ಮುಂದಿನ ತಿಂಗ​ಳಿನಿಂದ ವಿದ್ಯುತ್‌ ಬಿಲ್‌ ಸಮಸ್ಯೆ ಇಲ್ಲ: ಸಚಿವ ದರ್ಶನಾಪೂರ್‌

By Kannadaprabha NewsFirst Published Jun 25, 2023, 10:00 PM IST
Highlights

ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಸಾರಿ​ಗೆ ಬಸ್‌​ನಲ್ಲಿ ಉಚಿತ ಪ್ರಯಾಣ ನೀಡಿದೆ. ಬಿಜೆಪಿಗೆ ಜನರ ಕಾಳಜಿ ಇಲ್ವಾ, ಕೇಂದ್ರ ಸರ್ಕಾರ ಗಂಡಸರಿಗೆ ಉಚಿತ ಮಾಡುತ್ತೆನೆಂದು ಹೇಳಲಿ, ಯಾಕೆ ಗಂಡಸರಿಗೆ ಉಚಿತ ಅಂತ ಹೇಳುತ್ತಿಲ್ಲ, ಬಿಜೆಪಿಗೆ ಜನರ ಬಗ್ಗೆ ಜವಾಬ್ದಾರಿ ಇಲ್ವಾ ಎಂದು ತಿರುಗೇಟು ನೀಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌ 

ಯಾದಗಿರಿ(ಜೂ.25):  ವಿದ್ಯುತ್‌ ಬಿಲ್‌ ಹೆಚ್ಚಳ ಖಂಡಿಸಿ ಎರಡ್ಮೂರು ಕಡೆ ಅಷ್ಟೇ ಪ್ರತಿಭಟನೆಗಳಾಗಿವೆ. ಎಫ್‌ಕೆಸಿಸಿ ಹಾಗೂ ಖಾಸಗಿದವರೂ ಯಾರೂ ಬೆಂಬಲಿಸಿಲ್ಲ. ಈ ಬಗ್ಗೆ ಶುಕ್ರವಾರ ಮುಖ್ಯಮಂತ್ರಿ ಎಲ್ಲರ ಜೊತೆ ಸಭೆ ನಡೆಸಿದ್ದಾರೆ. ವಿದ್ಯುತ್‌ ಸಚಿವರು ಅದಕ್ಕೆ ಸ್ಪಷ್ಟೀಕರಣ ಕೂಡ ನೀಡಿದ್ದಾರೆ. ಎರಡು ತಿಂಗಳ ಫಿಕ್ಸ್‌ ಚಾರ್ಜ್‌ ಹೆಚ್ಚಿಗೆ ಮಾಡಿದ್ದರು. ಅದು ಮುಂದೆ ಬರೋ ಬಿಲ್‌ನಲ್ಲಿ ಸರಿ ಹೋಗುತ್ತದೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್‌ ಹೇಳಿದರು.

ಯಾದಗಿರಿಯಲ್ಲಿ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಸಂದರ್ಭದಲ್ಲಿ ತಮ್ನನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶುಕ್ರವಾರ ಸಿಎಂ, ವಿದ್ಯುತ್‌ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏನೆಲ್ಲಾ ವಿಷಯಗಳು ಚರ್ಚೆಯಾಗಿವೆ ಎಂಬುದು ನಮಗೆ ಗೊತ್ತಿಲ್ಲ. ಬುಧವಾರ ಮತ್ತೊಂದು ಸುತ್ತಿನ ಸಭೆ ಇದೆ. ಇಂಧನ ಸಚಿವರು, ಬೃಹತ್‌ ಕೈಗಾರಿಕೆ ಸಚಿವರು ಹಾಗೂ ನಾನು ಸೇರಿ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸುತ್ತೇವೆ. ಅಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಶಹಾಪುರ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲು ಬಡಿದು 19 ಕುರಿಗಳು ಬಲಿ!

ಗಂಡ​ಸ​ರಿಗೆ ಕೇಂದ್ರ ಸರ್ಕಾರ ಉಚಿತ ಪ್ರಯಾಣ ಮಾಡ​ಲಿ:

