ಕಾಂಗ್ರೆಸ್‌ನಲ್ಲೂ ಈಗ ಹೊಸಬರದ್ದೇ ಹವಾ..!

Kannadaprabha News   | Asianet News
Published : Jul 10, 2021, 01:28 PM IST
ಕಾಂಗ್ರೆಸ್‌ನಲ್ಲೂ ಈಗ ಹೊಸಬರದ್ದೇ ಹವಾ..!

ಸಾರಾಂಶ

* ಖಾಸಗಿ ಸಂಸ್ಥೆಯಿಂದ ಆಂತರಿಕ ಸರ್ವೇ * ಮಹಿಳಾ, ಯುವ ಕಾರ್ಯಕರ್ತರಿಂದ ಟಿಕೆಟ್‌ಗೆ ಪ್ರಯತ್ನ * ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಬಗ್ಗೆ ಪಕ್ಷ ಯೋಚಿಸಿದ ಕಾಂಗ್ರೆಸ್‌  

ಮಯೂರ ಹೆಗಡೆ

ಹುಬ್ಬಳ್ಳಿ(ಜು.10): ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹಲವು ಹೊಸ ಮುಖಗಳು ಉತ್ಸಾಹದಲ್ಲಿವೆ. ಬಿಜೆಪಿ ಮಗದೊಮ್ಮೆ ಗದ್ದುಗೆ ಏರದಂತೆ ತಡೆಯುವ ಪ್ರಯತ್ನದಲ್ಲಿರುವ ಪಕ್ಷ ಎಷ್ಟರ ಮಟ್ಟಿಗೆ ಹೊಸಬರನ್ನು ಕಣಕ್ಕಿಳಿಸುತ್ತದೆ ಎಂಬುದು ಕಾದು ನೋಡಬೇಕಷ್ಟೆ.

ಮೀಸಲಾತಿ, ವಾರ್ಡ್‌ ವಿಂಗಡಣೆ, ಮತದಾರರ ಪಟ್ಟಿಸಂಬಂಧ ಆಕ್ಷೇಪಿಸುತ್ತಿರುವ ಜಿಲ್ಲಾ ಮಹಾನಗರ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಿಲೇರುವ ಸಿದ್ಧತೆಯಲ್ಲಿದೆ. ಚುನಾವಣೆ ಆರು ತಿಂಗಳು ವಿಳಂಬ ಆಗಬಹುದೆಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ತನ್ನಸ್ಪರ್ಧಿಗಳ ಆಯ್ಕೆಗೆ ಕಾಂಗ್ರೆಸ್‌ ಹೆಜ್ಜೆ ಇಟ್ಟಿದೆ. ಶೇ. 50ರಷ್ಟು ಮಹಿಳಾ ಮೀಸಲಾತಿ ಕಾರಣ ಅಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ಕೊಡುತ್ತೇವೆ ಎಂದು ಮುಖಂಡರು ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಅಭ್ಯರ್ಥಿ ಆಯ್ಕೆಗೆ ಖಾಸಗಿ ಸಂಸ್ಥೆ ಮೂಲಕ ಆಂತರಿಕ ಸರ್ವೇ ನಡೆಸಲು ಮುಂದಾಗಿರುವುದು ಒಂದು ಕಡೆಯಾದರೆ ಇದರ ಮಧ್ಯೆ ಹಲವರು ಟಿಕೆಟ್‌ಗಾಗಿ ಯತ್ನಿಸಿದ್ದಾರೆ.

