ಮೇಲುಕೋಟೆಯಲ್ಲಿ ಚಲನಚಿತ್ರ ಚಿತ್ರೀಕರಣ ನಿಷೇಧ

Kannadaprabha News   | Asianet News
Published : Nov 16, 2021, 07:33 AM IST
ಮೇಲುಕೋಟೆಯಲ್ಲಿ ಚಲನಚಿತ್ರ ಚಿತ್ರೀಕರಣ ನಿಷೇಧ

ಸಾರಾಂಶ

  ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಚಲನಚಿತ್ರೀಕರಣ ನಿಷೇಧ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತೆ ಪೂರ್ಣಿಮ ಮಾಹಿತಿ

 ಮೇಲುಕೋಟೆ (ನ.16):  ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ (Melukote) ಚಲನ ಚಿತ್ರೀಕರಣ (Shooting) ನಿಷೇಧಿಸಲಾಗುತ್ತದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತೆ ಪೂರ್ಣಿಮ ತಿಳಿಸಿದರು.

ತೆಲುಗಿನ (Telugu) ಬಂಗಾರ ರಾಜು ಭಾಗ-2 ಚಿತ್ರೀರಣ ತಂಡ ಅಷ್ಟ ತೀರ್ಥೋತ್ಸವದಂದು ಮಾಡಿದ ಅವಾಂತರಗಳ ವರದಿ ತರಿಸಿಕೊಂಡು ಪತ್ರಕರ್ತರು ಮತ್ತು ಪರಿಸರ ತಜ್ಞರಿಗೆ ಮಾಹಿತಿ ನೀಡಿ, ಅಷ್ಟ ತೀರ್ಥೋತ್ಸವದಂದು ಚೆಲುವ ನಾರಾಯಣಸ್ವಾಮಿ (Cheluvanarayanaswamy) ಉತ್ಸವಕ್ಕೆ ಬಂಗಾರರಾಜು ಭಾಗ-2 ಚಿತ್ರೀಕರಣತಂಡ ಅಡಚಣೆ ಮಾಡಿ ಧಾರ್ಮಿಕ (religious)  ಭಾವನೆಗೆ ಧಕ್ಕೆ ತಂದಿದೆ ಎಂದರು.

ಇಲಾಖೆಯ ನಿಯಮಮೀರಿ ಸ್ಮಾರಕ ಕಲ್ಯಾಣಿಯ ಬಳಿ ಕ್ರೇನ್‌ ಬಳಸಿ ಚಿತ್ರೀಕರಣ ಮಾಡಲಾಗಿದೆ. ಇನ್‌ಪೋಸಿಸ್‌ (Infosys) ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಕಲ್ಯಾಣಿ (Sudhamurthy) ಜೀರ್ಣೋದ್ಧಾರ ಮಾಡಿ ಗಾರ್ಡನ್‌ಗಾಗಿ ಮೀಸಲಿಟ್ಟ ಸ್ಥಳಕ್ಕೆ ಧಕ್ಕೆ ತಂದಿದ್ದಾರೆ. ಈ ಕಾರಣ ಚಿತ್ರನಿರ್ಮಾಣ ತಂಡಕ್ಕೆ ನೋಟಿಸ್‌ (Notice) ನೀಡುವ ಜೊತೆಗೆ ಅವರು ಚಿತ್ರೀಕರಣಕ್ಕಾಗಿ ಪಾವತಿಸಿದ್ದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದರು.

ಪುಣ್ಯ ಕ್ಷೇತ್ರವಾದ ಮೇಲುಕೋಟೆಯಲ್ಲಿ (Melukote) ಚಿತ್ರೀಕರಣ ತಂಡಗಳಿಂದ ಪದೇ ಪದೇ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಜೊತೆಗೆ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿರುವ ಕಾರಣ ಸ್ಮಾರಕಗಳನ್ನು ಸಂರಕ್ಷಿಸಲು ಮೇಲುಕೋಟೆಯಲ್ಲಿ (Melukote) ಚಲನ ಚಿತ್ರೀಕರಣವನ್ನೇ ನಿಷೇಧಿಸಲಾಗುತ್ತದೆ. ಇದರಿಂದ ಕ್ಷೇತ್ರದ ಪಾವಿತ್ರತೆಯ ರಕ್ಷಣೆಯೂ ಸಾಧ್ಯವಾಗುತ್ತದೆ ಎಂದರು.

ತೆಲುಗು ಚಿತ್ರತಂಡದ ಎಡವಟ್ಟು:  ಪುರಾತತ್ವ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳಿಂದ ಪ್ರಖ್ಯಾತ ಅಷ್ಟತೀರ್ಥೋತ್ಸವದಂದೇ ಚಿತ್ರೀಕರಣ ಮಾಡಲು ಅನುಮತಿ ಪಡೆದಿದ್ದ ತೆಲುಗು ಬಂಗಾರರಾಜು-2 ಚಿತ್ರ ತಂಡ ಭಾನುವಾರ ಕಲ್ಯಾಣಿಗೆ ತೆರಳುತ್ತಿದ್ದ ಚೆಲುವನಾರಾಯಣ ಸ್ವಾಮಿ ಉತ್ಸವಕ್ಕೆ ಅಡಚಣೆ ಮಾಡಿತ್ತು.

