Chamarajanagar: ಹೊಸ ವರ್ಷಾಚರಣೆಗೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

Published : Jan 01, 2023, 08:13 PM IST
Chamarajanagar: ಹೊಸ ವರ್ಷಾಚರಣೆಗೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

ಸಾರಾಂಶ

ಹೊಸ ವರುಷ ಆಚರಣೆ ಸಂಬಂಧ ರಾಜ್ಯ ಹಾಗೂ ನೆರೆ ರಾಜ್ಯಗಳ ಮಲೆಮಹದೇಶ್ವರ ಸ್ವಾಮಿ ಭಕ್ತಗಣ ತಾಲೂಕಿನ ಮಲೆ ಮಹದೇಶ್ವರ ಬೆಟ್ಟಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದಾರೆ.

ಹನೂರು (ಜ.01): ಹೊಸ ವರುಷ ಆಚರಣೆ ಸಂಬಂಧ ರಾಜ್ಯ ಹಾಗೂ ನೆರೆ ರಾಜ್ಯಗಳ ಮಲೆಮಹದೇಶ್ವರ ಸ್ವಾಮಿ ಭಕ್ತಗಣ ತಾಲೂಕಿನ ಮಲೆ ಮಹದೇಶ್ವರ ಬೆಟ್ಟಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದಾರೆ. 2023 ರ ಆಚರಣೆಯನ್ನು ಹಾಗೂ ಸುದಿನವನ್ನು ಮಲೆ ಮಹದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ದಿನದೂಡುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯಲು ಮುಂದಾಗಿದ್ದಾರೆ. ಪಾದಯಾತ್ರೆ ಭಕ್ತಾದಿಗಳ ಭಕ್ತಿಯ ಪರಾಕಾಷ್ಠೆ ಜಾತ್ರೆ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ ದಿನಗಳಲ್ಲದೇ ನೂತನ ವರ್ಷದಲ್ಲೂ ಕೂಡ ತಮ್ಮ ಆರಾಧ್ಯ ದೈವ ಮಲೆ ಮಹದೇಶ್ವರ ಸ್ವಾಮಿಯನ್ನು

ಕಣ್ತುಂಬಿಕೊಳ್ಳಲು ಹಾಗೂ ಸ್ಮರಿಸಿ, ಆರಾಧಿಸಲು ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲದೇ ನೆರೆಯ ತಮಿಳುನಾಡು ರಾಜ್ಯದಿಂದಲೂ ಕೂಡ ಮಲೆ ಮಾದಪ್ಪನ ಭಕ್ತರ ದಂಡು ತಂಡೋಪ ತಂಡವಾಗಿ ಸಾಗರೋಪಾದಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೇ ಪಾದಯಾತ್ರೆ ಹಮ್ಮಿಕೊಂಡು ಮಾದಪ್ಪನ ಭಕ್ತಿ ಭಾವ ಸ್ಮರಣೆಯೊಂದಿಗೆ ಉಘೇ ಮಾದಪ್ಪ ಎಂಬ ಜೈಕಾರಗಳೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದರು.

ಜಿಲ್ಲೆಯಲ್ಲಿ ಸಂಚಲನ ತಂದ ಸೋಮಣ್ಣ; ದೂರವಾಗುತ್ತಿರುವ ಧ್ರುವನಾರಾಯಣ!

ಮಂಡ್ಯ ಜಿಲ್ಲೆಯ ಭಕ್ತಾದಿಗಳದ್ದೇ ಸಿಂಹಪಾಲು: ನೂತನ 2023ರ ಹೊಸ ವರ್ಷಣೆ ಆಚರಣೆ ಸಂಬಂಧ ರಾಜ್ಯದ ವಿವಿಧಡೆ ಆಗಮಿಸುವ ಭಕ್ತಾದಿಗಳ ಪೈಕಿ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಇನ್ನಿತರೆ ಭಾಗಗಳ ತಾಲೂಕಿನ ಮಹಿಳೆಯರು, ಮಕ್ಕಳು, ವಯೋವೃದ್ಧ ಹಾಗೂ ವಿವಿಧ ವಯೋಮಾನದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಮಲೆ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದು ವಿಶೇಷವಾಗಿತ್ತು. ಅದರಲ್ಲೂ ಶ್ರೀಮಲೆ ಮಹದೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿ ಮತ್ತು ಆಸರೆ ಫೌಂಡೇಶನ್‌ ಸಹಯೋಗದೊಂದಿಗೆ ಗುರುದೇವರಹಳ್ಳಿ ದೇವೇಗೌಡನಹಳ್ಳಿ ಹಾಗೂ ಸುತ್ತೇಳು ಗ್ರಾಮಸ್ಥರು ಸಿ.ಎ.ಕೆರೆ ಹೋಬಳಿ ಮದ್ದೂರು ತಾಲೂಕಿನ ಜನತೆ 9ನೇ ವರ್ಷದ ಪಾದಯಾತ್ರೆಯಲ್ಲಿ ಸಾವಿರಾರು ಜನತೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ಇವರು ಡಿ.28ರ ಬುಧವಾರ ಬೆಳಗ್ಗೆ 5 ಗಂಟೆಗೆ ಚಿಕ್ಕ ಅರಸಿನಕೆರೆ ಶ್ರೀಕಾಲಭೈರವೇಶ್ವರ ದೇವಸ್ಥಾನದಿಂದ ಹೊರಟು ಮಳವಳ್ಳಿ ಮಾರ್ಗವಾಗಿ ಕೊಳ್ಳೇಗಾಲ ತಾಲೂಕಿನ ಸತ್ಯೆಗಾಲ, ಉಗನಿಯ, ನರಿಪುರ, ಗುಂಡೇಗಾಲ ಮೂಲಕ ಪಾಳ್ಯ ಗ್ರಾಮದಲ್ಲಿ ಬೀಡು ಬಿಟ್ಟು 29 ರ ತಡ ರಾತ್ರಿ 2 ಗಂಟೆಗೆ ಪಾಳ್ಯದಿಂದ ಹೊರಟು ಹನೂರು ತಲುಪಿ ಇಲ್ಲಿನ ಆರ್‌. ಎಂ.ಸಿ. ಆವರಣದಲ್ಲಿ ಒಂದು ದಿನ ವಿಶ್ರಾಂತಿ ಪಡೆದು ಕೌದಳ್ಳಿ ಮಾರ್ಗವಾಗಿ ಮಲೆ ಮಹದೇಶ್ವರ ಪುಣ್ಯಕ್ಷೇತ್ರವನ್ನು ತಲುಪಿದರು.

Chamarajanagar: ಕ್ರಷರ್‌ ತ್ಯಾಜ್ಯ ಘಟಕವಾದ ಹೆದ್ದಾರಿ: ಪರಿಸರ ಇಲಾಖೆ ಮೌನ

ವಾಹನಗಳ ಮೂಲಕ ಕೂಡ ಭಕ್ತಾದಿಗಳ ದಂಡು: ಪಾದಯಾತ್ರೆ ಅಲ್ಲದೆ ವಿವಿಧ ವಾಹನಗಳ ಮೂಲಕ ಹೊಸ ವರ್ಷ ಆಚರಣೆ ಸಂಬಂಧ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಮಲೆ ಮಹದೇಶ್ವರ ಬೆಟ್ಟತುಂಬಾ ಜನ ಜಂಗುಳಿ ಕಂಡುಬಂದಿತು.

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್