ಬಾಗಲಕೋಟೆ: ಎರಡೂವರೆ ವರ್ಷವಾದ್ರೂ ಮುಗಿಯದ ಕಾಮಗಾರಿ, ಜನರಿಗೆ ತಪ್ಪದ ಸಂಕಷ್ಟ..!

By Kannadaprabha NewsFirst Published May 27, 2023, 8:28 PM IST
Highlights

ತುಳಸಿಗಿರಿ ಹಳ್ಳ, ದಕ್ಷಿಣ ಹೆರಕಲ್ಲ ಏತ ನೀರಾವರಿ ಯೋಜನೆಯ ಬೃಹತ್‌ ಕಾಲುವೆಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ

ಚಂದ್ರಶೇಖರ ಶಾರದಾಳ

ಕಲಾದಗಿ(ಮೇ.27):  ಈ ಸೇತುವೆ ನಿರ್ಮಾಣಗೊಂಡರೆ ರೈತರು ಹಾಗೂ ಜನರಿಗೆ ಅನುಕೂಲ ಎಂಬ ಕಾರಣಕ್ಕೆ ಅಂದಿನ ಸಚಿವ ಮುರಗೇಶ ನಿರಾಣಿ ಅವರು ಭೂಮಿಪೂಜೆ ಮಾಡಿ ಆರು ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು ಎಂದು ಗುತ್ತಿಗೆದಾರರಿಗೂ ಹಾಗೂ ಅಧಿಕಾರಿಗಳಿಗೂ ಖಡಕ್‌ ಎಚ್ಚರಿಕೆ ಕೊಟ್ಟಿದ್ದರು. ಆದರೆ, ಕಾಮಗಾರಿ ಆರಂಭಗೊಂಡು ಎರಡೂವರೆ ವರ್ಷ ಗತಿಸುತ್ತಾ ಬಂದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಹೌದು, 2021 ಫೆ.18ರಂದೇ ತುಳಸಿಗಿರಿ ಹಳ್ಳದ ಮತ್ತು ದಕ್ಷಿಣ ಹೆರಕಲ್ಲ ಏತ ನೀರಾವರಿ ಯೋಜನೆಯ ಬೃಹತ್‌ ಕಾಲುವೆಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ, ಅಧಿಕಾರಿಗಳ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸೇತುವೆ ಮಾತ್ರ ಕುಂಠುತ್ತಾ ಸಾಗಿದೆ. ರೈತರು ತಮ್ಮ ಹೊಲ ಗದ್ದೆಗಳಿಗೆ ಹಾಗೂ ಬಾಗಲಕೋಟೆ ನಗರಕ್ಕೆ ಸಂಪರ್ಕ ಸನಿಹ ರಸ್ತೆಗೆ ಈ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿತ್ತು. ಅದರಂತೆ ಅಂದಿನ ಶಾಸಕರು, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರು .4 ಕೋಟಿ ಅನುದಾನದಲ್ಲಿ ಭೂಮಿಪೂಜೆ ನೆರವೇರಿಸಿ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಬೇಕೆಂದು ಖಡಕ್‌ ಸೂಚನೆ ಕೊಟ್ಟಿದ್ದರು. ಆದರೂ ಕಾಮಗಾರಿ ಕುಂಟುತ್ತಾ ನಡೆದರೂ ಶಾಸಕರೂ ಸೇರಿದಂತೆ ಕೆ.ಬಿ.ಜೆ.ಎನ್‌.ಎಲ್‌ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದಕ್ಕೆ ಸದ್ಯ ಅರ್ಧಕ್ಕೆ ನಿಂತ ಸೇತುವೆ ಕಾಮಗಾರಿ ಸಾಕ್ಷಿಯಾಗಿದೆ.

ರೈತನ ಕೈ ಹಿಡಿಯುತ್ತಾ ರೋಹಿಣಿ ಮಳೆ?: ಭೂಮಿ ಹದಗೊಳಿಸಿ ಸಜ್ಜುಗೊಳಿಸಿದ ಅನ್ನದಾತ

1 ಕಿಮೀನಲ್ಲೇ ಸಂಪರ್ಕ:

