ಗ್ರಾಮಗಳಲ್ಲಿ ನೀರಿನ ತೊಂದರೆಯಾದರೆ ಅಧಿಕಾರಿಗಳೇ ಹೊಣೆ; ಸಚಿವ ಈಶ್ವರಪ್ಪ

By Suvarna NewsFirst Published May 21, 2020, 9:38 AM IST
Highlights

ಕೇಂದ್ರ ಸರ್ಕಾರ ಮನೆಮನೆಗೆ ಗಂಗೆ ಯೋಜನೆಯಡಿ ಮನೆಗಳಿಗೆ ನಲ್ಲಿ ಮೂಲಕ ನೀರು ನೀಡಲು ಮುಂದಾಗುವಂತೆ ತಿಳಿಸಿದೆ. ಎಷ್ಟು ಮನೆಗಳಿಗೆ ನಲ್ಲಿ ಮೂಲಕ ನೀರು ನೀಡಲಾಗುತ್ತದೋ ಅದರ ಆಧಾರದ ಮೇಲೆ ರಾಜ್ಯ ಸರ್ಕಾರಕ್ಕೆ ಅನುದಾನ ಬರಲಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೊರಬ(ಮೇ.21): ಯಾವುದೇ ಗ್ರಾಮ ಕುಡಿಯುವ ನೀರಿಗಾಗಿ ತೊಂದರೆಗೆ ಒಳಗಾಗಬಾರದು. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಧಿ​ಕಾರಿಗಳು ಮುಂದಾಗಬೇಕು. ಇದಕ್ಕೆ ಹಣದ ಕೊರತೆ ಇಲ್ಲ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆದಲ್ಲಿ ಅ​ಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅ​ಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ತಾಲೂಕಿನ ಬಿಳಾಗಿ ಗ್ರಾಮದಲ್ಲಿ ಇಂಗು ಬಾವಿಯ ಪ್ರಾತ್ಯಕ್ಷಿಕೆ ಉದ್ಘಾಟಿಸಿ ನಂತರ ಪಟ್ಟಣದ ರಂಗಮಂದಿರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲೆನಾಡಿನಲ್ಲಿ ಬೆಳೆಯಬಹುದಾದ ಅಗಲ ಎಲೆಗಳುಳ್ಳ ಎರಡು ವರ್ಷ ಮೇಲ್ಪಟ್ಟ ಸಸಿಗಳನ್ನು ಮಾತ್ರ ಕೆರೆಯ ಅಂಚಿನಲ್ಲಿ ನೆಡಬೇಕು. ಇದಕ್ಕೆ ಬೇಕಾಗುವ ಸಸಿಗಳನ್ನು ಸಾಮಾಜಿಕ ಅರಣ್ಯ ಹಾಗೂ ಅರಣ್ಯ ಇಲಾಖೆಯವರು ಒದಗಿಸಬೇಕು. ಒಂದು ವೇಳೆ ಎರಡು ವರ್ಷ ಮೇಲ್ಪಟ್ಟ ಸಸಿಗಳು ಸಿಗದೇ ಇದ್ದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಅವರೊಂದಿಗೆ ಮಾತನಾಡಿ ಖಾಸಗಿ ನರ್ಸರಿಗಳಿಂದ ಗಿಡಗಳನ್ನು ಖರೀದಿಸಲು ಅನುಮತಿ ಪಡೆಯಲು ಮುಂದಾಗಬೇಕು. ಜೂನ್‌ 5 ರೊಳಗೆ ನರೇಗಾ ಹಾಗೂ ಅಂತರ್ಜಲ ಚೇತನ ಯೋಜನೆಯಡಿ 200 ಕಾಮಗಾರಿಗಳನ್ನು ಪೂರೈಸಿ ಪರಿಸರ ದಿನಾಚರಣೆಯಂದು ಆಯಾಯ ಗ್ರಾಮ ಪಂಚಾಯ್ತಿಯ ಹಿರಿಯರೊಂದಿಗೆ ಗಿಡಗಳನ್ನು ನೆಡಲು ಮುಂದಾಗುವಂತೆ ಸೂಚಿಸಿದರು.

