ಎಂದರು.
ರಾಜಕೀಯ ಪಕ್ಷದ ಕಾರ್ಯಕರ್ತ ಹೀಗಿರಬೇಕೋ ಅಂತಹ ನಡವಳಿಕೆ ಇರಬೇಕು. ಎಲ್ಲರೂ ವಿವೇಕಾನಂದರು, ನರೇಂದ್ರ ಮೋದಿ ಆಗಲು ಸಾಧ್ಯವಿಲ್ಲ. ಆದರೆ ಸದ್ವಿಚಾರಗಳನ್ನು ಅಳವಡಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳಬೇಕು. ಹೊಗಳಿಕೆಯಲ್ಲಿ ಅಡಗಿರುವ ಸುಳ್ಳನ್ನು ಯಾರು ತಿಳಿದುಕೊಳ್ಳುತ್ತಾರೋ ಅವರು ಯಶಸ್ವಿಯಾಗುತ್ತಾರೆ. ಟೀಕೆಯಲ್ಲಿ ಅಡಗಿರುವ ಸುಳ್ಳು. ಹೊಗಳಿಕೆಯಲ್ಲಿನ ಸತ್ಯ ಎರಡನ್ನೂ ಗುರುತಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಒಬ್ಬ ಜನಪ್ರತಿನಿಧಿಯ ಶೇ. 75ರಷ್ಟು ಶಕ್ತಿ ಕಾರ್ಯಕರ್ತರು ಹಾಗೂ ಪಕ್ಷ ಆಗಿರುತ್ತದೆ. ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ನೀವು ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಳ್ಳಲು ಕಾರ್ಯಕರ್ತರ ಅಗತ್ಯವಿದೆ ಎಂದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಮಾತನಾಡಿ, ಬಿಜೆಪಿಯ ಬೇರು ಕಾರ್ಯಕರ್ತರು. ಅವರೇ ನಮ್ಮ ನಾಯಕರು. ಭಾರತೀಯ ಸಿದ್ಧಾಂತವೇ ನಮ್ಮ ಸಿದ್ದಾಂತ ಆಗಿರುವುದರಿಂದ ರಾಷ್ಟ್ರವೇ ನಮ್ಮನ್ನು ಒಪ್ಪಿಕೊಂಡಿದೆ. ವೈಯಕ್ತಿಕ ಆಕಾಂಕ್ಷೆಯ ಜೊತೆಗೆ ಸಿದ್ಧಾಂತದ ಗುರಿಯೊಂದಿಗೆ ಮುಂದುವರಿಯಬೇಕು. ದೇಶದಲ್ಲಿ ಬಲಿಷ್ಠವಾಗಿ ಇದ್ದರೂ, ಶ್ರೇಷ್ಠ ದೇಶ ನಿರ್ಮಾಣಕ್ಕೆ ಅನೇಕ ಸಮಸ್ಯೆ ಇದೆ. ಅದನ್ನು ಎದುರಿಸಲು ಕಾರ್ಯಕರ್ತರ ಶಕ್ತಿ ಅಗತ್ಯ ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಅವರನ್ನು ಹೇಗೆ ಎದುರಿಸುತ್ತೇವೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದುರಾಡಳಿತದ ಬಗ್ಗೆ ಜನರಿಗೆ ತಿಳಿಸಬೇಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಬರುವ ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.