Murugha Mutt Case ನಿಶ್ಚಿಂತ ಬಿಎಸ್ಸಿ ಓದ್ತಿದ್ದಾಳೆ, ಉಳಿದವರು ಎಲ್ಲಿ ಹೋದ್ರು?

Published : Oct 20, 2022, 02:59 PM IST
Murugha Mutt Case ನಿಶ್ಚಿಂತ ಬಿಎಸ್ಸಿ ಓದ್ತಿದ್ದಾಳೆ, ಉಳಿದವರು ಎಲ್ಲಿ ಹೋದ್ರು?

ಸಾರಾಂಶ

ನಿಶ್ಚಿಂತ ಏನೋ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ. ಆದ್ರೆ ನಿರಾಳ, ಸಂಸ್ಕೃತಿ, ಅಲ್ಲಮ ಸೇರಿದಂತೆ ಉಳಿದವರೆಲ್ಲ ಎಲ್ಲಿ ಹೋದ್ರು, ಏನ್ಮಾಡ್ತಿದ್ದಾರೆ ? ಮಠದ ಸಂಪರ್ಕದಲ್ಲಿದ್ದಾರಾ ? ಚಿತ್ರದುರ್ಗ ಬಸವಕೇಂದ್ರ ಮುರುಘಾ ಮಠದ ಆಂತರಿಕ ವಲಯದಲ್ಲಿ ಮೆಲ್ಲಗೆ ತೇಲಿ ಬರುತ್ತಿರುವ ಮಾತುಗಳಿವು.

ಚಿಕ್ಕಪ್ಪನಹಳ್ಳಿ ಷಣ್ಮುಖ

 ಚಿತ್ರದುರ್ಗ ಅ.20 : ನಿಶ್ಚಿಂತ ಏನೋ ಬಿಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಳೆ. ಆದ್ರೆ ನಿರಾಳ, ಸಂಸ್ಕೃತಿ, ಅಲ್ಲಮ ಸೇರಿದಂತೆ ಉಳಿದವರೆಲ್ಲ ಎಲ್ಲಿ ಹೋದ್ರು, ಏನ್ಮಾಡ್ತಿದ್ದಾರೆ ? ಮಠದ ಸಂಪರ್ಕದಲ್ಲಿದ್ದಾರಾ ? ಚಿತ್ರದುರ್ಗ ಬಸವಕೇಂದ್ರ ಮುರುಘಾ ಮಠದ ಆಂತರಿಕ ವಲಯದಲ್ಲಿ ಮೆಲ್ಲಗೆ ತೇಲಿ ಬರುತ್ತಿರುವ ಮಾತುಗಳಿವು. ಕಳೆದ ತಿಂಗಳು ಮುರುಘಾಮಠದ ಆವರಣದಲ್ಲಿ ನಾಲ್ಕುವರೆ ವರ್ಷದ ಅನಾಥ ಮಗು ಪತ್ತೆಯಾದ ನಂತರ ಚಿತ್ರದುರ್ಗ ಮಂದಿ ಹಳೆಯದನ್ನೆಲ್ಲ ಮೆಲಕು ಹಾಕಲು ಶುರು ಮಾಡಿದ್ದಾರೆ. ಮಠದಲ್ಲಿದ್ದ ಅನಾಥ ಮಕ್ಕಳು ಎಲ್ಲಿಗೆ ಹೋದರು ಎಂಬಿತ್ಯಾದಿ ಪ್ರಶ್ನೆಗಳ ಹರವಿ ಉತ್ತರಕ್ಕಾಗಿ ತಡಕಾಡುತ್ತಿದ್ದಾರೆ.

