ಬೆಂಗಳೂರು ಬದಲಾವಣೆಯ ಹರಿಕಾರರಿಗೆ 11ನೇ ನಮ್ಮ ಬೆಂಗಳೂರು ಪ್ರಶಸ್ತಿ ಗೌರವ

By Suvarna NewsFirst Published Sep 16, 2020, 4:39 PM IST
Highlights

ಬೆಂಗಳೂರಿಗೆ ತಮ್ಮ ಅನನ್ಯ ಕೊಡುಗೆ ನೀಡಿದ , ತೆರೆ ಮರೆಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ನಮ್ಮ ಬೆಂಗಳೂರು ಫೌಂಡೇಶನ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಬೆಂಗಳೂರು (ಸೆ.16): ನಮ್ಮ ಬೆಂಗಳೂರು ಪ್ರಶಸ್ತಿಗಳ ಟ್ರಸ್ಟ್ ತನ್ನ ಪ್ರಮುಖ ಕಾರ್ಯಕ್ರಮವಾದ 11ನೇ ನಮ್ಮ ಬೆಂಗಳೂರು ಪ್ರಶಸ್ತಿಗಳನ್ನು (ಎನ್‍ಬಿಎ) ಬೆಂಗಳೂರಿನಲ್ಲಿ ಸೆ. 19ರಂದು ಶನಿವಾರ ಪ್ರದಾನ ಮಾಡಲಿದೆ. ತೆರೆಯ ಮರೆಯಲ್ಲಿದ್ದು ಬೆಂಗಳೂರಿಗಾಗಿ ಅನನ್ಯ ಕೊಡುಗೆಗಳನ್ನು ನೀಡುತ್ತಿರುವವರಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಈ ಬಾರಿ ಆರು ಮಂದಿ ಅತಿವಿಶಿಷ್ಟ ಬೆಂಗಳೂರಿಗರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹಲವು ಪ್ರಥಮಗಳನ್ನು ತನ್ನ ಮುಡಿಗೆ ಏರಿಸಿಕೊಳ್ಳುತ್ತಿರುವ ನಮ್ಮ ಬೆಂಗಳೂರು ಪ್ರಶಸ್ತಿಗಳ ರಾತ್ರಿ ಈ ಬಾರಿ ಸಂಪೂರ್ಣವಾಗಿ ವರ್ಚುವಲ್ ಆಗಿ ನಡೆಯಲಿದೆ.

2009ರಲ್ಲಿ ನಮ್ಮ ಪ್ರಶಸ್ತಿಗಳು ಆರಂಭವಾದಾಗಿನಿಂದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಪಾರದರ್ಶಕವಾಗಿ ನಡೆಯುತ್ತಿದೆ. ಬೆಂಗಳೂರಿನ ಕಲ್ಯಾಣಕ್ಕಾಗಿ ಕೊಡುಗೆ ನೀಡುತ್ತಿರುವವರನ್ನು ಬೆಂಗಳೂರಿಗರೇ ನಾಮನಿರ್ದೇಶನ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಬೆಂಗಳೂರು ಪ್ರಶಸ್ತಿಗಾಗಿ ಇದುವರೆಗೆ 2.9ಲಕ್ಷಕ್ಕೂ ಹೆಚ್ಚು ನಾಮನಿರ್ದೇಶನಗಳು ಬಂದಿದ್ದು ಅಂತಿಮ ಸುತ್ತಿಗೆ ಬಂದ 300 ಮಂದಿಯ ಪೈಕಿ 93 ಮಂದಿ ಹೀರೋಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಪ್ರಶಸ್ತಿ ಪ್ರಕ್ರಿಯೆಗೆ 2002ರ ಜನವರಿ 7ರಂದು ಚಾಲನೆ ನೀಡಲಾಗಿತ್ತು. ನಾಮನಿರ್ದೇಶನ ಪ್ರಕ್ರಿಯೆ ಒಂದು ತಿಂಗಳವರೆಗೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಸಾವಿರಾರು ನಾಮನಿರ್ದೇಶನಗಳು ಈ ಮೂಲಕ ಸ್ವೀಕಾರವಾಗಿದ್ದು ಐದು ವಿವಿಧ ವಿಭಾಗಗಳಲ್ಲಿ 26 ಮಂದಿಯನ್ನು ಅಂತಿಮಗೊಳಿಸಲಾಗಿದೆ.

