Coronavirus: ಬೆಂಗ್ಳೂರಲ್ಲಿ ತುಸು ಇಳಿದ ಸೋಂಕಿತರ ಸಂಖ್ಯೆ

By Kannadaprabha NewsFirst Published Jan 17, 2022, 7:45 AM IST
Highlights

*   ಭಾನುವಾರ 21,071 ಕೇಸ್‌ ದಾಖಲು, ಐವರು ಸೋಂಕಿನಿಂದ ಸಾವು
*   ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 14,16,807ಕ್ಕೇರಿಕೆ
*  1,46,200 ಸೋಂಕಿತರಿಗೆ ನಿಗದಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ 
 

ಬೆಂಗಳೂರು(ಜ.17):  ರಾಜಧಾನಿಯಲ್ಲಿ ಕೊರೋನಾ(Coronavirus) ಪ್ರಕಣಗಳ ಏರಿಳಿತ ಮುಂದುವರಿದಿದ್ದು, ಭಾನುವಾರ ಹೊಸದಾಗಿ 21,071 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ(Death).

ಶನಿವಾರಕ್ಕೆ ಹೋಲಿಸಿದರೆ (22,284) ಭಾನುವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಹೊಸದಾಗಿ 12,460 ಪುರುಷರು ಮತ್ತು 8,610 ಮಹಿಳೆಯರಲ್ಲಿ ಪತ್ತೆಯಾದ ಪ್ರಕರಣಗಳಿಂದ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 14,16,807ಕ್ಕೆ ತಲುಪಿದೆ. ಒಂದೇ ದಿನ 2,142 ಪುರುಷರು ಮತ್ತು 1836 ಮಹಿಳೆಯರು ಸೇರಿ ಒಟ್ಟು 3,978 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 12,54,153ಕ್ಕೆ ಏರಿಕೆಯಾಗಿದೆ. ಐವರ ಸಾವಿನಿಂದ ಒಟ್ಟು ಮೃತರ ಸಂಖ್ಯೆ 16,454ಕ್ಕೆ ಏರಿದೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 1,46,200 ಸೋಂಕಿತರಿಗೆ ನಿಗದಿತ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ(Treatment) ಮುಂದುವರಿದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

Corona Vaccine in Karnataka: ರಾಜ್ಯದ 99% ಮಂದಿಗೆ ಮೊದಲ ಡೋಸ್‌

584 ಕಂಟೈನ್ಮೆಂಟ್‌ ವಲಯ ಸಕ್ರಿಯ

ಬಿಬಿಎಂಪಿಯ(BBMP) ಒಟ್ಟು ಎಂಟು ವಲಯಗಳಲ್ಲಿ 584 ಕಂಟೈನ್ಮೆಂಟ್‌ ವಲಯಗಳು(Containment Zones) ಸಕ್ರಿಯವಾಗಿವೆ. ಈ ಪೈಕಿ ಮಹದೇವಪುರ 221, ಬೊಮ್ಮನಹಳ್ಳಿ 128, ದಕ್ಷಿಣ 65, ಪಶ್ಚಿಮ 62, ಯಲಹಂಕ 59, ಪೂರ್ವ 38, ಆರ್‌ಆರ್‌ನಗರ 6 ಹಾಗೂ ದಾಸರಹಳ್ಳಿಯಲ್ಲಿ 5 ಕಂಟೈನ್ಮೆಂಟ್‌ ವಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ಕೋವಿಡ್‌ ವರದಿ ತಿಳಿಸಿದೆ.

231 ದಿನ ಬಳಿಕ ರಾಜ್ಯದಲ್ಲಿ 34047 ಕೋವಿಡ್‌ ಕೇಸ್‌

ರಾಜ್ಯದಲ್ಲಿ(Karnataka) ಕೋವಿಡ್‌ ಪ್ರಕರಣಗಳು (Covid Cases) ವೇಗದಲ್ಲಿ ಹರಡುತ್ತಿದ್ದು ಶುಕ್ರವಾರ 34,047 ಹೊಸ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 231 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ ಸಮೀಪಕ್ಕೆ ಬಂದಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.19.29ಕ್ಕೆ ಏರಿದೆ. 13 ಮಂದಿ ಮೃತರಾಗಿದ್ದಾರೆ. 5,902 ಮಂದಿ ಚೇತರಿಸಿಕೊಂಡಿದ್ದಾರೆ.

Corona 3rd Wave: ಕೋವಿಡ್‌ ಪ್ರಸರಣದ ಆರ್‌ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 2356 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 49 ಮಂದಿ ಐಸಿಯು ವೆಂಟಿಲೇಟರ್‌ ಹಾಸಿಗೆಯಲ್ಲಿದ್ದಾರೆ. 145 ಮಂದಿ ಐಸಿಯು, 829 ಮಂದಿ ಎಚ್‌ಡಿಯು, 1,333 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕಿತರು ಪತ್ತೆ ಆಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷಕ್ಕೆ ಏರಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಶನಿವಾರ 22,284 ಮಂದಿಯಲ್ಲಿ ಸೋಂಕು ಪತ್ತೆ ಆಗಿದ್ದರೆ ಭಾನುವಾರ 21,071 ಮಂದಿಯಲ್ಲಿ ಸೋಂಕು ವರದಿಯಾಗಿದೆ. ಬೆಂಗಳೂರು ನಗರದಲ್ಲಿ ಹೊಸ ಪ್ರಕರಣಗಳಲ್ಲಿ ಕುಸಿತ ಕಂಡು ಬಂದಿದ್ದರೂ ರಾಜ್ಯದ ಅನ್ಯ ಭಾಗಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ವರದಿಯಾಗಿದೆ.

ಮೈಸೂರು 1,892, ತುಮಕೂರು 1,373, ಹಾಸನ 1,171 ಪ್ರಕರಣ ದಾಖಲಾಗಿದೆ. ಯಾದಗಿರಿ 33, ಕೊಪ್ಪಳ 80, ಹಾವೇರಿ 55 ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲ ಕಡೆ ಮೂರಂಕಿಯಲ್ಲಿ ಪ್ರಕರಣ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 5, ದಕ್ಷಿಣ ಕನ್ನಡ 2, ಚಿಕ್ಕಬಳ್ಳಾಪುರ, ಹಾಸನ, ಕಲಬುರಗಿ, ಮಂಡ್ಯ, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 32.20 ಲಕ್ಷ ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು 29.83 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,431 ಮಂದಿ ಮರಣವನ್ನಪ್ಪಿದ್ದಾರೆ.
 

click me!