ಖಾಸಗಿ ಬಸ್‌ ಹಾಗೂ ಗಂಡಸರಿಗೆ ಉಚಿತ ಬಸ್‌ ಪ್ರಯಾಣ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಸಾರಿ​ಗೆ ಬಸ್‌​ನಲ್ಲಿ ಉಚಿತ ಪ್ರಯಾಣ ನೀಡಿದೆ. ಬಿಜೆಪಿಗೆ ಜನರ ಕಾಳಜಿ ಇಲ್ವಾ, ಕೇಂದ್ರ ಸರ್ಕಾರ ಗಂಡಸರಿಗೆ ಉಚಿತ ಮಾಡುತ್ತೆನೆಂದು ಹೇಳಲಿ, ಯಾಕೆ ಗಂಡಸರಿಗೆ ಉಚಿತ ಅಂತ ಹೇಳುತ್ತಿಲ್ಲ, ಬಿಜೆಪಿಗೆ ಜನರ ಬಗ್ಗೆ ಜವಾಬ್ದಾರಿ ಇಲ್ವಾ ಎಂದು ತಿರುಗೇಟು ನೀಡಿದರು.
ಈ ಹಿಂದಿನ ಮನಮೋಹನ್‌ ಸಿಂಗ್‌ ಸರ್ಕಾರ ದ್ವೇಷದ ರಾಜಕೀಯ ಮಾಡಿಲ್ಲ. ಕೇಂದ್ರ ಆಹಾರ ಸಚಿವ ಪಿಯೂಶ್‌ ಘೋಯಲ್‌ ಸಚಿವ ಮುನಿಯಪ್ಪ ಅವರನ್ನು ಭೇಟಿಯಾಗಲು ಮೂರು ದಿನ ಟೈಮ್‌ ತೆಗೆದುಕೊಂಡಿದ್ದಾರೆ. ಏನೇ ಕಷ್ಟಬಂದರೂ ಕಾಂಗ್ರೆಸ್‌ ಐದು ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.

ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಕರ್ನಾಟಕ ಜನರ ಬಗ್ಗೆ ಕೇಂದ್ರ ಸರ್ಕಾರದ ಧೋರಣೆ ಗೊತ್ತಾಗಿದೆ. ಕೇಂದ್ರ ಸರಕಾರ ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಬಿಜೆಪಿ ಹತಾಶೆಯಾಗಿದೆ, ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಯಿಂದ ಕೇಂದ್ರ ಸರ್ಕಾರ ಭಯಗೊಂಡಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ವಿಫಲ ಮಾಡಬೇಕೆಂಬ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರ ಸರ್ಕಾರಕ್ಕೆ ಬಡ ಜನರ ಬದ್ಧತೆ ಇರಲಿ ಎಂದರು.

ಗ್ಯಾರಂಟಿ, ವಾರಂಟಿ ಇಲ್ಲದ ಕಾಂಗ್ರೆಸ್‌ ಸರ್ಕಾರ ವರ್ಷದೊಳಗೆ ಪತನ: ಗುತ್ತೇದಾರ್‌

ಮತಾಂತರ ಕಾಯ್ದೆ ಮೊದಲೇ ಇತ್ತು. ಸ್ಪೇಷಲ್‌ ಆಗಿ ತರುವಂಥದ್ದು ಅವಶ್ಯಕತೆ ಮತ್ತೇನಿತ್ತು. ನಾವು ವಿರೋಧ ಪಕ್ಷದಲ್ಲಿದ್ದಾಗಲೇ ವಿರೋಧ ಮಾಡಿದ್ದೇವೆ. ಎಪಿಎಂಸಿ ಕಾಯ್ದೆ ತಂದಂತೆ ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತರಲಿ. ದೇಶಾದ್ಯಂತ ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಮಾಡಲಿ, ಎಲ್ಲ ಪ್ರಾಣಿ ಹತ್ಯೆ ಮಾಡೋದನ್ನ ಕೇಂದ್ರ ಸರ್ಕಾರ ನಿಷೇಧ ಮಾಡಲಿ ಎಂದರು.

ಕೇಂದ್ರ ಸರ್ಕಾರ ಸಂಪೂರ್ಣ ಪ್ರಾಣಿ ಹತ್ಯೆ ನಿಷೇಧ ಮಾಡಿ ಕಾನೂನು ಜಾರಿಗೆ ತರಲಿ. ಅದು ಬಿಟ್ಟು ಬೇಕಾದಾಗ ಒಂದು, ಬೇಡವಾದಾಗ ಒಂದು ನೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕೇವಲ ವೋಟಿಗಾಗಿ ಮಾಡಿದ್ದಾರೆ. ನಾವು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಅನ್ನೋದು ಬಿಜೆಪಿಯವರಿಗೆ ಗೊತ್ತು. ಆದರೆ, ಸಿಎಂ ಸೇರಿದಂತೆ ಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಿಗಿದ್ದು ಗೊತ್ತಾಗಿದೆ. ಮಂತ್ರಿಗಳೇ ಆರೋಪ ಮಾಡಿದ್ದರೂ ಅದಕ್ಕಾಗಿ ಯಡಿಯೂರಪ್ಪರವನ್ನು ತೆಗೆದರು. ಮೀಸಲಾತಿ ಅದು ಇದು ಅಂತಾ ತಂದರೂ ಜನ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಜನರ ಪರ ಇಲ್ಲ ಅಂತಾ ಗೊತ್ತಾಗಿ ಸೋಲಿಸಿ ದಾರಿ ತೋರಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

click me!