ನಮ್ಮ ದೇಶಕ್ಕೆ ಸಮರ್ಥ ನಾಯಕತ್ವ ಇದೆ, ಯುವಜನತೆ ಜಡತ್ವದಿಂದ ಹೊರಬರಲಿ: ಚಕ್ರವರ್ತಿ ಸೂಲಿಬೆಲೆ

By Kannadaprabha NewsFirst Published Jul 4, 2024, 7:55 PM IST
Highlights

ದೇಶದಲ್ಲಿ ಸ್ವಾತಂತ್ರ್ಯ ನಂತರವೂ ನಿರಾಳ ಭಾವ ಮೂಡುತ್ತಿದೆ. ಯುವಜನತೆ ಈಗಲಾದರೂ ತಮ್ಮ ಜಡತ್ವ ಬದಿಗಿಟ್ಟು, ಸೆಟೆದು ನಿಲ್ಲಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 

ಹೊಸಪೇಟೆ (ಜು.04): ದೇಶದಲ್ಲಿ ಸ್ವಾತಂತ್ರ್ಯ ನಂತರವೂ ನಿರಾಳ ಭಾವ ಮೂಡುತ್ತಿದೆ. ಯುವಜನತೆ ಈಗಲಾದರೂ ತಮ್ಮ ಜಡತ್ವ ಬದಿಗಿಟ್ಟು, ಸೆಟೆದು ನಿಲ್ಲಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ, ಶ್ರೀರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ಅರ್ಧವಾರ್ಷಿಕ ಸಭೆಯ ಹಿನ್ನೆಲೆಯಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಯುವ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.

ನಮ್ಮ ದೇಶಕ್ಕೆ ಸಮರ್ಥ ನಾಯಕತ್ವ ಇದೆ. ಶತ್ರುಗಳು ನಮ್ಮನ್ನು ಕಂಡು ಭಯಪಡುವ ಸ್ಥಿತಿ ಇದೆ. ವಿವೇಕಾನಂದರು ಹೇಳಿದಂತಹ ದೇಶದಲ್ಲೀಗ ನಾಯಕತ್ವ ಗುಣ ಪ್ರದರ್ಶನ ಆಗುತ್ತಿದೆ. ಈ ಹಂತದಲ್ಲೂ ಯುವಜನತೆ ತಮ್ಮ ಶಕ್ತಿ ಒಗ್ಗೂಡಿಸಿಕೊಂಡು ವಿವೇಕವಾಣಿಯಂತೆ ನಡೆಯುವ ಧೈರ್ಯ ತೋರಬೇಕು. ವಿವೇಕಾನಂದರ ಚಿಂತನೆಗಳು ನಮ್ಮ ಮುಂದಿವೆ. ಯುವಜನತೆ ಮೇಲೆ ಅವರು ಇಟ್ಟಿದ್ದ ಅಪಾರ ನಂಬಿಕೆಯನ್ನು ಸಾಕಾರಗೊಳಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.

ಮಠಾಧೀಶರ ಗಟ್ಟಿ ನಿಲುವಿನಿಂದಾಗಿ ದೇಶದಲ್ಲಿ ಧರ್ಮ ಉಳಿದಿದೆ: ಶಾಸಕ ಎಚ್.ಡಿ.ತಮ್ಮಯ್ಯ

ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದಜಿ ಸ್ವಾಮೀಜಿ ಮಾತನಾಡಿ, ಭಾರತೀಯರ ರಕ್ತದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಅನಾಗರಿಕ ದೇಶದವರನ್ನೂ ನಾಗರಿಕರನ್ನಾಗಿ ಮಾಡಿದ್ದು ನಾವು. ನಾವೆಲ್ಲ ಸಿಂಹಗಳಾದರೂ ಕುರಿಗಳಂತೆ ಬದುಕಿದ್ದೇವೆ. ವಿವೇಕಾನಂದರೇ ನಿಮಗೆ ಪ್ರೇರಣೆ ಆಗದಿದ್ದರೆ ಜಗತ್ತಿನಲ್ಲಿ ಬೇರೆ ಯಾರೂ ಪ್ರೇರಣೆ ಆಗಲು ಸಾಧ್ಯವಿಲ್ಲ ಎಂದರು. ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಲ್ಯಾಣ ಕರ್ನಾಟಕದ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಮಯಾನಂದಜಿ ಮಹಾರಾಜ್ ಮಾತನಾಡಿ, ನಾನು ಸ್ವಾತಂತ್ರ್ಯ ತಂದುಕೊಟ್ಟರೆ ಅದನ್ನು ಉಳಿಸಿಕೊಳ್ಳುವವರು ಯಾರು ಎಂದು ವಿವೇಕಾನಂದರು ಕೇಳಿದ್ದರು? ಇನ್ನು 50 ವರ್ಷಗಳ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಬಹುದು ಎಂದು 1900ರಲ್ಲೇ ವಿವೇಕಾನಂದರು ತಿಳಿಸಿದ್ದರು. ಅವರ ಮಾತು ನಿಜವಾಗಿದೆ. ನಾಯಕತ್ವ ಕೊರತೆ ಸ್ವಾತಂತ್ರ್ಯದ ಬಳಿಕವೂ ಕಾಡುತ್ತಲೇ ಇತ್ತು. ಅದರ ಸ್ಪಷ್ಟ ಚಿತ್ರಣ ಸಿಗಬೇಕಿದ್ದರೆ ನಾವು ಗಡಿ ಭಾಗಕ್ಕೆ ಹೋಗಬೇಕು ಎಂದರು.

ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ: ಪೇಜಾವರ ಶ್ರೀ

ಬೆಂಗಳೂರು ಹಲಸೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್‌, ದಾವಣಗೆರೆ ರಾಮಕೃಷ್ಣ ಮಿಶನ್‌ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್‌, ರಾಣೆಬೆನ್ನೂರಿನ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶನಂದಜಿ ಮಹಾರಾಜ್‌ ಇದ್ದರು. ಶಿಕ್ಷಕ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.

click me!