ರಾಜಕೀಯ ಮಾಡುವ ಉದ್ದೇಶ ಇಲ್ಲ: ಜನಾರ್ದನ ರೆಡ್ಡಿ

By Kannadaprabha NewsFirst Published Jun 10, 2022, 11:12 AM IST
Highlights

*  ಬಿಜೆಪಿ ನಾಯಕರ ಬಗ್ಗೆ ಸೀಳು ನಾಯಿ ಎಂದಿದ್ದಕ್ಕೆ ಶಾಸಕ ಕೆಂಡಾಮಂಡಲ
*  ಭಗವಂತ ನಮಗೆ ಸಾಕಷ್ಟು ನಿಧಿ ಕೊಟ್ಟಿರುವಾಗ ಬೇರೆ ನಿಧಿ ಆಸೆ ಏಕೆ ಬೇಕು? 
*  ಒಳ್ಳೆಯ ಕೆಲಸ ಮಾಡುವಾಗ ಆರೋಪಗಳು ಬರುವುದು ಸಹಜ

ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯಲ್ಲಿ ರಾಜಕೀಯ ಮಾಡುವ ಉದ್ದೇಶ ನಮಗೆ ಬೇಕಾಗಿಲ್ಲ. ಆದರೆ ತಾಲೂಕಿನ ಪ್ರಸಿದ್ಧ ಕ್ಷೇತ್ರವಾಗಿರುವ ಪಂಪಾ ಸರೋವರದಲ್ಲಿರುವ ವಿಜಯಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಸಚಿವ ಶ್ರೀರಾಮುಲು ಮಾಡುತ್ತಿದ್ದಾರೆ. ಇದೊಂದು ಪುಣ್ಯದ ಕೆಲಸವಾಗಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು. ಪಂಪಾ ಸರೋವರದಲ್ಲಿ ವಿಜಯಲಕ್ಷ್ಮೀ ವಿಗ್ರಹ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಯಾರೋ ಕೆಲವರು ನಿಧಿ ಆಸೆಗಾಗಿ ವಿಗ್ರಹ ತೆರವುಗೊಳಿಸಿದ್ದಾರೆಂಬ ಅರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಭಗವಂತ ನಮಗೆ ಸಾಕಷ್ಟು ನಿಧಿ ಕೊಟ್ಟಿರುವಾಗ ಬೇರೆ ನಿಧಿ ಆಸೆ ಏಕೆ ಬೇಕು? ಎಂದು ಪ್ರಶ್ನಿಸಿದರು. ಈಗಾಗಲೇ ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆಯ ಕೆಲ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡಿದ್ದಾರೆ. ಹಂಪಿ, ಯಂತ್ರೋದ್ಧಾರಕ, ಆನೆಗೊಂದಿಯ ದುರ್ಗಾದೇವಿ ಮತ್ತು ಪಂಪಾಸರೋವರದಲ್ಲಿ ಜೀರ್ಣೋದ್ಧಾರ ಕೈಗೊಂಡಿದ್ದಾರೆ. ಶ್ರೀರಾಮುಲು ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

'ಸಚಿವ ಆಚಾರ್‌ಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ'

ಒಳ್ಳೆಯ ಕೆಲಸ ಮಾಡುವಾಗ ಆರೋಪಗಳು ಬರುವುದು ಸಹಜ. ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶ್ರೀರಾಮುಲು ಚಿಕ್ಕವನಿದ್ದಾಗಿನಿಂದಲೂ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದ ಜನಾರ್ದನರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ, ಸೋಮಶೇಖರರಡ್ಡಿ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ತಲೆ ಕೆಟ್ಟು ಮಾತನಾಡುತ್ತಿದ್ದಾರೆ- ಸೋಮಶೇಖರ ರೆಡ್ಡಿ

ಬಿಜೆಪಿ ನಾಯಕರ ಬಗ್ಗೆ ಸಿದ್ದರಾಮಯ್ಯ ಸೀಳು ನಾಯಿ ಅಂತಾ ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ. ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುತ್ತಿರುವುದು ಸರಿ ಅಲ್ಲ. ಸಿದ್ದರಾಮಯ್ಯ ತಲೆಕೆಟ್ಟು ಆ ತರಹ ಮಾತನಾಡುತ್ತಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದರು.

ಕೊಪ್ಪಳದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ

ತಾಲೂಕಿನ ಪಂಪಾ ಸರೋವರದಲ್ಲಿ ವಿಜಯಲಕ್ಷ್ಮೀ ದೇವಸ್ಥಾನದ ವಿಗ್ರಹ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿ, ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ನಾಯಿಗೆ ಹೋಲಿಸಿದ್ದಾರೆ. ನಾಯಿ ವಿಶ್ವಾಸದ ಸಂಕೇತ. ದೇವರ ಸ್ವರೂಪವಾಗಿದೆ ಎಂದರು.

ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಮಾತನಾಡುವುದು ತಪ್ಪು. ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಸಿದ್ದರಾಮಯ್ಯ ಏಕಾಂಗಿಯಾಗಿದ್ದು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು. ಸಚಿವ ಬಿ. ಶ್ರೀರಾಮುಲು ಅವರು ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದು ಎಲ್ಲರೂ ಮೆಚ್ಚುವಂಥ ಕೆಲಸ ಎಂದು ಶಾಸಕ ಸೋಮಶೇಖರರೆಡ್ಡಿ ಶ್ಲಾಘಿಸಿದರು.

click me!