ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

By Kannadaprabha NewsFirst Published May 14, 2020, 7:41 AM IST
Highlights

ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ಆಪರೇಷನ್‌ ಹಸ್ತ|4-8 ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸೇರುವ ಸಾಧ್ಯತೆ|ಈ ಬಗ್ಗೆ ಸದಸ್ಯರ ನಡುವೆ ಮುಂದುವರಿದ ಮಾತುಕತೆ|ನಾಲ್ವರು ಸೇರುವುದು ಪಕ್ಕಾ, ಉಳಿದವರ ಮನವೊಲಿಕೆ ಯತ್ನ|

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.14): ಕೊರೋನಾ ಕೋಲಾಹಲದ ಮಧ್ಯೆಯೂ ಕೊಪ್ಪಳದಲ್ಲಿ ರಾಜಕೀಯ ಚದುರಂಗದಾಟ ಜೋರಾಗಿ ನಡೆಯುತ್ತಿದ್ದು, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ಧ ಅವಿಶ್ವಾಸ ಮಂಡಿಸಲು ಭಾರೀ ರಣತಂತ್ರ ನಡೆಯುತ್ತಿದೆ. ರಾಜ್ಯ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಶಾಕ್‌ ನೀಡಲು ಕಾಂಗ್ರೆಸ್‌ ಮುಂದಾಗಿದ್ದು, ಈಗಾಗಲೇ ನಾಲ್ವರು ಸದಸ್ಯರ ಆಪರೇಷನ್‌ ಹಸ್ತ ಮಾಡಿರುವ ಕೈ ಪಕ್ಷ ಇನ್ನೂ ನಾಲ್ವರು ಸದಸ್ಯರತ್ತ ಚಿತ್ತ ಹರಿಸಿದೆ.

ಅವಿಶ್ವಾಸ ಗೊತ್ತುವಳಿಗೆ ಪೂರಕವಾಗಿ ವೇದಿಕೆ ಸಿದ್ಧಪಡಿಸಿಕೊಂಡಿರುವ ಕಾಂಗ್ರೆಸ್‌ ಏಳು ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ. ಇವರಲ್ಲಿ ನಾಲ್ವರು ಕಾಂಗ್ರೆಸ್‌ ಸೇರುವುದು ಪಕ್ಕಾ ಆಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿದ್ದು, ಉಳಿದ ನಾಲ್ವರನ್ನೂ ಕಾಂಗ್ರೆಸ್‌ಗೆ ಸೆಳೆಯುವ ದಿಸೆಯಲ್ಲಿ ತಂತ್ರಗಾರಿಕೆ ನಡಯುತ್ತಿದೆ.

ಕಂಪ್ಲಿ ಪ್ರಕರಣ: ಕೊರೋನಾ ಸೋಂಕಿತೆ ಜತೆ ಸಂಪ​ರ್ಕ​ದ​ಲ್ಲಿ​ದ್ದ ಮಹಿಳೆ ಪತ್ತೆ..!

ಎರಡನೇ ಹಂತ:

ಪ್ರಾರಂಭದಲ್ಲಿ ಕೇವಲ ಅವಿಶ್ವಾಸ ಗೊತ್ತುವಳಿ ಮಂಡನೆ ಹಾಗೂ ಅದರ ಅಂಗೀಕಾರ ಕುರಿತಂತೆ ನಡೆದಿದ್ದ ಮಾತುಕತೆ ಇದೀಗ ಇನ್ನಷ್ಟುಮುಂದುವರಿದಿದ್ದು, ಬಿಜೆಪಿ ಸದಸ್ಯರ ಪಕ್ಷಾಂತರಕ್ಕೆ ಪ್ಲ್ಯಾನ್‌ ಸಿದ್ಧಗೊಂಡಿದೆ. 8 ಸದಸ್ಯರು ಪಕ್ಷಾಂತರ ಮಾಡಿದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ತಂತ್ರಗಾರಿಕೆ ಮಾಡಲಾಗುತ್ತಿದೆ.

ರಣತಂತ್ರ:

ಹಾಲಿ ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಕಾಂಗ್ರೆಸ್‌ನ ಆಂತರಿಕ ಮಾತುಕತೆಯ ಪ್ರಕಾರ ಫೆಬ್ರವರಿಯಲ್ಲಿ ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಹಿನ್ನೆಲೆಯಲ್ಲಿ ಅವರ ಪದಚ್ಯುತಿಗೆ ಈ ಕಾರ್ಯಾಚರಣೆಗೆ ವೇದಿಕೆ ಸಿದ್ಧಗೊಡಂಡಿದೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಈ ಕಾರ್ಯಾಚರಣೆಯ ರೂವಾರಿಯಾಗಿದ್ದಾರೆ ಎನ್ನಲಾಗಿದೆ. ಈಗಿನ ಅಧ್ಯಕ್ಷರ ಪದಚ್ಯುತಿ, ಮುಂದಿನ ಅಧ್ಯಕ್ಷರ ಆಯ್ಕೆ, ಚುನಾವಣೆ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಮಾತುಕತೆ ನಡೆಯುತ್ತಿದೆ.

ಕಟ್ಟರ್‌ಗಳು ಕೈಕೊಟ್ಟರು:

ಮೊದಲಿನಿಂದಲೂ ಬಿಜೆಪಿಯಲ್ಲಿದ್ದವರು, ಆ ಪಕ್ಷದ ನಾಯಕರ ಜೊತೆ ನಿಕಟವಾಗಿ ಗುರುತಿಸಿಕೊಂಡಿರುವ ಸದಸ್ಯರೇ ಇದೀಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಮುಂದಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
 

click me!