ಶೀಘ್ರ ರಾಜ್ಯದ ನಾಯಕತ್ವ ಬದಲಾವಣೆ : ಯಾರಿಗೆ ಸಿಎಂ ಪಟ್ಟ..?

By Kannadaprabha NewsFirst Published Apr 11, 2021, 9:40 AM IST
Highlights

ನನ್ನನ್ನು ಪಕ್ಷದಿಂದ  ಯಾರೂ ಹೊರಹಾಕಲು ಸಾಧ್ಯವಿಲ್ಲ ಎಂದು  ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಬದಲಾವಣೆಯೂ ಆಗಲಿದೆ ಎಂದು ಹೇಳಿದ್ದಾರೆ. 

ಹುಬ್ಬಳ್ಳಿ (ಏ.11):  ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದೇನೆ. ಈ ಕುರಿತು ಪ್ರಧಾನಮಂತ್ರಿಗೂ ಪತ್ರ ಬರೆದು ಗಮನಕ್ಕೆ ತಂದಿದ್ದೇನೆ. ಸತ್ಯವನ್ನೇ ಮಾತನಾಡುವ ನನ್ನನ್ನು ಪಕ್ಷದಿಂದ ಹೊರ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತಿರುಗೇಟು ನೀಡಿದರು.

ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಯತ್ನಾಳ್‌ರನ್ನು ಶೀಘ್ರವೇ ಪಕ್ಷದಿಂದ ಹೊರಹಾಕಲಾಗುತ್ತೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಕೆ.ಎಸ್‌. ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದೆ ಇನ್ನೂ ಅನೇಕ ಮುಖಂಡರು ಈ ಬಗ್ಗೆ ಧ್ವನಿ ಎತ್ತಲಿದ್ದಾರೆ ಎಂದರು.

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!

ಶೀಘ್ರವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂದು ಪುನರುಚ್ಚರಿಸಿದ ಅವರು, ನಾಯಕತ್ವ ಬದಲಾವಣೆಯಾದರೆ, ಬೆಂಗಳೂರಿನ ಭಾಗದ ಯಾರೊಬ್ಬರೂ ಮುಖ್ಯಮಂತ್ರಿ ಆಗುವುದಿಲ್ಲ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದು ಹೇಳಿದರು.

ಮಾಜಿ ಪ್ರಧಾನಿ, ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಾನು ರೈಲ್ವೆ ಮಂತ್ರಿಯಾಗಿ ಉತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದ್ದೇನೆ. ನನಗೆ ಅವಕಾಶ ಕೊಟ್ಟರೆ ಮಾದರಿ ರಾಜ್ಯವನ್ನಾಗಿ ಮಾಡಲಿದ್ದೇನೆ ಎಂದರು.

click me!