ಡಿಜೆ-ಕೆಜಿ ಹಳ್ಳಿ ಗಲ​ಭೆಯ 2 ಕೇಸ್‌ ಎನ್‌ಐಎ ತನಿಖೆ

By Kannadaprabha NewsFirst Published Sep 23, 2020, 7:10 AM IST
Highlights

40ಕ್ಕೂ ಹೆಚ್ಚು ಆರೋ​ಪಿ​ಗ​ಳಿಗೆ ಉಗ್ರ ನಂಟು ಹಿನ್ನೆಲೆ| ಎನ್‌ಐಎ ತನಿಖೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಮುಖ್ಯಮಂತ್ರಿಗಳು ಅಂತಿಮವಾಗಿ ಕೇಂದ್ರಕ್ಕೆ ಶಿಫಾರಸು| 

ಬೆಂಗಳೂರು(ಸೆ.23): ನಗರದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಐಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ತಂಡವು ಮಂಗಳವಾರದಿಂದ ಅಧಿಕೃತವಾಗಿ ತನಿಖೆ ಆರಂಭಿಸಿದೆ.

ಈ ಪ್ರಕರಣದ ಬಂಧಿತ ಸುಮಾರು 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ವಹಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿತು. ಅದರನ್ವಯ ಎನ್‌ಐಎ ತನಿಖೆಗೆ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿತು. ಇದಕ್ಕೂ ಮುನ್ನ ತನಿಖೆ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಹ ಸೋಮವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಗಲಭೆಯಲ್ಲಿ ಪೊಲೀಸರ ಗುಂಡಿನ ದಾಳಿ ಕುರಿತು ದಾಖಲಾಗಿದ್ದ ಎಫ್‌ಐಆರ್‌ಗಳು ಮಾತ್ರ ಎನ್‌ಐಎ ತನಿಖೆ ನಡೆಸಲಿದೆ.

Latest Videos

ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿಯಲ್ಲಿ ನಡೆದಿದ್ದ ಗಲಭೆ ಸಂಬಂಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಐಜಿಪಿ ಮಟ್ಟದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರಿನಲ್ಲೇ ಕ್ಯಾಂಪ್‌ ಮಾಡಿ ತನಿಖಾ ಉಸ್ತುವಾರಿ ನಡೆಸಲಿದ್ದಾರೆ ಎಂದು ಎನ್‌ಐಎ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಗಲಭೆ ಪ್ರಕರಣ: ಆರೋಪಿಗಳಿಗಿಲ್ಲ ಜಾಮೀನು

ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಬಗ್ಗೆ ಆ.11ರಂದು ಸೋಮವಾರ ರಾತ್ರಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್‌ ವಿವಾದಾತ್ಮಕ ಪೋಸ್ಟ್‌ ಮಾಡಿದ್ದ. ಇದನ್ನು ಖಂಡಿಸಿ ಕಿಡಿಗೇಡಿಗಳು, ಶಾಸಕರ ಮನೆ ಮತ್ತು ಕಚೇರಿ, ಆರೋಪಿ ನವೀನ್‌ ಮನೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಗಲಭೆ ಹಿಂದೆ ಎಸ್‌ಡಿಪಿಐ ಕೈವಾಡವು ಸಿಸಿಬಿ ಹಾಗೂ ಪೂರ್ವ ವಿಭಾಗದ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಮುಜಾಮಿಲ್‌ ಪಾಷ ಮತ್ತು 20 ಜನ ಪ್ರಮುಖ ಮುಖಂಡರು ಸೇರಿದಂತೆ 380ಕ್ಕೂ ಹೆಚ್ಚಿನ ಆರೋಪಿಗಳು ಬಂಧಿತರಾಗಿದ್ದರು. ಇವರಲ್ಲಿ ಸುಮಾರು 40 ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಗಲಭೆ ಪ್ರಕರಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಾಗಿಸಿದೆ. ಎನ್‌ಐಎ ತನಿಖೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದಿರುವ ಮುಖ್ಯಮಂತ್ರಿಗಳು ಅಂತಿಮವಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.

‘ಮುಜಾಮಿಲ್‌ ಸಭೆ ನಡೆಸಿದ್ದ’

ಗಲಭೆಗೂ ಮುನ್ನ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಸದಸ್ಯರ ಸಭೆ ನಡೆ ನಡೆಸಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಮುಜಾಮಿಲ್‌ ಪಾಷ ಗಲಭೆಗೆ ಪ್ರಚೋದನೆ ನೀಡಿದ್ದಾನೆ. ಬಳಿಕ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಗಲಭೆ ನಡೆದಿದೆ ಎಂದು ಎನ್‌ಐಎ ಹೇಳಿದೆ.
 

click me!