
ಗಂಗಾವತಿ (ಜು.03): ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ರಾಯಚೂರಿಗೆ ಹೋಗುವ ಮಾರ್ಗದಲ್ಲಿ ಗಂಗಾವತಿಯ ವೆಂಕಟೇಶ ಕುಲಕರ್ಣಿ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಪ್ರಸ್ತುತ ವರ್ಷ ಮಳೆ ಬರುತ್ತಿಲ್ಲ.
ಇದರಿಂದ ಭದ್ರಾ ಜಲಾಶಯ ಭರ್ತಿಯಾಗದೆ ಇರುವದರಿದ ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಪ್ರಸ್ತುತ ಬೆಳೆಗೆ ನೀರು ಅನುಮಾನ ಎಂದು ಪ್ರಕಟಿಸಲಾಗಿದೆ. ಒಂದು ವೇಳೆ ಸಮರ್ಪಕವಾಗಿ ನೀರು ಬಂದು ಜಲಾಶಯಕ್ಕೆ ನೀರು ಸಂಗ್ರಹವಾದರೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ ಎಂದರು.
ಜಲಾಶಯದಲ್ಲಿ 35 ಟಿಎಂಸಿ ಹೂಳು ತುಂಬಿದ್ದರಿಂದ ಪರ್ಯಾಯವಾಗಿ ಜಿಲ್ಲೆಯ ನವಲಿ ಗ್ರಾಮದ ಬಳಿ 35 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದ್ದು, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ಮಾಡುತ್ತಿದ್ದಾರೆ ಎಂದರು. ಈಗಾಗಲೆ ಜಲಾಶಯದ ಬಗ್ಗೆ ಯೋಜನೆ ಸಿದ್ದಪಡಿಸಿದ್ದು, ಪ್ರಗತಿಯಲ್ಲಿದೆ ಎಂದರು.
ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆನ್ನುವುದಕ್ಕೆ ಕೇಂದ್ರ ಸರ್ಕಾರ ಇದರಲ್ಲಿ ವಿಫಲವಾಗಿದೆ. ಆದರೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದರು. ಬರಗಾಲ ಪರಿಹಾರ ಮತ್ತು ಬೆಳೆಗಳ ನಷ್ಟದ ಕುರಿತು ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗಿದೆ ಎಂದರು.
ಈ ವೇಳೆ ವೆಂಕಟೇಶ ಕುಲಕರ್ಣಿ ಅವರ ನಿವಾಸದಲ್ಲಿ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಶ್ರೀಲತಾ ವೆಂಕಟೇಶ ಕುಲಕರ್ಣಿ, ಚಂದನಾ, ನ್ಯಾಯವಾದಿ ಸುಭಾಸ್, ಟಿಎಂಪಿಸಿಎಂಸ್ ಅದ್ಯಕ್ಷ ಚೆನ್ನಪ್ಪ ಮಳಗಿ, ಶ್ರೀನಿವಾಸ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ,ನಿಖಿಲ್, ವಿಷ್ಣು ಪ್ರಸಾದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.