
ಪ್ರೀತಿ ಎಂಬುದು ಎರಡು ಮನಸ್ಸುಗಳು ಬೆಸೆದು ಹುಟ್ಟುವ ಪವಿತ್ರ ಭಾವನೆ. ಆದರೆ, ಪ್ರೀತಿಯ ಹೆಸರಿನಲ್ಲಿ ಒತ್ತಾಯ ಮಾಡುವುದು ಅಥವಾ ಜೀವದ ಹಂಗು ತೊರೆದು ಹುಚ್ಚಾಟವಾಡುವುದು ಎಷ್ಟರ ಮಟ್ಟಿಗೆ ಸರಿ? ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಭಗ್ನ ಪ್ರೇಮಿಯೊಬ್ಬನ ಹುಚ್ಚಾಟ ಇಡೀ ನಗರದ ಜನತೆಯನ್ನು ಹಾಗೂ ಪೊಲೀಸರನ್ನು ಉಸಿರುಬಿಗಿಹಿಡಿದು ನೋಡುವಂತೆ ಮಾಡಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ರಾಜು ಎಂಬ ಯುವಕ ಕಳೆದ ಕೆಲವು ದಿನಗಳಿಂದ ಯುವತಿಯೊಬ್ಬಳನ್ನು ಒನ್ ಸೈಡ್ ಪ್ರೀತಿಸುತ್ತಿದ್ದ. ಆದರೆ, ಆ ಯುವತಿ ಈತನ ಪ್ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಳು. ಆದಾಗ್ಯೂ, ಯುವತಿಯನ್ನು ಬಲವಂತವಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ರಾಜು, ಆಕೆಯ ಮನ ಒಲಿಸಲು ವಿಫಲನಾಗಿದ್ದ. ಇದರಿಂದ ತೀವ್ರ ನಿರಾಶೆಗೊಂಡ ಭಗ್ನಪ್ರೇಮಿ, ತನ್ನ ಒನ್ಸೈಡ್ ಲವ್ ಸಕ್ಸಸ್ ಆಗಲೇಬೇಕು ಎಂಬ ಉದ್ದೇಶದಿಂದ ಗಂಗಾವತಿಯಲ್ಲಿರುವ ಬೃಹತ್ ಮೊಬೈಲ್ ಟವರ್ ಏರಿ ಕುಳಿತು ಹೈಡ್ರಾಮಾ ಸೃಷ್ಟಿಸಿದ್ದಾನೆ.
ವಿಶೇಷವೆಂದರೆ, ರಾಜು ಈ ರೀತಿ ಟವರ್ ಏರಿ ಸಾರ್ವಜನಿಕರಿಗೆ ಸಿಡಿಲು ಬಡಿದಂತ ಮಾಡಿದ್ದು ಇದೇ ಮೊದಲ ಬಾರಿಯೇನಲ್ಲ. ಕಳೆದ ಎರಡ್ಮೂರು ದಿನಗಳ ಹಿಂದಷ್ಟೇ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿಯೂ ಇದೇ ರೀತಿಯಲ್ಲಿ ಟವರ್ ಏರಿ ಕುಳಿತಿದ್ದ. ಅಂದು ಆತನ ಕುಟುಂಬಸ್ಥರು ಮತ್ತು ಪೊಲೀಸರು ಗಂಟೆಗಟ್ಟಲೆ ಮನವೊಲಿಸಿ, ಕಷ್ಟಪಟ್ಟು ಕೆಳಗೆ ಇಳಿಸಿದ್ದರು. ಆದರೆ, ಆ ಘಟನೆ ಮುಗಿದು ಎರಡ್ಮೂರು ದಿನಗಳು ಕಳೆಯುವಷ್ಟರಲ್ಲೇ, ಮತ್ತೆ ಗಂಗಾವತಿ ನಗರದಲ್ಲಿ ಅದೇ ರೀತಿಯ 'ಟವರ್ ಗಿಮಿಕ್' ಮುಂದುವರಿಸಿದ್ದಾನೆ.
ಕಳೆದ ಎರಡ್ಮೂರು ಗಂಟೆಗಳಿಂದ ಈ ಪಾಗಲ್ ಪ್ರೇಮಿ ಬಿಸಿಲಿನಲ್ಲಿ ಟವರ್ ಮೇಲೆ ಕುಳಿತುಕೊಂಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು, "ಕೆಳಗೆ ಇಳಿ, ಏನಿದ್ದರೂ ಕುಳಿತು ಮಾತನಾಡೋಣ" ಎಂದು ಗಂಟೆಗಟ್ಟಲೆ ಗೋಗರೆದರೂ ಯುವಕ ರಾಜು ಮಾತ್ರ ಯಾವುದಕ್ಕೂ ಕಿವಿಕೊಡುತ್ತಿಲ್ಲ. ಪ್ರೇಯಸಿ ಬಂದು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವವರೆಗೂ ತಾನು ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.
ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಗಂಗಾವತಿ ನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಯುವಕ ಎಲ್ಲಿಯಾದರೂ ಆಯತಪ್ಪಿ ಕೆಳಗೆ ಬಿದ್ದುಬಿಡುತ್ತಾನೋ ಎಂಬ ಭೀತಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಟವರ್ ಕೆಳಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪೊಲೀಸರು ಮೆಗಾಫೋನ್ ಮೂಲಕ ಯುವಕನ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ. ಪ್ರೀತಿ ಸಿಗಲಿಲ್ಲವೆಂದು ಪ್ರಾಣಕ್ಕೇ ಕಂಟಕ ತಂದೊಡ್ಡುವ ಇಂತಹ ಹುಚ್ಚಾಟಗಳು ಯುವಜನತೆಯ ದಾರಿ ತಪ್ಪುತ್ತಿರುವ ಸಾಕ್ಷಿಯಂತಿದ್ದು, ಈ ಪ್ರೇಮಿಯ ಹೈಡ್ರಾಮಾ ಯಾವಾಗ ಮುಗಿಯುತ್ತದೆ ಮತ್ತು ಆತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.