ಹಿಂದೆ 27ನೇ ವಾರ್ಡ್‌ನಲ್ಲಿದ್ದ ಉಣಕಲ್‌ ಸಾಯಿನಗರ ಮುಖ್ಯರಸ್ತೆ ಸೇರಿ ಇತರೆ ಪ್ರದೇಶ ವಿಂಗಡಣೆ ಬಳಿಕ 38ನೇ ವಾರ್ಡ್‌ ಆಗಿದೆ. ಇಲ್ಲಿ ಪಕ್ಷದಿಂದ ಸ್ಪರ್ಧಿಸಲು 6 ತಿಂಗಳಿಚೆಗೆ ಕೆಪಿಸಿಸಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ಆಗಿರುವ ಪ್ರವೀಣ ಶೆಲವಡಿ ಪ್ರಯತ್ನಿಸಿದ್ದಾರೆ. ಹಿಂದುಳಿದ ವರ್ಗ ಎ ಮೀಸಲಾತಿ ಇಲ್ಲಿದೆ. ಇ ಆ್ಯಂಡ್‌ ಸಿ ಡಿಪ್ಲೊಮಾ ಪದವೀಧರ ಪ್ರವೀಣ ಪಾಲಿಕೆಯ ಯೋಜನೆಗಳು ಕ್ಷೇತ್ರದ ಕಟ್ಟಕಡೆ ವ್ಯಕ್ತಿಗೆ ತಲುಪಿಸುವ ಗುರಿಯಿದೆ ಎನ್ನುತ್ತಾರೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸ್ಪರ್ಧೆಗೆ ಆಪ್‌ ದಿಲ್ಲಿ ತಂತ್ರ..!

ಮಹಿಳಾ ಸಾಮಾನ್ಯ ಮೀಸಲಾದ 57ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸರಸ್ವತಿ ಕುಲಕರ್ಣಿ ಯತ್ನದಲ್ಲಿದ್ದಾರೆ. ದೇಶಪಾಂಡೆ ನಗರ, ಐಟಿ ಪಾರ್ಕ್ ವ್ಯಾಪ್ತಿಯ ಪ್ರದೇಶ ಸೇರಿದ ವಾರ್ಡ್‌ ಇದು. ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಸ್ಪರ್ಧೆ ಬಗ್ಗೆ ಮುಖಂಡರಲ್ಲಿ ಚರ್ಚಿಸಿದ್ದೇವೆ ಎಂದು ಅವರ ಪತಿ ಮಾಲತೇಶ ಕುಲಕರ್ಣಿ ತಿಳಿಸಿದರು.

ಡಿಪ್ಲೊಮಾ ಇನ್‌ ಇನ್‌ಫಾರ್ಮೇಶನ್‌ ಸೈನ್ಸ್‌ ಓದಿರುವ ಸಂದಿಲ್‌ಕುಮಾರ 51ನೇ ವಾರ್ಡ್‌ನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಹಿಂದುಳಿದ ವರ್ಗ ‘ಎ’ ಮೀಸಲಾತಿ ಕ್ಷೇತ್ರ ಇದಾಗಿದ್ದು, ಅಕ್ಷಯಪಾರ್ಕ್, ಭರತ ನಗರ, ಮದನಿ ಕಾಲನಿ, ಪ್ರಿಯದರ್ಶಿನಿ ಕಾಲನಿ ಏರಿಯಾಗಳನ್ನು ವಾರ್ಡ್‌ ಒಳಗೊಂಡಿದೆ.

ಇನ್ನು, 52ನೇ ವಾರ್ಡ್‌ನಿಂದ ಎಫ್‌.ಎಚ್‌. ಜಕ್ಕಪ್ಪನವರ ಪುತ್ರ ಕೆಪಿಸಿಸಿ ಸಂಯೋಜಕ ಸಂತೋಷ ಜಕ್ಕಪ್ಪನವರ ಸ್ಪರ್ಧಿಸಲು ಮುಂದಾಗಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ, ಈಗ ಸಂಯೋಜಕರಾಗಿ ಸಕ್ರಿಯವಾಗಿದ್ದವರು. ಹೀಗಾಗಿ ಇವರಿಗೆ ಪಕ್ಷ ಅವಕಾಶ ನೀಡುವ ಸಾಧ್ಯತೆ ಹೆಚ್ಚು. ಇನ್ನು 65ನೇ ವಾರ್ಡ್‌ (ಹಿಂದಿನ 53ನೇವಾರ್ಡ್‌) ನಿಂದ ಕೆಪಿಸಿಸಿ ಸಂಯೋಜಕ ಪ್ರಕಾಶ ಬುರಬುರೆ ತಮ್ಮ ಪತ್ನಿ ಸುನಿತಾ ಬುರಬುರೆ ಅವರಿಗೆ ಅವಕಾಶ ನೀಡುವಂತೆ ಮುಖಂಡರಲ್ಲಿ ಕೇಳಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಹೊಸಮುಖಗಳು..!

ಉಣಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಜ್ಯೋತಿ ವಾಲಿಕಾರ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಲು ಮುಖಂಡರಲ್ಲಿ ಕೇಳಿದ್ದಾರೆ. ಸಾಮಾನ್ಯ ಮೀಸಲಾತಿ ಬಂದಿದೆ. ಆದರೂ ನಾವು ಸ್ಪರ್ಧೆಗೆ ಅವಕಾಶ ಕೇಳಿದ್ದೇವೆ. ನಮ್ಮಂತ ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದರು.ಧಾರವಾಡದ ಕೆಲಗೇರಿ ಕೇರಿ, ಎಐಆರ್‌, ದೂರದರ್ಶನ ಕೇಂದ್ರ, ಸಪ್ತಾಪುರ ಮುಖ್ಯ ರಸ್ತೆ ಹಳಿಯಾಳ ರಸ್ತೆ ಒಳಗೊಂಡ 12ನೇ ವಾರ್ಡ್‌ನಿಂದ ಸುಜನ ಕಾಕೆ ಸ್ಪರ್ಧಿಸುವ ಪ್ರಯತ್ನ

ನಡೆದಿದೆ. ಇದು ಕೂಡ ಸಾಮಾನ್ಯ ವಾರ್ಡ್‌. ಪರಿಚಯ ಇಲ್ಲದ ಸ್ಥಳದಿಂದ ಸ್ಪರ್ಧಿಸುವುದು ಹೇಗೆ? ಹೀಗಾಗಿ ಅವಕಾಶ ನೀಡುವಂತೆ ಕೇಳಿದ್ದೇವೆ ಎನ್ನುತ್ತಾರೆ. ಇನ್ನು, ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಬಾಲಮ್ಮ ಜಂಗಿನವರ ಕೂಡ ಮೊದಲ ಬಾರಿ ಸ್ಪರ್ಧಿಸುವ ತವಕದಲ್ಲಿದ್ದಾರೆ. ಹಿಂದುಳಿದ ಎ ವರ್ಗ ಮೀಸಲಾತಿ ಇರುವ 53ನೇ ವಾರ್ಡ್‌ ಅಂದರೆ ನಾಗಲಿಂಗ ನಗರ, ಅಭಿನವ ನಗರ ಸೇರಿದ ಪ್ರದೇಶವಿದು.

ಇವಿಷ್ಟೇ ಮಾತ್ರವಲ್ಲ, ಇನ್ನೂ ಸಾಕಷ್ಟು ಹೊಸಮುಖಗಳು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ನವನಗರ ನವಲೂರು ಲಕ್ಷ್ಮೀ ಗುತ್ತೆ, ವೀರೇಶ ಉಂಡಿ ಸೇರಿ ಹಲವರು ಕಣಕ್ಕಿಳಿವ ಉತ್ಸಾಹದಲ್ಲಿದ್ದಾರೆ.
ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಬಗ್ಗೆ ಪಕ್ಷ ಯೋಚಿಸಿದೆ. ಖಾಸಗಿ ಸಂಸ್ಥೆ ಮೂಲಕ ಸರ್ವೇ ನಡೆದಿದ್ದು, ಅಭ್ಯರ್ಥಿಗಳನ್ನು ಅಳೆದು ತೂಗಿ ಅವರು ವರದಿ ನೀಡಲಿದ್ದು, ನಮ್ಮ ಅಭಿಪ್ರಾಯವನ್ನೂ ತಿಳಿಸಿದ ಬಳಿಕ ಮುಂದಿನ ತೀರ್ಮಾನ ಆಗಲಿದೆ ಎಂದು ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.

ಶೇ. 50ರಷ್ಟು ಮಹಿಳೆಯರಿಗೆ ಮೀಸಲಿರುವ ಕಾರಣ ಸಾಕಷ್ಟು ಹೊಸಬರು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಮಹಿಳಾ ಕಮೀಟಿ, ಜಿಲ್ಲಾ ಮುಖಂಡರು ಪರಿಶೀಲಿಸಿ ಟಿಕೆಟ್‌ ನೀಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕ ಅಧ್ಯಕ್ಷೆ ದೀಪಾ ಗೌರಿ ಹೇಳಿದ್ದಾರೆ.
 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