ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಪ್ರಭಾಕರ ಕೋರೆ

By Kannadaprabha NewsFirst Published Nov 5, 2022, 2:52 PM IST
Highlights

ಉತ್ತರ ಕರ್ನಾಟಕದ ಸಮಸ್ಯೆ ಕೇಳುವ ಮನೆ ಬೆಳಗಾವಿ ಸುವರ್ಣಸೌಧ ಆಗಬೇಕು. ಸಂಪೂರ್ಣ ಅಧಿವೇಶನ ನಡೆಸಲು ಶಾಸಕರ ಭವನ ಮತ್ತು ಕಚೇರಿ ಬೆಳಗಾವಿಯಲ್ಲಿ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಪ್ರಭಾಕರ ಕೋರೆ 

ಚಿಕ್ಕೋಡಿ(ನ.05): ಅಖಂಡ ಕರ್ನಾಟಕವಾಗಬೇಕೆಂದು ಕನಸು ಕಂಡವರು ಉತ್ತರ ಕರ್ನಾಟಕದ ಜನ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕ ಹೆಚ್ಚು ಅನ್ಯಾಯಕ್ಕೆ ಒಳಗಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು. ಅವರು ಬುಧವಾರ ತಾಲೂಕಿನ ಚಿಂಚಣಿ ಗ್ರಾಮದ ಗಡಿ ಕನ್ನಡಿಗರ ಬಳಗದಿಂದ ಶ್ರೀಅಲ್ಲಮಪ್ರಭು ಸಿದ್ದಸಂಸ್ಥಾನಮಠದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡರತ್ನ ಡಾ.ಪ್ರಭಾಕರ ಕೋರೆ ಹಾಗೂ ನನ್ನ ಸಂಗೀತ ವ್ಯಾಸಂಗ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರೆ ಗಡಿಯಲ್ಲಿ ಕನ್ನಡ ಗಟ್ಟಿಯಾಗಿ ಉಳಿಯುತ್ತದೆ ಎಂದರು.

ಗಡಿ ಭಾಗದಲ್ಲಿ ಕನ್ನಡ ಜೀವಂತ ಇಟ್ಟಿರುವುದೇ ಮಠಗಳು. ಧಾರ್ಮಿಕ, ಸಂಸ್ಕೃತಿ ಪರಂಪರೆಗೆ ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಚಿಂಚಣಿ ಮಠ ಮಾಡಿದೆ. ಟಿವಿಯಲ್ಲಿ ಬರುವ ಧಾರಾವಾಹಿ ಹಾವಳಿಯಿಂದ ಜನರು ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಪಾಲಕರು ತಮ್ಮ ಮಕ್ಕಳೊಂದಿಗೆ ಧಾರಾವಾಹಿ ನೋಡುವುದನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.