ಲಾಕ್‌ಡೌನ್‌: ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ 24 ಕೋಟಿ ಮೌಲ್ಯದ ದಿನಸಿ ವಿತರಣೆ ...

ಬೆಂಗಳೂರಿಗೆ ಅತಿ ವಿಶಿಷ್ಟ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಗಣ್ಯರಾದ 16 ಮಂದಿ ತೀರ್ಪುಗಾರರ ಸಮಿತಿಯನ್ನು ನೇಮಿಸಲಾಗಿತ್ತು. 

ಸಮಿತಿಯು ಇದುವರೆಗೆ ಸುಮಾರು 30 ಗಂಟೆಗಳ ಎಂಟು ಸಭೆಗಳನ್ನು ನಡೆಸಿ ಗಹನವಾದ ಚರ್ಚೆ ನಡೆಸಿ ಅಂತಿಮ ವಿಜೇತರನ್ನು ಗುರುತಿಸಿದೆ. ಸಂಪೂರ್ಣ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರಗಳನ್ನೂ ರಹಸ್ಯವಾಗಿ ಇರಿಸಲಾಗಿದ್ದು, ಕಾರ್ಯಕ್ರಮದ ದಿನವಷ್ಟೇ ಘೋಷಿಸಲಾಗುವುದು.

ಈ ವರ್ಷ ಐದು ವಿಭಾಗಗಳಲ್ಲದೇ, ಜೀವಮಾನದ ಪ್ರಶಸ್ತಿಯನ್ನೂ ಒಬ್ಬ ಬೆಂಗಳೂರಿಗರಿಗೆ ನೀಡಲಾಗುತ್ತಿದೆ. ಬೆಂಗಳೂರಿಗಾಗಿ ತಮ್ಮ ಜೀವಮಾನವಿಡೀ ಸೇವೆ ಸಲ್ಲಿಸಿದವರಿಗೆ ಈ ವಿಶೇಷ ಪ್ರಶಸ್ತಿಯನ್ನು ಘೋಷಿಸಲಾಗುತ್ತಿದೆ.

ಹಲವು ವರ್ಷಗಳಿಂದ ನಮ್ಮ ಬೆಂಗಳೂರು ಪ್ರಶಸ್ತಿಗಳನ್ನು ನೀಡುತ್ತ ಬಂದಿರುವುದರಿಂದ ಈ ವರ್ಷ ಕರ್ತವ್ಯದ ಕರೆಗಷ್ಟೇ ಸೇವೆಯನ್ನು ಸೀಮಿತಗೊಳಿಸದೇ ಬೆಂಗಳೂರನ್ನು ವಾಸಿಸಲು ಯೋಗ್ಯ ನಗರವನ್ನಾಗಿ ಉಳಿಸಿಕೊಳ್ಳಲು ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುವುದರತ್ತ ಗಮನ ಹರಿಸಲಾಗಿದೆ. ಭಾರತದ ಚಲನಚಿತ್ರೋದ್ಯಮ ಮತ್ತು ಹಿರಿಯ ರಂಗಕಲಾವಿದರಾದ ಆರುಂಧತಿ ನಾಗ್, ಮತ್ತು ನಿರ್ದೇಶಕ, ನಟ ಹಾಗೂ ಎನ್‍ಬಿಎ ಬ್ರಾಂಡ್ ರಾಯಭಾರಿ ರಮೇಶ್ ಅರವಿಂದ್ ಅವರೊಂದಿಗೆ ಇದುವರೆಗೆ ಪ್ರಶಸ್ತಿ ಪಡೆದವರೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರಶಸ್ತಿಗಳ ಕುರಿತು ಮಾತನಾಡಿದ ಬ್ರಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಅವರು “ಬೆಂಗಳೂರನ್ನು ಬಾಧಿಸುತ್ತಿರುವ ವಿಷಯಗಳ ಪರಿಹಾರಕ್ಕಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಆದರೆ ಅಂಥ ಕೆಲಸಗಳು ಸಮಾಜದ ಮೇಲೆ ದೊಡ್ಡ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಉಳಿದವರ ಬದುಕು ಹಸನಾಗಲಿ ಎಂಬುದಕ್ಕಾಗಿ ಕೆಲವರು ತಮ್ಮೆಲ್ಲ ಇತಿಮಿತಿಗಳನ್ನೂ ಮೀರಿ ಕೆಲಸ ಮಾಡುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇಂಥ ಪ್ರಶಸ್ತಿಗಳೊಂದಿಗೆ ಗುರುತಿಸಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ. ತೆರೆಮರೆಯಲ್ಲಿರುವ ಇಂಥ ಹೀರೋಗಳನ್ನು ಗುರುತಿಸುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಸೆಪ್ಟೆಂಬರ್ 19, ಸಂಜೆ 6 ಗಂಟೆಯ ಸಮಯವನ್ನು ಎಲ್ಲರೂ ಇದಕ್ಕಾಗಿ ಮೀಸಲಿರಿಸಬೇಕು” ಎಂದು ಕೋರಿದರು.