ಮುರುಘಾಮಠದ ಸುರಕ್ಷತೆ ದೃಷ್ಟಿಯಿಂದ ಆವರಣದಲ್ಲಿ ಸಿಸಿಟಿವಿ ಅಳವಡಿಕೆ

2000ದಲ್ಲಿ ಎಂಟ್ರಿ ಕೊಟ್ಟಳು ನಿಶ್ಚಿಂತ

ಬರೋಬ್ಬರಿ 22 ವರ್ಷದ ಹಿಂದಿನ ಮಾತಿದು. ಅಂದರೆ 2000 ಇಸವಿಯಲ್ಲಿ ಒಂದು ಮುಂಜಾನೆ ನವಜಾತ ಶಿಶುವೊಂದನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಮುರುಘಾ ಮಠದ ಮುಂಭಾಗದಲ್ಲಿ ಇಟ್ಟು ಹೋಗಿದ್ದರು. ವಾಯು ವಿಹಾರದಲ್ಲಿದ್ದ ಶಿವಮೂರ್ತಿ ಮುರುಘಾಶರಣರಿಗೆ ಈ ವಿಷಯ ಗೊತ್ತಾಗಿ ಆ ಮಗುವನ್ನು ಮೈದಡವಿ ಮಠದ ಆವರಣದೊಳಗೆ ಕರೆ ತಂದಿದ್ದರು. ಪ್ರೀತಿಯ ಮಳೆ ಸುರಿಸಿ ಆಶ್ರಯ ಕೊಟ್ಟಿದ್ದರು. ತೊಟ್ಟಿಲು ಶಾಸ್ತ್ರ ಮಾಡಿ ಹೆಣ್ಣು ಶಿಶುವಿಗೆ ನಿಶ್ಚಿಂತ ಎಂದು ನಾಮಕರಣ ಮಾಡಿದ್ದರು. ಮಠದ ರಾಜಾಂಗಣ, ದರ್ಬಾರ್‌ ಹಾಲ್‌, ಜಯದೇವ ಹಾಲ್‌, ದಾಸೋಹ ಭವನ, ಮುರುಘಾವನ ಸೇರಿದಂತೆ ಎಲ್ಲ ಕಡೆ ಆಡಿಕೊಂಡಿದ್ದ ನಿಶ್ಚಿಂತ, ಒಂದರ್ಥದಲ್ಲಿ ಮಠದ ಮಗುವಾಗಿಯೇ ಇದ್ದಳು. ಮಠಕ್ಕೆ ಬರುವವರು, ಹೋಗುವವರು ಆಕೆಯನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

ಶುರುವಾಯ್ತು ಅನಾಥ ಮಕ್ಕಳ ಪರಂಪರೆ:

ನಿಶ್ಚಿಂತ ಆಟವಾಡಿಕೊಂಡು ಇರುವಾಗಲೇ ಹೊಸ ಮತ್ತೋರ್ವ ಅತಿಥಿ ಮುರುಘಾ ಮಠಕ್ಕೆ ಸೇರ್ಪಡೆಯಾದರು. ಮಠದ ಮುಂಭಾಗದಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಮತ್ತೊಂದು ಮಗು ದೊರೆತಾಗ ಪ್ರೀತಿಯಿಂದ ಬರಮಾಡಿಕೊಂಡ ಶರಣರು ಆಕೆಗೆ ನಿರಾಳವೆಂದು ನಾಮಕರಣ ಮಾಡಿದರು. ಇದಾದ ನಂತರ ಮತ್ತೊಂದು ಮಗು ಆಗಮನವಾದಾಗÜ ಅಲ್ಲಮನೆಂದು ಕರೆದರು. ಬಸ್‌ಸ್ಡಾ್ಯಂಡ್‌ನಲ್ಲಿ ಸಿಕ್ಕವರು, ಜಾತ್ರೆಯಲ್ಲಿ ದೊರೆತವರು, ಎಲ್ಲರನ್ನು ಮಠಕ್ಕೆ ಒಪ್ಪಿಸುವ ಕೈಂಕರ್ಯಗಳು ಶುರುವಾದವು. ನೋಡ ನೋಡುತ್ತಿದ್ದಂತೆ ಅನಾಥ ಮಕ್ಕಳ ಸಂಖ್ಯೆ ಹತ್ತು ದಾಟಿ ಹೋಯಿತು. ಇವರುಗಳು ತಂಗಿದ್ದ ಕೇಂದ್ರಕ್ಕೆ ಬಸವಕುಟೀರವೆಂದು ಶರಣರು ನಾಮಕರಣ ಮಾಡಿದ್ದರು.

