ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಪ್ರಕರಣ: ಒಂದೂವರೆ ವರ್ಷದ ಬಳಿಕ ವಿಚಾರಣೆಗೆ ಬರುವಂತೆ ನೊಟೀಸ್

By Girish GoudarFirst Published Feb 1, 2024, 8:28 PM IST
Highlights

ಸಿಆರ್ ಪಿಸಿ ಸೆಕ್ಷನ್ 107 ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲು ಎಂದು ತಹಶೀಲ್ದಾರ್ ಕೋರ್ಟ್ ನೊಟೀಸ್ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದು ಹೋಗಿ 6 ದಿನಗಳು ಕಳೆದಿವೆ. ಜೊತೆಗೆ ಸದ್ಯಕ್ಕೆ ಜಿಲ್ಲೆಗೆ ಯಾವುದೇ ಗಣ್ಯವ್ತಕಿಗಳು ಬರುವ ಸಾಧ್ಯತೆಗಳಿಲ್ಲ. ಹೀಗಿದ್ದರೂ ವಿನಾಕಾರಣ ನೊಟೀಸ್ ನೀಡಿರುವುದು ಏಕೆ ಎನ್ನುವ ಪ್ರಶ್ನೆ ಎದುರಾಗಿದೆ. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಫೆ.01): 2022 ರ ಆಗಸ್ಟ್ ತಿಂಗಳಿನಲ್ಲಿ ಕೊಡಗಿಗೆ ಬಂದಿದ್ದ ಅಂದಿನ ವಿರೋಧ ಪಕ್ಷದ ನಾಯಕ ಇಂದಿನ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಆ ಪ್ರಕರಣದ 10 ಆರೋಪಿಗಳಿಗೆ ಒಂದೂವರೆ ವರ್ಷದ ಬಳಿಕ ನೊಟೀಸ್ ನೀಡಲಾಗಿದೆ. ಇದೊಂದು ರೀತಿಯ ದ್ವೇಷ ರಾಜಕಾರಣ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜನವರಿ 25ಕ್ಕೆ ಕೊಡಗು ಜಿಲ್ಲೆಗೆ ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ನೀವು ಗಲಾಟೆ, ದೊಂಬಿ ಏಳಿಸಬಹುದು ಅಥವಾ ಯಾರಿಗಾದರೂ ಪ್ರಾಣ ಹಾನಿ ಮಾಡಬಹುದು. ಹೀಗಾಗಿ ಕೋರ್ಟ್ ನಿರ್ದೇಶನದಂತೆ ನೀವು ವಿಚಾರಣೆಗೆ ಆಗಮಿಸಬೇಕು ಎಂದು ಪೊಲೀಸ್ ಇಲಾಖೆ ಮೂಲಕ ಪ್ರಕರಣದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ 10 ಜನರಿಗೆ ನೊಟೀಸ್ ನೀಡಲಾಗಿದೆ. 

ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಸಿದ್ದರಾಮಯ್ಯನವರು ಏನೂ ಕಡಿದು ಕಟ್ಟೆಹಾಕಿಲ್ಲ: ಸಂಸದ ಪ್ರತಾಪ್ ಸಿಂಹ

ಸಿಆರ್ ಪಿಸಿ ಸೆಕ್ಷನ್ 107 ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲು ಎಂದು ತಹಶೀಲ್ದಾರ್ ಕೋರ್ಟ್ ನೊಟೀಸ್ ನೀಡಿದೆ. ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದು ಹೋಗಿ 6 ದಿನಗಳು ಕಳೆದಿವೆ. ಜೊತೆಗೆ ಸದ್ಯಕ್ಕೆ ಜಿಲ್ಲೆಗೆ ಯಾವುದೇ ಗಣ್ಯವ್ತಕಿಗಳು ಬರುವ ಸಾಧ್ಯತೆಗಳಿಲ್ಲ. ಹೀಗಿದ್ದರೂ ವಿನಾಕಾರಣ ನೊಟೀಸ್ ನೀಡಿರುವುದು ಏಕೆ ಎನ್ನುವ ಪ್ರಶ್ನೆ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಬಂದು ಹೋಗಿ 6 ದಿನಗಳು ಕಳೆದ ಬಳಿಕ ನೊಟೀಸ್ ನೀಡಿರುವುದು ಇದೊಂದು ರೀತಿಯ ದ್ವೇಷದ ರಾಜಕಾರಣವೇನಾ ಎನ್ನುವಂತೆ ಮಾಡಿದೆ. ಫೆಬ್ರವರಿ 1 ರಂದು 11 ಗಂಟೆಗೆ ವಿಚಾರಣೆಗೆ ಬರುವಂತೆ ನೊಟೀಸ್ ತಹಶೀಲ್ದಾರ್ ಕೋರ್ಟ್ ನೊಟೀಸ್ ನೀಡಿದೆ. ಈ ನೊಟೀಸ್‌ಗೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ದ್ವೇಷ ರಾಜಕಾರಣ. ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲು ಮಾಡುತ್ತಿರುವ ಯತ್ನ. ಸಿಎಂ ಬಂದು ಹೋಗಿ ವಾರವೇ ಕಳೆದಿದೆ. ಆದರೆ ಈಗ ನೊಟೀಸ್ ಕೊಟ್ಟು ವಿಚಾರಣೆಗೆ ಕರೆದಿರುವುದು ದ್ವೇಷವಲ್ಲವೆ ಎಂದು ಪ್ರಕರಣ ಎದುರಿಸುತ್ತಿರುವ, ಮಡಿಕೇರಿ ನಗರಸಭೆ ಸದಸ್ಯರಾಗಿರುವ ಬಿಜೆಪಿಯ ಉಮೇಶ್ ಸುಬ್ರಹ್ಮಣಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸರ್ಕಾರಕ್ಕೆ ಜನರು ತಕ್ಕ ಉತ್ತರ ಕೊಡುತ್ತಾರೆ. ಇದೇ ರೀತಿ ದ್ವೇಷ ರಾಜಕಾರಣ ಮಾಡುವುದಿದ್ದರೆ ನಮ್ಮ ಸರ್ಕಾರದ ಸಂದರ್ಭದಲ್ಲು ಎಷ್ಟು ಮಾಡಬಹುದಿತ್ತು. ಹೊಸದಾಗಿ ಬಂದಿರುವ ಶಾಸಕರು ಇಂತಹದ್ದನ್ನೆಲ್ಲಾ ಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಒಳ್ಳೆಯ ಹೆಸರು ಬರುತ್ತದೆ ಎಂದು ಬಿಜೆಪಿ ವಕ್ತಾರ ಮಹೇಶ್ ಜೈನಿ ಹಾಗೂ ನಗರಸಭೆ ಸದಸ್ಯ ಉಮೇಶ್ ಸುಬ್ರಹ್ಮಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

2022 ರ ಆಗಸ್ಟ್ ತಿಂಗಳ 18 ರಂದು ಅಂದು ವಿರೋಧ  ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಮಳೆಹಾನಿಯನ್ನು ವೀಕ್ಷಿಸುವುದಕ್ಕಾಗಿ ಕೊಡಗಿಗೆ ಬಂದಿದ್ದರು. ಆಗ ಅವರ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಸೇರಿ 10 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.  ಸದ್ಯ ನೋಟಿಸ್ ಪಡೆದಿರುವ ಯಾರೂ ಕೂಡ ತಹಶೀಲ್ದಾರ್ ಕೋರ್ಟ್‌ಗೆ ವಿಚಾರಣೆಗೆ ಹೋಗಿಲ್ಲ. ಬದಲಾಗಿ ಸಿವಿಲ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. 

click me!