ನೆನಗುದಿಗೆ ಬಿದ್ದ ಗಾರ್ಮೆಂಟ್ಸ್‌ ಘಟಕ ನಿರ್ಮಾಣ: ಚಲುವರಾಯಸ್ವಾಮಿ

By Govindaraj SFirst Published Jan 1, 2023, 9:17 PM IST
Highlights

ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಲು ನಾನು ಶಾಸಕನಾಗಿದ್ದ ಅವಧಿಯಲ್ಲಿ ಭೂಮಿಪೂಜೆ ನೆರವೇರಿಸಿದ್ದ ಗಾರ್ಮೆಂಟ್ಸ್‌ ಘಟಕದ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ನಿಂತಿದ್ದರೂ ಅದಕ್ಕೆ ಚಾಲನೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಾಗಮಂಗಲ (ಜ.01): ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಲು ನಾನು ಶಾಸಕನಾಗಿದ್ದ ಅವಧಿಯಲ್ಲಿ ಭೂಮಿಪೂಜೆ ನೆರವೇರಿಸಿದ್ದ ಗಾರ್ಮೆಂಟ್ಸ್‌ ಘಟಕದ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ನಿಂತಿದ್ದರೂ ಅದಕ್ಕೆ ಚಾಲನೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಕರಡಹಳ್ಳಿಯಲ್ಲಿ ಆಯೋಜಿಸಿದ್ದ ಗ್ರಾಪಂ ವ್ಯಾಪ್ತಿಯ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಮತ್ತು 2023ರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಯುವಸಮುದಾಯ ಉದ್ಯೋಗ ಹರಸಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ತಾಲೂಕಿನ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಒಂದು ಕೈಗಾರಿಕಾ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು ಎಂದರು.

2018ರ ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರ ನಿರ್ಲಕ್ಷ್ಯದಿಂದಾಗಿ ಆ ಜಾಗದಲ್ಲಿ ಗಿಡಗೆಂಟೆಗಳು ಬೆಳೆದುಕೊಳ್ಳುವಂತಾಗಿದೆ ಎಂದು ಪರೋಕ್ಷವಾಗಿ ಶಾಸಕ ಸುರೇಶ್‌ಗೌಡರ ಆಡಳಿತ ವೈಫಲ್ಯದ ವಿರುದ್ಧ ಕಿಡಿಕಾರಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಜೊತೆಗೆ ಯುವಕರು ಮತ್ತು ಮಹಿಳೆಯರು ಸೇರಿ ಕನಿಷ್ಠ 10ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲು ಮುಂದಿನ ದಿನಗಳಲ್ಲಿ ತಾಲೂಕಿನ ಮೂರು ಕಡೆಗಳಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಿ, ಎಲ್ಲ ಹಳ್ಳಿಗಳ ಪ್ರತಿ ಮನೆಗಳಿಗೂ ಶುದ್ಧ ಕಾವೇರಿ ನೀರು ಪೂರೈಕೆ ಮಾಡಿಸಬೇಕೆಂಬ ಕನಸು ಕಟ್ಟಿಕೊಂಡಿದ್ದೇನೆ ಎಂದರು.

ಗುಜರಾತ್‌ ರಾಜಕಾರಣ ಮಂಡ್ಯದಲ್ಲಿ ನಡೆಯೋಲ್ಲ: ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ

ಜನರು ಯೋಚಿಸಿ ಪಕ್ಷ ಯಾವುದೇ ಇರಲಿ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ನಿರ್ಧಾರದೊಂದಿಗೆ 5 ವರ್ಷ ಕಾಲ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಜನರು ನೆಮ್ಮದಿಯ ಜೀವನ ನಡೆಸಬಹುದು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರು ನನಗೆ ಆಶೀರ್ವದಿಸಬೇಕು ಎಂದು ಮನವಿಮಾಡಿದರು. ಗ್ರಾಮಕ್ಕೆ ಆಗಮಿಸಿದ ಚಲುವರಾಯಸ್ವಾಮಿ ಅವರಿಗೆ ಹೆಣ್ಣುಮಕ್ಕಳು ಬೆಲ್ಲದಾರತಿ ಬೆಳಗಿದರು. ಕಾರ್ಯಕರ್ತರು ಕ್ರೇನ್‌ ಹಾಗೂ ಜೆಸಿಬಿ ಯಂತ್ರಗಳ ಮೂಲಕ ಬೃಹತ್‌ ಗಾತ್ರದ ಸೇಬಿನ ಹಾರ, ಹೂಮಳೆ ಸುರಿಸಿ, ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ಈ ವೇಳೆ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ, ಪುತ್ರ ಸಚ್ಚಿನ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌, ಮಾಜಿ ಅಧ್ಯಕ್ಷ ಎಂ.ಪ್ರಸನ್ನ, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಮುಖಂಡರಾದ ಕೆ.ಎಸ್‌.ಆನಂದ್‌, ಕೆ.ಎಸ್‌.ರವೀಂದ್ರ, ಕೆ.ಎಂ.ಭದ್ರೇಗೌಡ, ಸಿಂಗಾರಿಗೌಡ, ನಾಗೇಶ್‌, ಕೆ.ಎಂ.ರಾಮು, ರಾಮಚಂದ್ರು, ಡಿ.ಟಿ.ಕೃಷ್ಣೇಗೌಡ, ಡಿ.ಕೆ.ರಾಜೇಗೌಡ, ಭೀಮನಹಳ್ಳಿ ಮರಿಸ್ವಾಮಿ, ಎನ್‌.ಕೆ.ವಸಂತಮಣಿ, ಗೀತಾದಾಸೇಗೌಡ, ಚಿಕ್ಕಮ್ಮ, ರಮೇಶ್‌ ಸೇರಿದಂತೆ ಗ್ರಾಮದ ಎಲ್ಲ ಯಜಮಾನರು, ಯುವಕರು, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಇದ್ದರು.

