
ಹಾಸನ [ಮಾ.02]: ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿಯತ್ತ ಪರೋಕ್ಷವಾಗಿ ಒಲವು ತೋರಿರುವ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಯಾರೋ ಒಬ್ಬರು, ಇಬ್ಬರು ಪಕ್ಷದಿಂದ ಹೊರ ಹೋದರೆ ಪಕ್ಷಕ್ಕೆ ನಷ್ಟವಿಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಭಾನುವಾರ ನಗರದ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಬಸವರಾಜ ಹೊರಟ್ಟಿ, ಬಂಡೆಪ್ಪ ಖಾಶೆಂಪುರ, ಎ.ಟಿ.ರಾಮಸ್ವಾಮಿ ಅಂತಹ ನಾಯಕರು ಈಗಲೂ ಇದ್ದಾರೆ. ಜಿ.ಟಿ.ದೇವೇಗೌಡ ಬಿಜೆಪಿಗೆ ಹೋಗಿ, ಮತ್ತೆ ಜೆಡಿಎಸ್ಗೆ ಬಂದು ಮಂತ್ರಿಯಾದರು. ಮತ್ತೆ ಇದೀಗ ಬಿಜೆಪಿಗೆ ಹೋಗುತ್ತಿದ್ದಾರೆ. ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.
ನೀವು ಕೇಳಬಾರ್ದು, ನಾನು ಹೇಳಬಾರ್ದು!:
ಜೆಡಿಎಸ್ ಅನ್ನು ಮತ್ತೆ ಕಾಂಗ್ರೆಸ್ನೊಂದಿಗೆ ವಿಲೀನ ಮಾಡಿಕೊಂಡರೆ ಅನುಕೂಲವಾಗುತ್ತದೆ ಎಂದು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರಂತೆ ಹೌದಾ ಎಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನೀವು ಪ್ರಶ್ನೆ ಕೇಳಬಾರದು, ನಾನು ಮಾತನಾಡಬಾರದು ಎಂದು ಉತ್ತರಿಸಿದ್ದಾರೆ.
ಅದೊಂದು ಮಾತುಕತೆ, ತಂಡದೊಂದಿಗೆ ಬಿಜೆಪಿಗೆ ಜೆಡಿಎಸ್ ಮಾಸ್ ಲೀಡರ್?..
ಶೀಘ್ರದಲ್ಲೇ ಪೂರ್ಣ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವ ಹಿನ್ನೆಲೆಯಲ್ಲಿ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ರನ್ನು ಜೆಡಿಎಸ್ಗೆ ಕರೆತರುವ ವಿಚಾರ ಸದ್ಯದಲ್ಲೇ ಪರಿಪೂರ್ಣವಾಗಲಿದೆ. ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಕಿಶೋರ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ನನಗೂ ತಿಳಿಸಿದ್ದಾರೆ. ಶೀಘ್ರದಲ್ಲೇ ಆ ವಿಚಾರ ಅಂತಿಮವಾಗಲಿದೆ ಎಂದು ಹೇಳಿದ್ದಾರೆ.
ನನಗೇ ಗೊತ್ತಿದೆ: ಪ್ರಶಾಂತ್ ಕಿಶೋರ್ ಬರುವುದಕ್ಕಿಂತ ಹೆಚ್ಚಾಗಿ ನಾನೇ ರಾಜ್ಯದ ಮೂಲೆಮೂಲೆಗಳಿಗೂ ಹೋಗಿ ಪಕ್ಷ ಸಂಘಟಿಸುವುದು ಹೇಗೆಂಬುದು ತಿಳಿದಿದೆ. ಸಂಘಟನೆ ಮಾಡುವ ಉತ್ಸಾಹ ಇನ್ನೂ ಕುಗ್ಗಿಲ್ಲ. 1989ರಲ್ಲಿ ಎಲ್ಲರೂ ಒದ್ದರು. ಆಗ ನಾನೊಬ್ಬನೇ ಎದ್ದೆ. ಆಗ ನನ್ನ ಜೊತೆ ಬಿ.ಎಲ್.ಶಂಕರ್, ವೈ.ಎಸ್.ವಿ.ದತ್ತ, ಉಗ್ರಪ್ಪ ಮಾತ್ರ ಇದ್ದರು. ಆ ವೇಳೆ ಮತ್ತೆ ಪಕ್ಷ ಕಟ್ಟಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಉತ್ಸಾಹ ಬತ್ತಿಲ್ಲ: ನನ್ನ ಉತ್ಸಾಹ ಬತ್ತಿಲ್ಲ. ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ. ಕೆ.ಆರ್.ಪೇಟೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಅಂತಾ ಅಲ್ಲಿಗೆ ಹೋಗಿದ್ದೆ. ಆದರೆ ವಿರೋಧ ಪಕ್ಷದವರು ತಾತ ಮತ್ತು ಮೊಮ್ಮಗ ಪಕ್ಷ ಕಟ್ಟೋಕೆ ಬಂದಿದ್ದಾರೆಂದು ಅಪಹಾಸ್ಯ ಮಾಡಿದ್ದಾರೆ. ಆ ಬಗ್ಗೆ ಕಿವಿಗೊಡಲ್ಲ. ಪಕ್ಷ ಸಂಘಟನೆಯತ್ತ ಮಾತ್ರ ನನ್ನ ಚಿತ್ತ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಬಂದಿದ್ದಾಗ ನಡೆದ ದೆಹಲಿ ಹಿಂಸಾಚಾರವನ್ನು ತಡೆಯುವಲ್ಲಿ ಗುಪ್ತದಳ ಮತ್ತು ಕೇಂದ್ರ ಸರ್ಕಾರ ಎರಡೂ ವಿಫಲವಾಗಿವೆ ಎಂದು ದೂರಿದ್ದಾರೆ.