
ಮಾಲೂರು (ಏ.28): ರಾಜ್ಯದಲ್ಲಿ ಬರಗಾಲ, ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದ್ದರೂ ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರೈತರು ಬೆಳೆದ ಬೆಳೆಗಳಿಗೆ ಹಾಗೂ ಅಲ್ಲಿನ ರೈತರಿಗೆ ಯಾವುದೇ ರೀತಿ ಪರಿಹಾರಗಳನ್ನು ಘೋಷಣೆ ಮಾಡಿಲ್ಲ. ಮಾತೆತ್ತಿದರೆ ಗ್ಯಾರಂಟಿ ಎನ್ನುವ ರಾಜ್ಯ ಸರ್ಕಾರವು ರೈತರಿಗೆ ತಪ್ಪದೆ ನೀಡಬೇಕಾಗಿದ್ದ ಗ್ಯಾರಂಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ನಡೆಯಿಂದ ರೈತರು ಸರ್ಕಾರ ಮೇಲೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆಪಾದಿಸಿದರು.
ಸುಧಾಕರ್ ಅವರು ಹಿರಿಯ ರಾಜಕಾರಣಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದರಿಂದ ಆವರ ಆರೋಗ್ಯ ವಿಚಾರವು ಸಾರ್ವಜನಿಕರ ಚರ್ಚೆಗೆ ಕಾರಣವಾಗುತ್ತಿದೆ. ಕುಮಾರಸ್ವಾಮಿಯವರು ಈ ವಿಚಾರದಲ್ಲಿ ಏನು ಮಾತನಾಡಿದರೂ ಗೊತ್ತಿಲ್ಲ. ಆದರೆ ಅವರಿಗೆ ಯಾವುದೋ ಬಲವಾದ ಮಾಹಿತಿ ಗೊತ್ತಿರಬೇಕು ಎಂದು ಹೇಳಿದರು.
ಡಾ.ರಾಜ್ ಸಮಾಧಿ ಬಗ್ಗೆ ನಟ ಚೇತನ್ ಎತ್ತಿರುವ ಪ್ರಶ್ನೆ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ನಟ ಚೇತನ್ ಪ್ರಚಾರಪ್ರಿಯರು.ಅವರಿಗೆ ರಾಜ್ ಕುಮಾರ್ ಕೊಡುಗೆ ಬಗ್ಗೆ ಗೊತ್ತಿಲ್ಲ ಎನ್ನಿಸುತ್ತದೆ. ರಾಜಕುಮಾರ್ ಸಮಾಧಿ ಜಾಗದ ಬಗ್ಗೆ ಪ್ರಶ್ನಿಸಲು ಚೇತನ್ ಯಾರು ಎಂದರು. ರಾಜ್ಕುಮಾರ್ ಬಗ್ಗೆ ಮಾತನಾಡಿಲಕ್ಕೂ ಯೋಗ್ಯತೆ ಇರಬೇಕು. ಪ್ರಚಾರ ಪ್ರಿಯರಿಗೆ ಇದು ಅರಿವಾಗಬೇಕು ಎಂದರು.