ಜಗಜೀವನ್‌ ಮಿಷನ್‌ ಯೋಜನೆಯ ಬಗ್ಗೆ ಜಿಪಂ ಸಿಇಒ ವೈಶಾಲಿ ಅವರಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಸರ್ಕಾರ ಮನೆಮನೆಗೆ ಗಂಗೆ ಯೋಜನೆಯಡಿ ಮನೆಗಳಿಗೆ ನಲ್ಲಿ ಮೂಲಕ ನೀರು ನೀಡಲು ಮುಂದಾಗುವಂತೆ ತಿಳಿಸಿದೆ. ಎಷ್ಟು ಮನೆಗಳಿಗೆ ನಲ್ಲಿ ಮೂಲಕ ನೀರು ನೀಡಲಾಗುತ್ತದೋ ಅದರ ಆಧಾರದ ಮೇಲೆ ರಾಜ್ಯ ಸರ್ಕಾರಕ್ಕೆ ಅನುದಾನ ಬರಲಿದೆ ಎಂದರು.

ಎಸ್‌ಪಿ ಕಚೇರಿ ಸೀಲ್‌ಡೌನ್‌ ಆಗಿಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ

ನೀರು ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ತಾಲೂಕಿನಲ್ಲಿ 48,610 ಮನೆಗಳನ್ನು ಗುರುತಿಸಿದ್ದು, ಇದರಲ್ಲಿ 9,614 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿದೆ. ಪ್ರಸ್ತುತ ವರ್ಷ 5 ಸಾವಿರ ಮನೆಗಳಿಗೆ ನಲ್ಲಿ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಾಸಕ ಕುಮಾರ್‌ ಬಂಗಾರಪ್ಪ ತಾಲೂಕಿನ 130 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದ್ದು, ಇದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಾಗ ಯಾವುದೇ ಗ್ರಾಮಗಳು ಸಹ ಕುಡಿಯುವ ನೀರಿಗಾಗಿ ತೊಂದರೆಗೆ ಒಳಗಾಗಬಾರದು. ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅ​ಧಿಕಾರಿಗಳು ಮುಂದಾಗಬೇಕು ಎಂದರು.

ಜಿಪಂ ಸಿಇಒ ವೈಶಾಲಿ, ತಹಸೀಲ್ದಾರ್‌ ನಫೀಸಾ ಬೇಗಂ, ಇಒ ನಂದಿನಿ, ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ, ತಾಪಂ ಅಧ್ಯಕ್ಷೆ ನಯನ ಶ್ರೀಪಾದ ಹೆಗಡೆ, ಜಿಪಂ ಸದಸ್ಯರಾದ ತಾರಾ ಶಿವಾನಂದ, ಶಿವಲಿಂಗೇಗೌಡ, ರಾಜೇಶ್ವರಿ ಗಣಪತಿ, ಸಂತೋಷ್‌ ಶಿವಮೊಗ್ಗ, ಪಪಂ ಸದಸ್ಯ ಎಂ.ಡಿ. ಉಮೇಶ್‌, ಮಧುರಾಯ್‌ ಜಿ.ಶೇಟ್‌, ವೀರೇಶ್‌ ಮೇಸ್ತಿ್ರ, ನಟರಾಜ ಉಪ್ಪಿನ, ಆರ್ಟ್‌ ಆಫ್‌ ಲೀವಿಂಗ್‌ನ ನಾಗರಾಜ ಗಂಗೊಳ್ಳಿ, ಈರಾಪುರ, ಟಿ.ಡಿ. ಮೇಘರಾಜ ಸಾಗರ, ಗುರುಗೌಡ ಬಾಸೂರು, ನಿರಂಜನ ಕುಪ್ಪಗಡ್ಡೆ, ಶ್ರೀಪಾದ ಹೆಗಡೆ ಇದ್ದರು.
 

click me!