ಇನ್ನೂ 3 ದಿನ ಭಾರಿ ಮಳೆ : ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ವರುಣ?

By Kannadaprabha NewsFirst Published Oct 20, 2020, 7:02 AM IST
Highlights

 ವಾಯುಭಾರ ತೀವ್ರವಾಗಿ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಅ.23ರವರೆಗೆ ಗುಡುಗು ಸಹಿತ ಭಾರಿ ಮತ್ತು ಅತಿ ಭಾರಿ ಮಳೆ ಸುರಿಯಲಿದೆ

ಬೆಂಗಳೂರು (ಅ.20):  ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ತೀವ್ರವಾಗಿ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಅ.23ರವರೆಗೆ ಗುಡುಗು ಸಹಿತ ಭಾರಿ ಮತ್ತು ಅತಿ ಭಾರಿ ಮಳೆ ಸುರಿಯುವ ಸಂಭವವಿದೆ.

ಉತ್ತರ ಒಳನಾಡಿನ ಬೀದರ್‌, ಗದಗ, ಧಾರವಾಡ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದ್ದು, ಅ.22ರವರೆಗೆ ‘ಯಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಇದೇ ರೀತಿ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮಂಡ್ಯ, ರಾಮನಗರದಲ್ಲಿ ಮಳೆ ಸುರಿಯಲಿದ್ದು, ಅ.20ಕ್ಕೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಇನ್ನು ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗಕ್ಕೆ ಅ.22 ಮತ್ತು 23 ರಂದು ‘ಯಲ್ಲೋ ಅಲರ್ಟ್‌’ ಕೊಡಲಾಗಿದೆ.

ಕರಾವಳಿಯ ಜಿಲ್ಲೆಗಳಲ್ಲಿ ಅ.21ರಿಂದ 23ರವರೆಗೆ ಗುಡುಗು, ಗಾಳಿ ಸಹಿತ ಭಾರಿ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ‘ಯಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಮೂರು ದಿನ ಕರಾವಳಿಯಲ್ಲಿ ಗಾಳಿ ಪ್ರತಿ ಗಂಟೆಗೆ ಸುಮಾರು 50 ಕಿ.ಮೀ ವೇಗದಲ್ಲಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕಚೇರಿ ನಿರ್ದೇಶಕ ಸಿ.ಎಸ್‌.ಪಾಟೀಲ್‌ ಮಾಹಿತಿ ನೀಡಿದ್ದಾರೆ.

ನಿನ್ನೆ ಎಲ್ಲೆಲ್ಲಿ ಎಷ್ಟುಮಳೆ:  ಅ.19 ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ರಾಜ್ಯದ ಹಾಸನ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 7 ಸೆಂ.ಮೀ ಮಳೆ ಸುರಿದಿದೆ. ಉಳಿದಂತೆ ಮಂಡ್ಯ ಜಿಲ್ಲೆಯ ಕೃಷ್ಣರಾಜನಗರ 5 ಸೆಂ.ಮೀ, ಕೊಡಗಿನ ಸೋಮವಾರಪೇಟೆ, ಬೆಂಗಳೂರು ನಗರದ ಎಲೆಕ್ಟ್ರಾನಿಕ್‌ ಸಿಟಿ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ತಲಾ 4 ಸೆಂ.ಮೀ ಮೆಳೆಯಾಗಿದೆ. ಉತ್ತರ ಕನ್ನಡದ ಶಿರಾಲಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ರಾಜ್ಯದ ಗರಿಷ್ಠ ಉಷ್ಣಾಂಶ 32.4 ಮತ್ತು ಕನಿಷ್ಠ ಉಷ್ಣಾಂಶ ಬೀದರ್‌ನಲ್ಲಿ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

click me!