ದಾವಣಗೆರೆ ನಗರದಲ್ಲಿ 12 ಹೊಸ ಕೇಸ್‌: ಆತಂಕ

By Kannadaprabha NewsFirst Published May 13, 2020, 8:33 AM IST
Highlights

ದಾವಣಗೆರೆ ನಗರದಲ್ಲಿ ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿವೆ. ಇವರೆಲ್ಲರ ಪೈಕಿ ಅರ್ಧ ಜನಕ್ಕೆ ಅಹಮದಾಬಾದ್‌ಗೆ ಹೋಗಿ ಬಂದ ಟ್ರಾವೆಲ್‌ ಹಿಸ್ಟರಿ ನಂಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಮೇ.13): ನಗರದಲ್ಲಿ ಹೊಸದಾಗಿ 12 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, ಈ ಪೈಕಿ 6 ಜನ ಗುಜರಾತ್‌ನ ಅಹಮದಾಬಾದ್‌ಗೆ ಹೋಗಿ ಬಂದ ಟ್ರಾವೆಲ್‌ ಹಿಸ್ಟರಿ ಹೊಂದಿದ್ದರೆ, ಉಳಿದ 6 ಜನರು ಜಾಲಿ ನಗರ ಕಂಟೈನ್‌ಮೆಂಟ್‌ ವ್ಯಾಪ್ತಿಗೊಳಪಟ್ಟ ಸಂಪರ್ಕಿತರು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಿ ಸಂಖ್ಯೆ 915ರಿಂದ 920ರವರೆಗೆ 6 ಜನರು ಅಹಮದಾಬಾದ್‌ಗೆ ಪ್ರಯಾಣ ಮಾಡಿದ್ದ ಟ್ರಾವೆಲ್‌ ಹಿಸ್ಟರಿ ಹೊಂದಿದ್ದು, ಒಟ್ಟು 8 ಜನ ಅಹಮದಾಬಾದ್‌ನಿಂದ ಹೊನ್ನಾಳಿ ತಾ. ಹುಣಸಘಟ್ಟಕ್ಕೆ ಹೋಗುತ್ತಿದ್ದರು ಎಂದರು.

ಹುಣಸಘಟ್ಟಕ್ಕೆ ಹೋಗುತ್ತಿದ್ದವರನ್ನು ಅಲ್ಲಿಗೆ ತಲುಪುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ಕ್ವಾರಂಟೈನ್‌ ಮಾಡಲಾಗಿತ್ತು. ಏಳು ಜನರ ಪೈಕಿ 6 ಜನರಲ್ಲಿ ಪಾಸಿಟಿವ್‌ ಬಂದಿದ್ದು, ಒಬ್ಬರ ಫಲಿತಾಂಶ ಬಾಕಿ ಇದೆ. ಪಿ-914 ಎಂಬುವರು ಪಿ-696ರ ಸಂಪರ್ಕ ಹೊಂದಿದವರು. ರೋಗಿ ಸಂಖ್ಯೆ921 ಮತ್ತು 922 ಎಂಬುವರು ಪಿ-695ರ ಸಂಪರ್ಕ ಹೊಂದಿದವರು. ರೋಗಿ ಸಂಖ್ಯೆ 923ರಿಂದ 925ರವರೆಗೆ ಸಂಖ್ಯೆಯವರು ಪಿ-696ರ ಸಂಪರ್ಕ ಹೊಂದಿದವರಾಗಿದ್ದಾರೆ. ಈ ಆರೂ ಜನರೂ ಇಲ್ಲಿನ ಜಾಲಿನಗರ ಕಂಟೈನಮೆಂಟ್‌ ಝೋನ್‌ ವ್ಯಾಪ್ತಿಯವರಾಗಿದ್ದಾರೆ ಎಂದು ತಿಳಿಸಿದರು.

ಸೋಂಕಿತ ಎಲ್ಲಾ ರೋಗಿಗಳ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಪತ್ತೆ ಕಾರ್ಯ ತಕ್ಷಣದಿಂದಲೇ ಆರಂಭಿಸಲಿದ್ದೇವೆ. ಮಂಗಳವಾರ ಒಟ್ಟು 154 ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದ್ದು, 120 ಸ್ಯಾಂಪಲ್‌ ಈಗ ಸಂಗ್ರಹಿಸಿ ಕಳಿಸಲು ಸಿದ್ಧವಾಗಿದೆ. ನಾಳೆ ಲ್ಯಾಬ್‌ಗೆ ಕಳಿಸುತ್ತೇವೆ. ಇಂದು 134 ಸ್ಯಾಂಪಲ್‌ಗಳ ವರದಿ ಬಂದಿದ್ದು, ಒಟ್ಟು 461 ವರದಿ ಬರುವುದು ಬಾಕಿ ಇದೆ. ಸದ್ಯ ಜಿಲ್ಲೆಯಲ್ಲಿ 77 ಸಕ್ರಿಯ ಪಾಸಿಟಿವ್‌ ಪ್ರಕರಣಗಳಿವೆ ಎಂದರು.

ವಿದ್ಯುತ್‌ ಬಿಲ್‌ ಶಾಕ್: ಜೂನ್‌ವರೆಗೆ ವಿದ್ಯುತ್‌ ಕಡಿತವಿಲ್ಲ..?

ಒಟ್ಟು 22 ಜನರ 14 ದಿನಗಳ ಚಿಕಿತ್ಸೆ ಮುಗಿದಿದ್ದು, ಈ ಎಲ್ಲರ ಮೊದಲನೇ ಸ್ಯಾಂಪಲ್‌ ಕಳಿಸಲಾಗಿದೆ. ಇನ್ನು 24 ಗಂಟೆಯಲ್ಲಿ ಮತ್ತೊಂದು ಸ್ಯಾಂಪಲ್‌ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗುವುದು. ಅಹಮದಾಬಾದ್‌ ಪ್ರಯಾಣದ ಹಿನ್ನೆಲೆ ಹೊಂದಿರುವ 22 ಜನರು ಜಿಲ್ಲೆಗೆ ಆಗಮಿಸಿದ್ದು, ಆ ಎಲ್ಲರನ್ನೂ ಕ್ವಾರಂಟೈನ್‌ ಮಾಡಿ, ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಟಹನುಮಂತರಾಯ ಮಾತನಾಡಿ, ಶಿವ ನಗರದ ಕಂಟೈನ್‌ಮೆಂಟ್‌ ಝೋನ್‌ ಸ್ಥಾಪನೆ ಬಗ್ಗೆ ಸ್ಥಳೀಯರಿಂದ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಡಿಸಿ, ಪಾಲಿಕೆ ಆಯುಕ್ತರೊಂದಿಗೆ ಭೇಟಿ ನೀಡಿ, ಜನರ ಕುಂದು ಕೊರತೆ ಆಲಿಸಿದ್ದೇವೆ. ಅಗತ್ಯ ವಸ್ತುಗಳನ್ನು ಪೂರೈಸುವ ಭರವಸೆ ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

click me!