ನಮ್ಮ ಬೆಂಗಳೂರು ಜೊತೆ ಕೈಜೋಡಿಸಿದ ಪೊಲೀಸ್; COVID-19 ವಿರುದ್ಧದ ಹೋರಾಟಕ್ಕೆ ಸಿಕ್ತು ಮತ್ತಷ್ಟು ವೇಗ! ..

ನಮ್ಮ ಬೆಂಗಳೂರು ಪ್ರಶಸ್ತಿಗಳ ಟ್ರಸ್ಟಿನ ಅಧ್ಯಕ್ಷರು ಮತ್ತು ಟ್ರಸ್ಟಿಯಾಗಿರುವ ಶ್ರೀ ಪ್ರದೀಪ್ ಖರ್ ಮಾತನಾಡಿ “ಆಯಾ ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆ ನೀಡಿ ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲ 26 ಮಂದಿಯೂ ವಿಜಯಿಗಳೇ. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತೀರ್ಪುಗಾರರ ಸಮಿತಿಗೂ ಬಹಳ ಕಷ್ಟದ ಕೆಲಸವಾಗಿತ್ತು. ಇದಕ್ಕಾಗಿ ಹಲವು ಸುತ್ತಿನ ಸಭೆ ನಡೆಸಬೇಕಾಗಿತ್ತು. ಇಂಥ ಅಪೂರ್ವ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ ಬೆಂಗಳೂರಿನ ಪ್ರಜೆಗಳಿಗೆ ನಾವು ಆಭಾರಿಯಾಗಿದ್ದೇವೆ” ಎಂದರು.

ನಮ್ಮ ಬೆಂಗಳೂರು ಪ್ರಶಸ್ತಿಗಳ ಕುರಿತು ಬೆಂಗಳೂರನ್ನು ಉತ್ತಮ ನಗರವಾಗಿಸಿ, ಬದುಕಲು ಯೋಗ್ಯವಾಗಿಸುವ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡುತ್ತಿರುವ ಸಾಮಾನ್ಯ ಜನರನ್ನು ಗುರುತಿಸುವ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಯತ್ನವೇ ನಮ್ಮ ಬೆಂಗಳೂರು ಪ್ರಶಸ್ತಿ. ನಗರದ ನಿಜವಾದ ಹೀರೋಗಳಿಗೆ ಧನ್ಯವಾದ ಹೇಳುವ ನಿಜವಾದ ಮಾರ್ಗ ಈ ಪ್ರಶಸ್ತಿಗಳಾಗಿವೆ. ಹೀರೋಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಮೂಲಕ ಅಂಥ ಪ್ರಯತ್ನಗಳನ್ನು ಮಾಡಲು ಇತರರಿಗೂ ಪ್ರೇರಣೆ ನೀಡುವ ಉದ್ದೇಶವನ್ನು ಎನ್‍ಬಿಎ ಹೊಂದಿದೆ.

click me!