ನಂತರ ಪುರಾತತ್ವ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಕಲ್ಯಾಣಿಯ ಸಮುಚ್ಚಯದ ಆವರಣಕ್ಕೆ ಅತಿಕ್ರಮವಾಗಿ ಕ್ರೇನ್‌ ತರಿಸಿಕೊಂಡು ಚಿತ್ರೀಕರಣ ಮಾಡಿತ್ತು. ಸಂಜೆ ಧಾರಾಕಾರಮಳೆ ಬಂದ ಕಾರಣ ಭಾರೀ ಪ್ರಮಾಣದ ಕ್ರೇನ್‌ ಧಾರಾಮಂಟಪದ ಮುಂಭಾಗ ಹೂವಿನ ತೋಟಕ್ಕಾಗಿ ಮೀಸಲಿಟ್ಟಸ್ಥಳದಲ್ಲಿ ಹೊರಬರಲು ಸಾಧ್ಯವಾಗದೆ ಹೂತುಹೋಗಿತ್ತು. ಮಳೆಯಿಂದಾಗಿ ಕಲ್ಯಾಣಿಯ ಮೇಲ್ಬಾಗದಲ್ಲಿ ಕೆಮಿಕಲ್ ಬಣ್ಣ ಬಳಸಿ ಚಿತ್ರೀಕರಣಕ್ಕಾಗಿ ಹಾಕಿದ್ದ ರಂಗೋಲಿಯ ಬಣ್ಣ ಸಹ ಕಲ್ಯಾಣಿಯ ನೀರು ಸೇರುವಂತಾಯಿತು.

ಆಯುಕ್ತರಿಂದ ಪರಿಶೀಲನೆ:  ಚಿತ್ರೀಕರಣತಂಡ ಅವಾಂತರದ ಮಾಹಿತಿ ಲಭ್ಯವಾಗುತ್ತಿದ್ದಂತೆ ಆಯುಕ್ತರಾದ ಪೂರ್ಣಿಮ ಕ್ರಮಜರುಗಿಸಿ ಇಲಾಖೆಯ ಎಂಜಿನಿಯರ್‌ ಸುರೇಶ್‌ ಹಾಗೂ ಆರ್ಕಿಯಾಲಜಿಸ್ವ್‌ ಎನ್‌.ಎಲ್.ಗೌಡ ಸೋಮವಾರ ಮಧ್ಯಾಹ್ನ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಆಗಿರುವ ಅವಾಂತರ ಕಂಡು ಚಿತ್ರತಂಡದ ಮ್ಯಾನೇಜರ್‌ ಶಾಸ್ತ್ರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಣ್ಣುಅಗೆದು ಕಬ್ಬಿಣದ ರಾಡ್‌ ಇಟ್ಟು ಕ್ರೇನ್‌ ಹೊರ ಹೋಗುವಂತೆ ಮಾಡಲಾಯಿತು.

ಸ್ಮಾರಕದ ರಕ್ಷಣೆಯ ದೃಷ್ಟಿಯಿಂದ ಚಿತ್ರೀಕರಣ ತಂಡದ ವಿರುದ್ಧ ಕ್ರಮ ಜರುಗಿಸಬೇಕಾದ್ದು ಅನಿವಾರ್ಯವಾಗಿದೆ. ಆಯುಕ್ತರಿಗೆ ಮಂಗಳವಾರ ವರದಿ ನೀಡಲಾಗುತ್ತದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದರು.

ಘಟನೆಯಲ್ಲಿ ಕಲ್ಯಾಣಿಯ ಯಾವುದೇ ಕಂಬಗಳಿಗೆ ಹಾನಿಯಾಗಿಲ್ಲ. ಚಿತ್ರೀಕರಣಕ್ಕೆ ಬಳಸಿದ ಕ್ರೇನ್‌ ಮಳೆಯಿಂದಾಗಿ ಹೂತುಹೋಗಿದ್ದನ್ನು ನಮ್ಮ ಸಿಬ್ಬಂದಿ ಸ್ಥಳದಲ್ಲಿದ್ದು ತೆರವು ಮಾಡಿಸಿದ್ದಾರೆ. ಚಿತ್ರೀಕರಣದ ವೇಳೆ ಬಳಕೆ ಮಾಡಲಾಗಿದ್ದ ಹೂವು, ಬಾಳೆಗೊನೆ, ಇತರೆ ತ್ಯಾಜ್ಯಗಳನ್ನು ಶುಚಿತ್ವ ಮಾಡಿದ್ದಾರೆ. ಯಾವುದೇ ಧಕ್ಕೆ ಆಗಿಲ್ಲ.

- ಮಂಗಳಮ್ಮ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ

ಮೇಲುಕೋಟೆಯಲ್ಲಿ ಚಿತ್ರ ತಂಡಗಳು ಮಾಡುತ್ತಿರುವ ಎಡವಟ್ಟುಗಳನ್ನು ಪ್ರಾಚ್ಯವಸ್ತು ಇಲಾಖೆ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಅಲ್ಲಿ ಸಂಪೂರ್ಣ ಚಿತ್ರೀಕರಣ ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ. ಆಯುಕ್ತರ ಈ ನಿರ್ಧಾರ ಸ್ಮಾರಕಗಳ ರಕ್ಷಣೆಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ.

- ಸಂತೋಷ್‌ ಕೌಲಗಿ, ಪರಿಸರ ತಜ್ಞರು ಮೇಲುಕೋಟೆ

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