ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ಹೊರನಡೆದ ಶಾಸಕ ಪ್ರಭು ಚವ್ಹಾಣ್‌

By Kannadaprabha NewsFirst Published Jul 16, 2023, 9:13 AM IST
Highlights

ಔರಾದ್‌ (ಬಿ) ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಿಗದಿಯಾಗಿದ್ದ ತಾಲೂಕು ಕೆಡಿಪಿ ಸಭೆಗೆ ವಿವಿಧ ಇಲಾಖೆಯ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಬೇಸರಗೊಂಡ ಶಾಸಕ ಪ್ರಭು ಚವ್ಹಾಣ್‌ ಅಧಿಕಾರಿಗಳಿಲ್ಲದೆ ಸಭೆ ನಡೆಸಲಾಗಲ್ಲ, ಅಧಿಕಾರಿಗಳ ವರ್ತನೆ ಬೇಸರ ತಂದಿದೆ ಎಂದು ಸಭೆಯಿಂದ ಎದ್ದು ಹೊರನಡೆದ ಘಟನೆ ನಡೆಯಿತು.

ಔರಾದ್‌ (ಜು.16) :  ಔರಾದ್‌ (ಬಿ) ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಿಗದಿಯಾಗಿದ್ದ ತಾಲೂಕು ಕೆಡಿಪಿ ಸಭೆಗೆ ವಿವಿಧ ಇಲಾಖೆಯ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಬೇಸರಗೊಂಡ ಶಾಸಕ ಪ್ರಭು ಚವ್ಹಾಣ್‌ ಅಧಿಕಾರಿಗಳಿಲ್ಲದೆ ಸಭೆ ನಡೆಸಲಾಗಲ್ಲ, ಅಧಿಕಾರಿಗಳ ವರ್ತನೆ ಬೇಸರ ತಂದಿದೆ ಎಂದು ಸಭೆಯಿಂದ ಎದ್ದು ಹೊರನಡೆದ ಘಟನೆ ನಡೆಯಿತು.

ಶನಿವಾರ ಸಭೆಗೆ ಆಗಮಿಸಿದ ಶಾಸಕರು ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಿಎಂಜಿಎಸ್‌ವೈ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಅರಣ್ಯಾಧಿಕಾರಿ, ಕೈಗಾರಿಕಾ ವಿಸ್ತೀರ್ಣಾಧಿ​ಕಾರಿ, ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್‌ ಅ​ಧಿಕಾರಿಗಳು, ನಿಗಮ ಮಂಡಳಿಗಳ ಅಧಿ​ಕಾರಿಗಳು, ಅಬಕಾರಿ, ಆಹಾರ ಮತ್ತು ನಾಗರಿಕ ಸರಬರಾಜು, ಉಪ ನೋಂದಣಾಧಿ​ಕಾರಿ, ಭೂಮಾಪನಾ ಇಲಾಖೆ ಸೇರಿದಂತೆ ಹಲವು ಅಧಿ​ಕಾರಿಗಳು ಗೈರು ಹಾಜರಾಗಿದ್ದರು.

 

ಖಾಲಿ ಡಬ್ಬ ಹೆಚ್ಚು ಶಬ್ಧ ಮಾಡತ್ತೆ: ಖೂಬಾ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು

ಹಾಗೆಯೇ ಉಪ ನೋಂದಣಾ​ಧಿಕಾರಿ, ಕೆಎಸ್‌ಆರ್‌ಟಿಸಿ, ಕಂದಾಯ, ಅಬಕಾರಿ, ಎಪಿಎಂಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಟ್ಟಣ ಪಂಚಾಯಿತಿ ಒಳಗೊಂಡು ಅನೇಕ ಅಧಿ​ಕಾರಿಗಳು ಪ್ರಗತಿ ವರದಿ ಸಲ್ಲಿಸಿರಲಿಲ್ಲ. ಇದರಿಂದ ಕೆಂಡಾಮಂಡಲರಾದ ಶಾಸಕರು ಸಭೆಯನ್ನು ಮುಂದೂಡಲು ನಿರ್ಧರಿಸಿದರು.