ವಿಜೃಂಭಣೆಯ ಕನ್ನಡ ರಾಜ್ಯೋತ್ಸವ ಮುಂದೆ ಠುಸ್ ಎಂದ ಎಂಎನ್ಎಸ್ ಕರಾಳ ದಿನಾಚರಣೆ

ಉತ್ತರ ಕರ್ನಾಟಕದ ಸಮಸ್ಯೆ ಕೇಳುವ ಮನೆ ಬೆಳಗಾವಿ ಸುವರ್ಣಸೌಧ ಆಗಬೇಕು. ಸಂಪೂರ್ಣ ಅಧಿವೇಶನ ನಡೆಸಲು ಶಾಸಕರ ಭವನ ಮತ್ತು ಕಚೇರಿ ಬೆಳಗಾವಿಯಲ್ಲಿ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕನ್ನಡದ ಅಳಿವು ಉಳಿವಿಗಾಗಿ ರಸ್ತೆಗೆ ಬಂದು ಹೋರಾಟಕ್ಕೆ ಸಿದ್ಧ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಗಡಿಭಾಗದಲ್ಲಿ ಚಿಂಚಣಿ ಮಠ ಕನ್ನಡದ ಮಠವಾಗಿ ಹೊರಹೊಮ್ಮಿದೆ. ಮುಂಬೈ ಪ್ರಾಂತವಾಗಿದ್ದ ಉತ್ತರ ಕರ್ನಾಟಕ ಕನ್ನಡದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಬಾರದೆಂದು ಅಧಿವೇಶನ ನಡೆಸಿತು. ನಾಡಿನ ಜ್ವಲಂತ ಸಮಸ್ಯೆ ಬಗೆಹರಿಸಲು ಸುವರ್ಣಸೌಧ ಬೆಳಗಾವಿ ಆದರೂ ಅದು ಅಧಿವೇಶನ ಸಮರ್ಪಕ ನಡೆಯದೇ ಇರುವುದು ಖೇದಕರ ಸಂಗತಿ. ಬೆಳಗಾವಿಯಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಅಧಿವೇಶನ ನಡೆಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದರು.

ಕರ್ನಾಟಕದಲ್ಲೇ ಬೆಳಗಾವಿ ಉಳಿಸಲು ಹೋರಾಡಿದ್ದ ನಾಗನೂರು ಶ್ರೀ

ದಿವ್ಯ ಸಾನ್ನಿಧ್ಯವನ್ನು ಚಿಂಚಣಿ ಶ್ರೀಅಲ್ಲಮಪ್ರಭು ಸ್ವಾಮೀಜಿ, ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ವಹಿಸಿದ್ದರು. ಕನ್ನಡರತ್ನ ಡಾ. ಪ್ರಭಾಕರ ಕೋರೆ, ನನ್ನ ಸಂಗೀತ ವ್ಯಾಸಂಗ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಈ ವೇಳೆ ಸಹಕಾರಿ ಧುರೀಣ ಜಗದೀಶ ಕವಟಗಿಮಠ, ಗ್ರಾಪಂ ಅಧ್ಯಕ್ಷ ಪ್ರೇಮಾ ಅಪ್ಪಾಜಿಗೋಳ, ಸಾಹಿತಿಗಳಾದ ಬಿ.ಎಸ್‌.ಗವಿಮಠ, ಶಿರೀಶ ಜೋಶಿ, ಸುಭಾಷÜ ಚೌಗಲೆ, ಅಭಯ ಪಾಟೀಲ, ಆನಂದ ಪಾಟೀಲ, ಡಾ.ಸಚೀನ ಪಾಟೀಲ, ಸರೋಜನಿ ಸಮಾಜೆ, ಅಪ್ಪಾಸಾಹೇಬ ಚೌಗಲೆ, ರಾಮಗೌಡ ಸೋಮನ್ನವರ, ಮಲ್ಲೇಶ ಮಳವಳ್ಳಿ, ಸತೀಶ ಅಪ್ಪಾಜಿಗೋಳ, ಲಕ್ಷ್ಮಣ ಡಂಗೇರ, ಪಿ.ಜಿ.ಕೆಂಪನ್ನವರ, ಡಾ,ಸುರೇಶ ಉಕ್ಕಲಿ, ಶ್ರೀಪಾದ ಕುಂಬಾರ ಇದ್ದರು. ಶಿಕ್ಷಕ ಈರಣ್ಣಾ ಶಿರಗಾಂವಿ ಸ್ವಾಗತಿಸಿ ನಿರೂಪಿಸಿದರು.

ಮೊಬೈಲ್‌ ಮತ್ತು ಟಿವಿಯ ವಿಪರೀತ ಹಾವಳಿಯಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪಾಲಕರು ಸಣ್ಣ ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಪುಸ್ತಕ ಓದವುದನ್ನು ರೂಢಿ ಮಾಡಿಸಬೇಕು ಅಂತ ಚಿತ್ರನಟ ದೊಡ್ಡಣ್ಣ ತಿಳಿಸಿದ್ದಾರೆ. 
 

click me!