ಚಿಕ್ಕಮಗಳೂರು: ಅರ್ಚಕರಿಗೆ 13 ತಿಂಗಳಿಂದ ಸಂಬಳವೇ ಇಲ್ಲ, ಜಿಲ್ಲಾಡಳಿತದಿಂದ ಮತ್ತೊಂದು ಯಡವಟ್ಟು

By Girish GoudarFirst Published Feb 1, 2024, 8:07 PM IST
Highlights

ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಅರ್ಚಕರ ಸಂಬಳದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದತ್ತ ಪಾದುಕೆಗೆ ಪೂಜೆ ಸಲ್ಲಿಸಲು  ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಇಬ್ಬರು ಅರ್ಚಕರಿಗೆ ಕಾಂಗ್ರೆಸ್ ಸರ್ಕಾರ ಸಂಬಳವನ್ನೇ ನೀಡಿಲ್ಲ. 

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.01): ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ದತ್ತಪೀಠದ ದತ್ತಾತ್ರೇಯರ ದತ್ತಪಾದುಕೆಗೆ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆ ಪೂಜೆ ಸಲ್ಲಿಸಲು ಅರ್ಚಕರ ನೇಮಕ ಸಾವಿರಾರು ಹಿಂದೂ ಪರ ಹೋರಾಟಗಾರರು ದಶಕಗಳಿಂದ ಹೋರಾಡುತ್ತಿದ್ದರು. 3-4 ದಶಕದ ಹೋರಾಟದ ಫಲವಾಗಿ 13 ತಿಂಗಳ ಹಿಂದೆ ಹಿಂದಿನ ಬಿಜೆಪಿ ಸರ್ಕಾರ ಇಬ್ಬರು ಅರ್ಚಕರನ್ನ ನೇಮಕ ಮಾಡಿತ್ತು. ಆದ್ರೆ, 13 ತಿಂಗಳಿಂದ ಇಬ್ಬರು ಅರ್ಚಕರಿಗೆ ಸರ್ಕಾರ ಬಿಡಿಗಾಸು ಸಂಬಳ ನೀಡಿಲ್ಲ. ಆದ್ರೆ, ಅದೇ ದತ್ತಪೀಠದಲ್ಲಿ ಮುಜಾವರ್‌ಗೆ ಮಾತ್ರ ಸಂಬಳ ನಿಂತೇ ಇಲ್ಲ.....

ಮುಜಾವರ್ ಸ್ಯಾಲರಿ ನಿಂತೇ ಇಲ್ಲ, ಅರ್ಚಕರಿಗೆ 13 ತಿಂಗಳಿಂದ ಸಂಬಳವೇ ಇಲ್ಲ

ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಅರ್ಚಕರ ಸಂಬಳದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದತ್ತ ಪಾದುಕೆಗೆ ಪೂಜೆ ಸಲ್ಲಿಸಲು  ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ಇಬ್ಬರು ಅರ್ಚಕರಿಗೆ ಕಾಂಗ್ರೆಸ್ ಸರ್ಕಾರ ಸಂಬಳವನ್ನೇ ನೀಡಿಲ್ಲ. ಮುಜಾವರ್ ನೇತೃತ್ವದಲ್ಲಿ ದತ್ತಪಾದುಕೆಗೆ ಪೂಜೆ ಸಲ್ಲಿಸುವುದನ್ನ ವಿರೋಧಿಸಿ ಅರ್ಚಕರ ನೇಮಕಕ್ಕೆ ದಶಕಗಳ ಕಾಲ ಹೋರಾಟ ನಡೆದಿತ್ತು. ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರ ದತ್ತಪೀಠ ವ್ಯವಸ್ಥಾಪನಾ ಸಮಿತಿ, ಇಬ್ಬರು ಅರ್ಚಕರನ್ನ ನೇಮಿಸಿತ್ತು. ಆದ್ರೆ, ಅರ್ಚಕರ ನೇಮಕವಾದ ದಿನದಿಂದ ಈವರೆಗೂ ಸರ್ಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. ಮುಜಾವರ್ಗೆ ಮಾತ್ರ ಪ್ರತಿ ತಿಂಗಳು ಸಂಬಳ ನೀಡುವ ಸರ್ಕಾರ, ಅರ್ಚಕರಿಗೆ ಯಾಕೆ ಸಂಬಳ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದು, ಕೂಡಲೇ ಸಂಬಳ ನೀಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸಿ.ಟಿ.ರವಿ ಕೂಡ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಸಂಬಳ ಕೊಡುವ ಯೋಗ್ಯತೆ ಇಲ್ಲ ಅಂದ್ರೆ ಮುಜರಾಯಿ ದೇವಾಲಯಗಳನ್ನ ಏಕೆ ಇಟ್ಟುಕೊಳ್ತೀರಾ. ಹುಂಡಿ ಮೇಲೆ ಮಾತ್ರ ಆಸೆಯಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಬ್ಲಾಕ್‌ಮೇಲ್ ಅಲ್ಲದೇ ಮತ್ತೇನು, ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಹಿಂದೂ ಸಂಘಟನೆ, ಬಿಜೆಪಿ ಅಸಮಾಧಾನ : 

ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ದತ್ತಪೀಠ ವ್ಯವಸ್ಥಾಪನಾ ಸಮಿತಿ ಮತ್ತು ಅರ್ಚಕರ ನೇಮಕವನ್ನ ಪ್ರಶ್ನಿಸಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಕೇಳಿದ್ದು, ಸಚಿವ ಸಂಪುಟದ ಸದಸ್ಯರ ನೇತೃತ್ವದಲ್ಲಿ ಉಪಸಮಿತಿ ರಚಿಸಿ ವರದಿ ನೀಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಸರ್ಕಾರ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಿದ್ದು ಇದಕ್ಕೆ ಹಿಂದೂ ಸಂಘಟನೆ, ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಹಿಂದೂಗಳ ಪರವಾಗಿ ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡುವುದೇ ಅನುಮಾನ. ಇದು ಷಡ್ಯಂತ್ರದ ಒಂದು ಭಾಗ ಎಂದಿದ್ದಾರೆ. ಮತ್ತೊಂದು ಕಡೆ ವ್ಯವಸ್ಥಾಪನಾ ಸಮಿತಿ, ಅರ್ಚಕರ ನೇಮಕ ಸಂಬಂಧ ಸರ್ಕಾರ ಉಪ ಸಮಿತಿ ನೇಮಕ ಮಾಡಿರೋದನ್ನ ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಕೆಂಡವಾಗಿದ್ದಾರೆ. 

ಒಟ್ಟಾರೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವಿವಾದ ಮತ್ತೆ ಮುನ್ನೆಲೆಗೆ ಬರುತ್ತಿದೆ. ಬಿಜೆಪಿ ಅರ್ಚಕರಿಗೆ ಸಂಬಳ ನೀಡಿಲ್ಲ ಎಂಬ ಗಂಭೀರ ಆರೋಪದ ಜೊತೆ ಸರ್ಕಾರ ರಚನೆಯ ಉಪಸಮಿತಿ ಬಗ್ಗೆ ಅಪಸ್ವರ ಎತ್ತಿದೆ. ಈ ಬಗ್ಗೆ ಸರ್ಕಾರ ಏನು ಸ್ಪಷ್ಟನೆ ನೀಡುತ್ತೋ ಗೊತ್ತಿಲ್ಲ ಗ್ಯಾರಂಟಿ.

click me!