ಕೆಡಿಪಿ ಸಭೆಗೆ ಸಾಕಷ್ಟುಅ​ಧಿಕಾರಿಗಳು ಗೈರು ಹಾಜರಾಗಿದ್ದಾರೆ. ಅನೇಕರು ಪ್ರಗತಿ ವರದಿಯನ್ನೇ ಸಲ್ಲಿಸಿಲ್ಲ. ಹೀಗಾದರೆ ಸಭೆ ಹೇಗೆ ನಡೆಸಬೇಕು, ಕ್ಷೇತ್ರದಲ್ಲಿ ಸಾಕಷ್ಟುಪ್ರಗತಿ ಕೆಲಸಗಳು ನಡೆಯುತ್ತಿವೆ. ಪ್ರಮುಖ ಇಲಾಖೆಗಳ ಅ​ಧಿಕಾರಿಗಳೇ ಇಲ್ಲವೆಂದರೆ ಯಾರಿಗೆ ಮಾಹಿತಿ ಕೇಳಬೇಕು ಎಂದು ಪ್ರಶ್ನಿಸಿದರು.

ಬಿತ್ತನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ರೈತರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿ​ಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ ಎಂದು ಅಧಿ​ಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅ​ಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಿಂದಿನ ಅನೇಕ ಸಭೆಗಳಲ್ಲಿ ಗೈರು ಹಾಜರಾದ ಅ​ಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದ ಕಾರಣ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ನೀವು ಸುಧಾರಿಸಿಕೊಳ್ಳಬೇಕು. ನಂತರ ಎಲ್ಲ ಅ​ಧಿಕಾರಿಗಳು ತಾನಾಗಿಯೇ ಸುಧಾರಿಸುತ್ತಾರೆ ಎಂದು ತಾಕೀತು ಮಾಡಿದರು.

ಅಧಿ​ಕಾರಿಗಳ ವಿರುದ್ಧ ಕ್ರಮ ಜರುಗಿಸಿ:

ಬಳಿಕ ಶಾಸಕ ಪ್ರಭು ಚವ್ಹಾಣ್‌ ಅವರು ಜಿಲ್ಲಾ​ಧಿಕಾರಿಗಳು ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿ​ಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಕೆಡಿಪಿ ಸಭೆಯಲ್ಲಿ ಒಬ್ಬಿಬ್ಬರು ಅನಿವಾರ್ಯ ಕಾರಣಗಳಿಂದ ಗೈರು ಹಾಜರಾದರೆ ನಡೆದೀತು, ಆದರೆ 8ಕ್ಕೂ ಹೆಚ್ಚು ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸಾಕಷ್ಟುಕಾಮಗಾರಿಗಳು ನಿಂತು ಹೋಗಿವೆ ಅವುಗಳ ಬಗ್ಗೆ ಚರ್ಚಿಸಬೇಕಿತ್ತು, ಆದರೆ ಅಧಿಕಾರಿ ಸಭೆಗೆ ಹಾಜರಾಗಿಯೇ ಇಲ್ಲ ಇಂಥವರ ಮತ್ತು ಪ್ರಗತಿ ವರದಿ ಸಲ್ಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ತಿಳಿಸಿದರು.

ರಾದ್‌: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥ, ಸಂತ್ರಸ್ತರ ಆರೋಗ್ಯ ವಿಚಾರಿಸಿದ ಶಾಸಕ ಪ್ರಭು ಚವ್ಹಾಣ್‌

 

ಔರಾದ್‌ ತಾಪಂ ಕಾರ್ಯನಿರ್ವಾಹಕ ಅಧಿಕಾರಿಯು, ಇತರ ಇಲಾಖೆ ಅಧಿಕಾರಿಗಳಿಗೆ ಸರಿಯಾಗಿ ಎಚ್ಚರಿಕೆ ನೀಡದ ಕಾರಣ ಕೆಲವು ಅಧಿ​ಕಾರಿಗಳು ಕೆಡಿಪಿ ಸಭೆಗೆ ಗೌರವ ಕೊಡುತ್ತಿಲ್ಲ. ಹೀಗೆಯೇ ಮುಂದುವರೆದಲ್ಲಿ ತಾಪಂ ಇಒ ವಿರುದ್ಧವೇ ಕ್ರಮ ಜರುಗಿಸಬೇಕಾಗುತ್ತದೆ ಎಚ್ಚರ.

- ಪ್ರಭು ಚವ್ಹಾಣ್‌, ಶಾಸಕ

 

click me!