ಕಲಾದಗಿಯಿಂದ ಬಾಗಲಕೋಟೆ ನಗರಕ್ಕೆ ತೆರಳಲು ಸನಿಹ ಮಾರ್ಗ ಕಲಾದಗಿ ಕಾಗವಾಡ ರಸ್ತೆ, ತುಳಸಿಗಿರಿ ಹಳ್ಳದ ರಸ್ತೆಗೆ ಕೆ.ಬಿ.ಜೆ.ಎನ್‌.ಎಲ್‌ ಇಲಾಖೆಯಿಂದ .4 ಕೋಟಿ ಮೊತ್ತದಲ್ಲಿ ಸೇತುವೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೆ ಗ್ರಾಮದ ಜನತೆಗೆ ವರ್ಷಪೂರ್ತಿ ಸಂಚರಿಸಬಹುದಾಗಿತ್ತು. ಆಲಮಟ್ಟಿ ಹಿನ್ನೀರಿನಿಂದ ಜಲಾವೃತ್ತವಾಗಿ ಗ್ರಾಮದ ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹಿನ್ನೀರು ಆವೃತ್ತದ ಸಂದರ್ಭದಲ್ಲಿ ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. 519.06 ಮೀಟರ್‌ ನೀರು ನಿಂತಾಗೆಲ್ಲ ಗ್ರಾಮದ ರಸ್ತೆ ಜಲಾವೃತವಾಗಿ ನಿತ್ಯ ನೂರಾರು ವಾಹನ, ಜನರು ನಾಲ್ಕೈದು ಕಿಲೋ ಮೀಟರ್‌ ಸುತ್ತಿ ಬಳಸಿ ಸಂಚರಿಸುವ ಸಂಕಷ್ಟವನ್ನು ಅನುಭವಿಸಿದ್ದರು. ಈ ಸೇತುವೆ ನಿರ್ಮಾಣವಾಗುತ್ತಿರುವುರುವುದರಿಂದ ಒಂದು ಕಿಮೀನಲ್ಲೇ ತಮ್ಮ ಹೊಲ ಗದ್ದೆ, ಚಿಕ್ಕಶಂಸಿ, ಹಿರೇಸಂಸಿ, ದೇವನಾಳ ಗ್ರಾಮಕ್ಕೆ ತೆರಳಲು ಅನುಕೂಲವಾಗುವುದು.

ಇದೀಗ ನೂತನ ಶಾಸಕರಾಗಿ ಜೆ.ಟಿ.ಪಾಟೀಲ ಅವರು ಆಯ್ಕೆಗೊಂಡಿದ್ದು, ಅವರು ಈ ಬಗ್ಗೆ ಹೆಚ್ಚು ಗಮನ ಹರಿಸಿ ಸೇತುವೆ ಕಾಮಗಾರಿ ತ್ವರಿತವಾಗಿ ನಡೆಯುವಂತೆ ನಡೆದುಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.
ಸೇತುವೆ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿದಾರ ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದು, ಕಾಮಗಾರಿ ಪ್ರಾರಂಭಿಸಲು ಖಡಕ್‌ ಸೂಚನೆ ನೀಡಲಾಗಿದೆ. ಮೇ 27 ಶನಿವಾರದಿಂದಲೇ ಕಾಮಗಾರಿ ಆರಂಭಿಸಲು ಸೂಚಿಸಿದ್ದೇನೆ. ಕಾಮಗಾರಿ ಶೀಘ್ರ ಮುಗಿಸಿಕೊಡಲು ತಿಳಿಸಿದ್ದೇನೆ ಅಂತ ಬೀಳಗಿ ಶಾಸಕ ಜೆ.ಟಿ.ಪಾಟೀಲ ತಿಳಿಸಿದ್ದಾರೆ.  

Karnataka Election 2023: 'ವಿಶ್ವಾಸ ದ್ರೋಹದಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲು'

ಕಲಾದಗಿ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ ಮಾಡಿಸಲಾಗುವುದು. ಪ್ರಸಕ್ತ ವರ್ಷ ಆಲಮಟ್ಟಿಹಿನ್ನೀರು ಆವರಿಸುವ ಮೊದಲೇ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದ್ದು, ಕಾಮಗಾರಿ ಮುಗಿಯುವವರೆಗೂ ಪಾಲೋ ಅಫ್‌ ಮಾಡಲಾಗುವುದು ಅಂತ ಬಾಗಲಕೋಟೆ ಕೆ.ಬಿ.ಜೆಎನ್‌.ಎಲ್‌, ಕಾರ್ಯ ನಿರ್ವಾಹಕ ಅಭಿಯಂತರ ಮೋಹನ್‌ ಹಲಗುತ್ತಿ ಹೇಳಿದ್ದಾರೆ.  

ಕಳೆದ 23 ವರ್ಷದಿಂದ ಏಳು ತಿಂಗಳು ನಾಲ್ಕಾರು ಕಿಲೋ ಮೀಟರ್‌ ಸುತ್ತಿ ಹೊಲ ಗದ್ದೆಗಳಿಗೆ ಮತ್ತು ಬಾಗಲಕೋಟೆ ನಗರಕ್ಕೆ ತೆರಳಬೇಕಾಗಿದೆ. ಸೇತುವೆ ರಸ್ತೆ ಸನಿಹ ಸಂಪರ್ಕ ಸಂಚಾರ ಉಂಟಾಗಿ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ಸೇತುವೆ ರಸ್ತೆ ಕಾಮಗಾರಿ ಶೀಘ್ರ ಮುಗಿಸಲಿ ಅಂತ ಕಲಾದಗಿ ಗ್ರಾಮಸ್ಥ ಬಸವರಾಜ ವಜ್ಜರಮಟ್ಟಿ ತಿಳಿಸಿದ್ದಾರೆ. 

click me!