ಅನಾಥ ಮಕ್ಕಳಿಗಾಗಿ ದೇಣಿಗೆ:

ಅನಾಥ ಮಕ್ಕಳ ಲಾಲನೆ ಪಾಲನೆ ಮಾಡುವ ಸಂಬಂಧ ದೇಣಿಗೆ ಪಡೆಯುವ ಪ್ರಕ್ರಿಯೆ ಶರಣರು ಆರಂಭಿಸಿದರು. ಪ್ರತಿ ತಿಂಗಳು ಐದನೇ ತಾರೀಖು ಮುರುಘಾಮಠದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದ ವೇಳೆ ಜೋಳಿಗೆ ಹಿಡಿದು ಅನಾಥ ಮಕ್ಕಳಿಗೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿತ್ತೆಂದರೆ ಮದುವೆಗೆ ಬರುವವರು ಕಡ್ಡಾಯವಾಗಿ ಅನಾಥ ಮಕ್ಕಳ ಯೋಗಕ್ಷೇಮಕ್ಕೆ ಕಿರುಕಾಣಿಕೆ ಒಪ್ಪಿಸಿಯೇ ಹೋಗುತ್ತಿದ್ದರು.

ದತ್ತು ಸ್ವೀಕಾರ ಕೇಂದ್ರ:

ದಿನಗಳು ಉರುಳಿದಂತೆ ಯಾರಿಗೂ ಬೇಡವಾದ ನವಜಾತ ಶಿಶುಗಳ ಸ್ವೀಕರಿಸಲು ಮುರುಘಾ ಮಠದ ದ್ವಾರ ಬಾಗಿಲು ಬಳಿ ಸಿಮೆಂಟಿನ ತೊಟ್ಟಿಲೊಂದನ್ನು ನಿರ್ಮಿಸಲಾಯಿತು. ಮುರುಘಾ ಮಠದ ಆವರಣದಲ್ಲಿದ್ದ ಅಕ್ಕ ಮಹಾದೇವಿ ವಿದ್ಯಾರ್ಥಿ ನಿಲಯದ ಕೆಳ ಭಾಗದ ಕಟ್ಟಡದಲ್ಲಿ ರಾಜ್ಯ ಸರ್ಕಾರದ ನೆರವಿನ ದತ್ತು ಸ್ವೀಕರಿಸುವ ಮಡಿಲು ಕೇಂದ್ರ ತೆರೆದು ಪಾಲನೆ ಮಾಡಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿ ಎಲ್ಲವೂ ಸಾಂಗೋಪಾಂಗವಾಗಿ ನಡೆಯುತ್ತಿತ್ತು.

ಚಿತ್ರದುರ್ಗ: ಮುರುಘಾ ಶ್ರೀ ಇಲ್ಲದ ಮೊದಲ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ಆದರೆ ಕಳೆದ ತಿಂಗಳು ಮಠದ ಆವರಣದಲ್ಲಿ ಕಂಡು ಬಂದ ನಾಲ್ಕುವರೆ ವರ್ಷದ ಮಗು ಅನಧಿಕೃತ ಪಾಲನೆ ಎಂಬ ಸಂಗತಿಯೊಂದನ್ನು ತೆರೆದಿಟ್ಟಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಣಿ ಮಾಡಿಸದೇ ಪಾಲನೆ ಮಾಡುತ್ತಿದ್ದ ಪ್ರಕರಣ ಇದಾಗಿದ್ದು, ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ನಾಲ್ವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಮಕ್ಕಳ ರಕ್ಷಣಾ ಘಟಕದವರು ದೂರು ದಾಖಲಿಸಿದ್ದಾರೆ. ಚಿತ್ರದುರ್ಗ ಮುರುಘಾಮಠಕ್ಕೆ ಇದುವರೆಗೂ ಎಂಟ್ರಿ ಕೊಟ್ಟಿದ್ದ ಅನಾಥ ಮಕ್ಕಳ ಪೈಕಿ ಮೊದಲನೆಯವಳು ನಿಶ್ಚಿಂತ ಮಾತ್ರ ಎಸ್‌ಜೆಎಂ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎಸ್ಸಿ ಓದುತ್ತಿದ್ದಾಳೆ. ಉಳಿದವರು ಎಲ್ಲಿ ಎಂಬ ಸಹಜ ಪ್ರಶ್ನೆಗಳು ಕೋಟೆ ನಾಡಿನಲ್ಲಿ ಮಾರ್ದನಿಸುತ್ತಿವೆ.

PREV
Read more Articles on
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು