ಪರಿಶಿಷ್ಟ ಜಾತಿಯಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ: ಉರಿಲಿಂಗ ಪೆದ್ದಿ ಮಠದ ಶ್ರೀ

By Kannadaprabha NewsFirst Published Mar 19, 2024, 12:00 AM IST
Highlights

ಸ್ವಾಭಿಮಾನ ಮತ್ತು ಆತ್ಮಾಭಿಮಾನ ಇಲ್ಲದ ನಾವು ಇಂದು ಬೇಡುವ ಸ್ಥಿತಿಗೆ ಬಂದಿದ್ದೇವೆ. ಬೇಡುವ ಮನಸ್ಸುಗಳು ಎಂದಿಗೂ ಆಳುವ ಮನಸ್ಸುಗಳಾಗಲು ಸಾಧ್ಯವಿಲ್ಲ ಎಂಬುದನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದೋ ಹೇಳಿದ್ದಾರೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ತಿಳಿಸಿದರು.

ತುಮಕೂರು (ಮಾ.18): ಮಠಗಳನ್ನು ಸಶಕ್ತವಾಗಿ ಬೆಳೆಸಿದ ಸುಮಾರು 42 ಲಕ್ಷ ಜನಸಂಖ್ಯೆ ಇರುವ ಲಿಂಗಾಯಿತರು 19 ಬಾರಿ, 35 ಲಕ್ಷ ಇರುವ ಒಕ್ಕಲಿಗರು 19 ಬಾರಿ, ಅದಕ್ಕಿಂತಲೂ ಕಡಿಮೆ ಇರುವ ಕುರುಬ ಸಮಾಜದವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ 1.10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟ ಜಾತಿಯಲ್ಲಿ ಇದುವರೆಗೂ ಓರ್ವ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗಿಲ್ಲ. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯವೆಂಬುದು ಚಾಲ್ತಿಯಲ್ಲಿದೆಯೇ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ ಚನ್ನೇನಹಳ್ಳಿಯ ಛಲವಾದಿ ಜಗದ್ಗುರು ಪೀಠದ ದಶಮಾನೋತ್ಸವ ಹಾಗೂ ಬಸವಲಿಂಗಮೂರ್ತಿ ಸ್ವಾಮೀಜಿಯ 50ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ.ರಾಜ್ಯದಲ್ಲಿ ಛಲವಾದಿ ಸಮುದಾಯದ ಜನಸಂಖ್ಯೆ ಸುಮಾರು 52 ಲಕ್ಷದಷ್ಟಿದೆ. ನಮಗೆ ಓರ್ವ ಮುಖ್ಯಮಂತ್ರಿ ಬೇಡವೇ ಎಂಬುದನ್ನು ನಾವೆಲ್ಲರೂ ಆಲೋಚಿಸಬೇಕಿದೆ. ಇಂದು ಮಠಗಳು ದೇಶದ ಚುಕ್ಕಾಣಿ ಹಿಡಿದಿವೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ದಲಿತ ಸಿಎಂ ವಿಚಾರ ಅಪ್ರಸ್ತುತ, ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಚಲುವರಾಯಸ್ವಾಮಿ

ಸ್ವಾಭಿಮಾನ ಮತ್ತು ಆತ್ಮಾಭಿಮಾನ ಇಲ್ಲದ ನಾವು ಇಂದು ಬೇಡುವ ಸ್ಥಿತಿಗೆ ಬಂದಿದ್ದೇವೆ. ಬೇಡುವ ಮನಸ್ಸುಗಳು ಎಂದಿಗೂ ಆಳುವ ಮನಸ್ಸುಗಳಾಗಲು ಸಾಧ್ಯವಿಲ್ಲ ಎಂಬುದನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದೋ ಹೇಳಿದ್ದಾರೆ. 1901 ರಲ್ಲಿಯೇ ಛಲವಾದಿ ಸಮ್ಮೇಳನ ನಡೆಸಿದ ಸಮುದಾಯ ನಮ್ಮದು. ರಾಜ್ಯದಲ್ಲಿ 50ಕ್ಕೂ ಹೆಚ್ಚು ಛಲವಾದಿ ಮಠಗಳಿವೆ.ಆದರೆ ಅವು ಸರಿಯಾಗಿ ಬಳಕೆಯಾಗಿಲ್ಲ. ಮುಂದೆ ಗುರಿಯೂ ಇಲ್ಲ, ಹಿಂದೆ ಗುರುವೂ ಇಲ್ಲದ ಸ್ಥಿತಿಗೆ ಇಂದು ಛಲವಾದಿ ಸಮುದಾಯ ಬಂದಿದೆ ಎಂದು ಶ್ರೀ ಜ್ಞಾನಪ್ರಕಾಶ್‌ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮಠಗಳು ಸಮಾಜಕ್ಕೆ, ಸಮುದಾಯಗಳು ಮಠಗಳಿಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಿದೆ. ಮಠಗಳ ಸಹಕಾರದಿಂದ ಅಧಿಕಾರ ಪಡೆದ ಸಮುದಾಯಗಳು ತಿರುಗಿ ಮಠಗಳಿಗೆ ಸಾವಿರಾರು ಎಕರೆ ಭೂಮಿಯ ಜೊತೆಗೆ, ನೂರಾರು ಕೋಟಿ ರು. ಅನುದಾನವನ್ನು ನೀಡಿವೆ. ನಮ್ಮ ಮಠಗಳು ಆ ರೀತಿ ಶಕ್ತಿಶಾಲಿಯಾದಾಗ ಮಾತ್ರ ಆಳುವ ಸರಕಾರಗಳು ನಮ್ಮ ಮಾತುಗಳಿಗೆ ಮನ್ನಣೆ ನೀಡಲು ಸಾಧ್ಯ. ಹಾಗಾಗಿ ಚನ್ನೇನಹಳ್ಳಿ ಛಲವಾದಿ ಜಗದ್ಗುರು ಪೀಠದ ಜೊತೆಗೆ, ಇಂತಹ ಹತ್ತಾರು ಮಠಗಳು ನಾಡಿನ ಪ್ರತಿ ಜಿಲ್ಲೆಯಲ್ಲಿಯೂ ಹುಟ್ಟಿಕೊಳ್ಳಲಿ, ಇವು ಸಮುದಾಯದ ಒಗ್ಗಟ್ಟನ್ನು ಹೆಚ್ಚಿಸಲು ನೆರವಾಗುತ್ತವೆ ಎಂದು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ನುಡಿದರು.

ಅಧಿಕಾರ ಮತ್ತು ಹಕ್ಕು ಇಲ್ಲದ ಸಮುದಾಯ ಅಸ್ಪೃಶ್ಯರಿದ್ದಂತೆ ಎಂದು ಬಾಬಾ ಸಾಹೇಬರೇ ಹೇಳಿದ್ದಾರೆ. ಅಂಬೇಡ್ಕರ್, ಬುದ್ದ, ಬಸವಣ್ಣ ಅವರ ಕನಸನ್ನು ನನಸು ಮಾಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಹಾಗಾಗ ಬೇಕೆಂದರೆ ಛಲವಾದಿ ಸಮುದಾಯ ಮದ್ಯ ಮತ್ತು ಮೌಢ್ಯದಿಂದ ಹೊರಬರಬೇಕು. ಒಡೆಯುವುದು ಮನುವಾದವಾದರೆ, ಬೆಸೆಯುವುದು ಭೀಮವಾದ.ಇದನ್ನು ನಾವು ಅರ್ಥಮಾಡಿಕೊಂಡು ಮುನ್ನಡೆದರೆ ಮಾತ್ರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲ ರೀತಿಯ ಅಧಿಕಾರ ಮತ್ತು ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಛಲವಾದಿ ಸಮುದಾಯದ ಮುಖಂಡ ಚಿತ್ರದುರ್ಗದ ಲಕ್ಷ್ಮೀ ನರಸಿಂಹಯ್ಯ ಮಾತನಾಡಿ, ಈ ಭಾಗದಲ್ಲಿ ಛಲವಾದಿ ಸಮುದಾಯದ ಜನಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಛಲವಾದಿ ಸಮುದಾಯದ ಮಠಗಳಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಇರುವವರೇ ಒಗ್ಗೂಡಿ ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದರು.

ಸಿಎಂ ಆಗುವ ಅರ್ಹತೆ ಪರಮೇಶ್ವರ್‌ಗೆ ಇದೆ: ಸಚಿವ ಕೆ.ಎನ್‌.ರಾಜಣ್ಣ

ಸರಕಾರಿ ಅಭಿಯೋಜಕ ರಾಜಣ್ಣ ಮಾತನಾಡಿದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀಛಲವಾದಿ ಜಗದ್ಗರು ಪೀಠದ ಶ್ರೀಬಸವಲಿಂಗಮೂರ್ತಿ ಸ್ವಾಮೀಜಿ ವಹಿಸಿದ್ದರು. ಡಿ.ಕಲ್ಕರೆ ಅಲ್ಲಮ ಪ್ರಭು ಪೀಠದ ಶ್ರೀತಿಪ್ಪೆರುದ್ರಸ್ವಾಮೀಜಿ, ಮಾಜಿ ಜಿಪಂ ಸದಸ್ಯ ಎಂ.ಆರ್ ಪರ್ವತಪ್ಪ, ಹನುಮಂತಪ್ಪ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಹರಿಕಥಾ ವಿದ್ವಾನ ಸೋಮಶೇಖರದಾಸ್, ಛಲವಾದಿ ಮುಖಂಡರು ಹಾಗೂ ಬೌದ್ದ ಧರ್ಮದ ಪ್ರಚಾರಕರು ದಾವಣೆಗೆರೆಯ ಹಾಲೇಶಪ್ಪ ನಲ್ಗುದರೆ ಮತ್ತಿತರರು ಉಪಸ್ಥಿತರಿದ್ದರು.

click me!