KRSಗೆ ಟಿಪ್ಪುವಿನಿಂದ ಅಡಿಗಲ್ಲೆಂದು ಸಚಿವ ಮಹದೇವಪ್ಪ ವಿವಾದ, ಮೈಸೂರು ಸಂಸದ ಯದುವೀರ್ ತೀವ್ರ ಆಕ್ರೋಶ

Published : Aug 03, 2025, 06:26 PM IST
 Yaduveer Wadiyar and HC mahadevappa

ಸಾರಾಂಶ

ಕೆಆರ್‌ಎಸ್ ಅಣೆಕಟ್ಟೆಯ ಅಡಿಗಲ್ಲು ಟಿಪ್ಪು ಸುಲ್ತಾನ್ ಹಾಕಿದ್ದಾರೆ ಎಂಬ ಸಚಿವರ ಹೇಳಿಕೆಯನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ. ಇತಿಹಾಸವನ್ನು ತಿರುಚುವ ಪ್ರಯತ್ನ ಇದಾಗಿದ್ದು, ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಅವರು ಹೇಳಿದ್ದಾರೆ.

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ನೀಡಿದ ಹೇಳಿಕೆ ಮೈಸೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇದು ಹಾಸ್ಯಾಸ್ಪದ ಹೇಳಿಕೆ. ಇತಿಹಾಸವನ್ನು ತಿದ್ದುಪಡಿ ಮಾಡುವ ಪ್ರಯತ್ನದ ಭಾಗವಿದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದರೆಂಬ ಯಾವುದೇ ಸಾಕ್ಷಿ ಇಲ್ಲ. ಕೆಆರ್‌ಎಸ್ ಕಟ್ಟಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶಿಕ್ಷಕರು, ಇತಿಹಾಸ ತಜ್ಞರು ಈ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಾರೆ. ಈ ರೀತಿ ಯಾವುದೇ ಕಥೆಯನ್ನು ನಾನು ಈವರೆಗೆ ಕೇಳಿಲ್ಲ ಎಂದು ಯದುವೀರ್ ಹೇಳಿದರು.

ಸಾಕ್ಷ್ಯಾಧಾರಗಳಿಲ್ಲದ ಹೇಳಿಕೆ ರಾಜಕೀಯ ಲಾಭಕ್ಕೆ

ಪತ್ರಗಳಲ್ಲಿ ಈ ಬಗ್ಗೆ ಸ್ಪಷ್ಟ ದಾಖಲೆಗಳಿವೆ. ಟಿಪ್ಪು ಕಾಲದಲ್ಲಿ ನಾಲ್ಕು ದೊಡ್ಡ ಯುದ್ಧಗಳು ನಡೆದವು. ಅಲ್ಲದೆ, ದೇವಾಲಯಗಳನ್ನು ಹಾನಿಗೊಳಿಸಲಾಗಿದೆ. ಆ ಕಾಲದಲ್ಲಿ ಶ್ರೀರಂಗನಾಥ ಮತ್ತು ನಂಜನಗೂಡಿನ ದೇವಾಲಯಗಳಲ್ಲಿ ಮಾತ್ರ ಪೂಜೆ ನಡೆಯುತ್ತಿತ್ತು. ಇದು ಸ್ಪಷ್ಟವಾದ ಇತಿಹಾಸ. ಈ ರೀತಿಯ ಹೇಳಿಕೆಗಳು ಮತದಾರರ ಓಲೈಸುವ ಅನುಕೂಲಕ್ಕಾಗಿ ನೀಡಲಾಗುತ್ತಿದೆ. ಇತಿಹಾಸವನ್ನು ತಿರುವುಗೊಳಿಸಿ ಮತ ಗಳಿಕೆಗೆ ಉಪಯೋಗಿಸುವುದು ಸರಿಯಲ್ಲ ಎಂದು ಒಡೆಯರ್ ಅವರು ಹೇಳಿದ್ದಾರೆ.

ಒಂದು ಒಳ್ಳೆ ಕೆಲಸದಿಂದ ನೂರು ತಪ್ಪುಗಳನ್ನ ಮುಚ್ಚಲು ಸಾಧ್ಯವೇ ಇಲ್ಲ

ಟಿಪ್ಪು ಕಾಲದಲ್ಲಿ ರೇಷ್ಮೆ ಕೈಗಾರಿಕೆಗೆ ಪ್ರಯೋಜನಕಾರಿಯಾದ ಕೆಲಸಗಳನ್ನು ಮಾಡಿರಬಹುದು. ಆದರೆ, ಒಂದು ಒಳ್ಳೆಯ ಕೆಲಸದಿಂದ ನೂರು ತಪ್ಪುಗಳನ್ನು ಮುಚ್ಚಲಾಗದು. ಗರ್ಭಿಣಿಯರು, ಅಯ್ಯಂಗಾರ್ ಸಮುದಾಯದವರು ಸೇರಿದಂತೆ ಅನೇಕ ನಿರಪರಾಧಿಗಳು ಟಿಪ್ಪು ಕಾಲದಲ್ಲಿ ಕೊಲೆಯಾದರು. ಇವುಗಳನ್ನು ಮರೆತುಬಿಡುವಂತಿಲ್ಲ ಎಂದು ಯದುವೀರ್ ಹೇಳಿದ್ದಾರೆ.

ಇತಿಹಾಸ ಬದಲಾಯಿಸುವ ಪ್ರಯತ್ನ ಖಂಡನೀಯ

ರಾಜಕೀಯ ನಾಯಕರು ಇತಿಹಾಸವನ್ನು ಆಧಾರರಹಿತವಾಗಿ ಪ್ರಸ್ತಾಪಿಸುವುದು ತಪ್ಪು. ತಮ್ಮ ರಾಜಕೀಯಕ್ಕೆ ಇದನ್ನ ಬಳಸಬಾರದು. ಇತಿಹಾಸವನ್ನು ಪ್ರಸ್ತುತಪಡಿಸಲು ಸಾಕ್ಷ್ಯಾಧಾರಗಳು ಅಗತ್ಯ. ಸಾಕ್ಷಿಗಳನ್ನ ತೋರಿಸಿ ಇತಿಹಾಸವನ್ನ ಮಂಡಿಸಬೇಕು. ರಾಜಕಾರಣದ ಲಾಭಕ್ಕಾಗಿ ಇತಿಹಾಸವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಖಾರವಾಗಿ ಯದುವೀರ್ ಪ್ರತಿಕ್ರಿಯಿಸಿದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್