ಒಕ್ಕಲಿಗರಿಗೆ ಮೀಸಲು ಹೆಚ್ಚಳ ಅತ್ಯವಶ್ಯ: ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಸಮುದಾಯಕ್ಕೆ ಮೀಸಲು ಹೆಚ್ಚಳ ಮಾಡುವುದು ಅತ್ಯವಶ್ಯಕ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ನಗರದ ಗಾಂಧಿ ಭವನದಲ್ಲಿ ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘ, ಒಕ್ಕಲಿಗ ಧರ್ಮ ಮಹಾಸಭಾದಿಂದ ನಡೆದ ಒಕ್ಕಲಿಗರ ಜನಸಂಖ್ಯಾ ಆಧಾರದ ಮೇಲೆ ಶೇ.18ರಷ್ಟುಮೀಸಲಾತಿಗಾಗಿ ಸರ್ಕಾರವನ್ನು ಆಗ್ರಹಿಸಿ ಪತ್ರ ಚಳವಳಿ ಹಾಗೂ ಪ್ರಚಾರಾಂದೋಲನ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೊಲೀಸ್‌ ದಳಗಳ ನಡುವೆ ಸಮನ್ವಯ ಇರಲಿ: ಅಮಿತ್‌ ಶಾ

ಶೇ.10 ಮೀಸಲು ಹೆಚ್ಚಳಕ್ಕೆ ಆಗ್ರಹ: ಸಮುದಾಯದ ಜನರಿಗೆ ಶೇ.10 ರಷ್ಟುಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ. ಒಕ್ಕಲಿಗ ಸಮುದಾಯದಲ್ಲಿ ರೈತರು, ಯುವಕರು ಸೇರಿದಂತೆ ಎಲ್ಲರಿಗೂ ಅನ್ಯಾಯವಾಗುತ್ತಿದೆ. ಏಕೆಂದರೆ, ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಚುಂಚಶ್ರೀಗಳ ಆಶೀರ್ವಾದ ಹಾಗೂ ಅವರ ಸಲಹೆ ಮೇರೆಗೆ ಹೋರಾಟ ಮಾಡೋಣ ಎಂದರು. ಮೀಸಲಾತಿ ನಮ್ಮ ಸಮುದಾಯಕ್ಕೆ ಸಿಗಬೇಕು. ಬೇರೆ ಎಲ್ಲ ಸಮಾಜಕ್ಕಿಂತ ಹೆಚ್ಚಿನ ಅನ್ಯಾಯವಾಗಿರುವುದು ಒಕ್ಕಲಿಗರ ಸಮುದಾಯಕ್ಕೆ, ಒಕ್ಕಲಿಗರು ಯಾವುದೇ ಸಮಾಜವನ್ನು ದೂಷಿಸುವುದಿಲ್ಲ, ಯಾರನ್ನೂ ತೇಜೋವಧೆ ಮಾಡೊಲ್ಲ, ರೈತರ ಪರವಾಗಿರುವ ಸಮುದಾಯ ಒಕ್ಕಲಿಗರ ಸಮುದಾಯವಾಗಿದೆ. ಆದರೆ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿ ಎಂದು ಕೂಗಿಡುತ್ತಿದ್ದೇವೆ. ಬೇರೆ ಸಮಾಜಕ್ಕೆ ಹೋಲಿಸಿದರೆ ಒಕ್ಕಲಿಗರ ಸಮಾಜವು ಹೋರಾಟದಲ್ಲಿ ಹಿಂದುಳಿದಿದೆ ಎಂದು ವಿಷಾದಿಸಿದರು.

click me!