
ನಂಜನಗೂಡು (ಜೂ.17): ಜಮೀನೊಂದರ ಕಾಲುವೆಯ ಕಾಮಗಾರಿ ವೇಳೆ ಜೆಸಿಬಿಯ ಕಬ್ಬಿಣದ ಬಕೆಟ್ ಹಲ್ಲುಗಳಿಗೆ ಆಮೆಯೊಂದು ಸಿಲುಕಿ ಅದರ ಮೇಲ್ಭಾಗದ ಕವಚ ಸಂಪೂರ್ಣವಾಗಿ ಒಡೆದು ಚೂರುಚೂರಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆಮೆಯನ್ನು ಯುವಕರು ಎಂ.ಸೀಲ್ ಹಾಕಿ, ಚಿಕಿತ್ಸೆ ನೀಡಿ ಮತ್ತೆ ಪ್ರಕೃತಿಯ ಮಡಿಲಿಗೆ ಸೇರಿಸಿದ್ದಾರೆ.ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲಿಪುರ ಗ್ರಾಮದ ಬಳಿ ಕಳೆದ ವಾರ ಆಮೆಯ ಕವಚ ಚೂರಾಗಿತ್ತು. ಇದನ್ನು ಗಮನಿಸಿದ ಯುವ ಬ್ರಿಗೇಡ್ನ ರವಿಶಾಸ್ತ್ರಿ, ಸ್ನೇಹಿತ ಚಂದ್ರಶೇಖರ್ ನೆರವು ಕೋರಿದರು.
ಆಮೆಯನ್ನು ನಂಜನಗೂಡಿಗೆ ತಂದು, ಪಶುವೈದ್ಯರನ್ನು ಸಂಪರ್ಕಿಸಿದಾಗ ಅವರು ಕೈಚೆಲ್ಲಿದರು. ಪ್ರಯತ್ನ ಮಾಡೋಣ ಎಂದು ಚಂದ್ರಶೇಖರ್, ಒಡೆದಿದ್ದ ಕವಚದ ಎರಡೂ ಬದಿಗಳಲ್ಲಿ ಸಣ್ಣ ಡ್ರಿಲ್ಲಿಂಗ್ ಯಂತ್ರದ ಮೂಲಕ ರಂಧ್ರ ಮಾಡಿ, ತುಕ್ಕು ನಿರೋಧಕ ತಂತಿ ಜೋಡಿಸಿದರು. ಮೇಲ್ಭಾಗದಲ್ಲಿ ಚೂರು ಚೂರಾಗಿದ್ದ ಭಾಗಗಳಿಗೂ ಸೂಕ್ಷ್ಮ ರಂಧ್ರಗಳನ್ನು ಮಾಡಿ ತಂತಿಯಿಂದ ಮೆಶ್ ಹೆಣೆದು ಎಂ.ಸೀಲ್ ಬಳಸಿ ಕವಚ ಮೇಲ್ಭಾಗವನ್ನು ಮುಚ್ಚಿದರು.
ಚಿಕಿತ್ಸೆ ಬಳಿಕ 5 ದಿನ ಆಮೆಯನ್ನು ನೀರಿನ ತೊಟ್ಟಿಯಲ್ಲಿ ಇರಿಸಿ, ಚಲನವಲನದ ಮೇಲೆ ನಿಗಾ ವಹಿಸಿದರು. ಆಮೆ ಚೇತರಿಸಿಕೊಂಡು ಈಜಲು, ಆಹಾರ ಸೇವಿಸಲು ಆರಂಭಿಸಿತು. ಸಂಪೂರ್ಣ ಚೇತರಿಕೆಯ ಲಕ್ಷಣಗಳು ಕಂಡು ಬಂದ ಬಳಿಕ ಆಮೆಯನ್ನು ಕಪಿಲಾ ನದಿಯಲ್ಲಿ ಬಿಟ್ಟರು.