ಕಿಡಿಗೇಡಿಗಳ ಕೃತ್ಯದಿಂದ 11 ಸಾವಿರ ಪುಸ್ತಕಗಳು ಬೆಂಕಿಗಾಹುತಿ : ಪುನರ್ ನಿರ್ಮಾಣದ ಭರವಸೆ

By Suvarna NewsFirst Published Apr 10, 2021, 11:27 AM IST
Highlights

ತಮಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಬೇರೆಯವರ ಅಕ್ಷರ ಜ್ಞಾನಕ್ಕಾಗಿ ಸ್ವಂತ ಹಣದಲ್ಲಿ ಸೈಯದ್ ಇಸಾಕ್ ಎಂಬ ಮೈಸೂರಿನ ವ್ಯಕ್ತಿ ಸಂಗ್ರಹಿಸಿದ್ದ 11 ಸಾವಿರ ಕನ್ನಡ ಪುಸ್ತಕಗಳು ಬೆಂಕಿಗಾಹುತಿಯಾಗಿವೆ. ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ. 

  ಮೈಸೂರು (ಏ.10): ಕಿಡಿಗೇಡಿಗಳು  ಸುಮಾರು 11 ಸಾವಿರ ಪುಸ್ತಕಗಳಿಗೆ ಬೆಂಕಿ ಹಚ್ಚಿ ಸರ್ವನಾಶ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಶುಕ್ರವಾರ ಬೆಳಗ್ಗೆ ಮೈಸೂರಿನ ರಾಜೀವನಗರದ  ಸೈಯದ್ ಇಸಾಕ್ ಎಂಬುವವರಿಗೆ ಸೇರಿದ ಪುಸ್ತಕಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವು ವರ್ಷಗಳಿಂದ ಕೂಡಿಟ್ಟ 11000 ಪುಸ್ತಕಗಳು ಬೆಂಕಿಗಾಹುತಿಯಾಗಿವೆ. 

ಸೈಯದ್ ಅವರು ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ 2011ರಿಂದ ಸ್ವಂತ ಹಣದಲ್ಲಿ ಕನ್ನಡ ಸಾರ್ವಜನಿಕ ಗ್ರಂಥಾಲಯ ನಡೆಸಿಕೊಂಡು ಬರುತ್ತಿದ್ದರು. ಆದರೆ ಶುಕ್ರವಾರ ಮುಂಜಾನೆ 3.40ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದರೂ ಅಷ್ಟರಲ್ಲಾಗಲೇ ಸಂಪೂರ್ಣ ಪುಸ್ತಕಗಳು ನಾಶವಾಗಿದ್ದವು. 

ಚರಂಡಿ ಸ್ವಚ್ಚತೆ,ಮ್ಯಾನ್‌ಹೋಲ್ ಶುದ್ದಿಕಾರ್ಯ ಮಾಡುವ ಸೈಯದ್ ಇಸಾಕ್ ತಮಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಇತರರಿಗೆ ಅಕ್ಷರ ಜ್ಞಾನಾರ್ಜನೆಗೆ ಮುಂದಾಗಿದ್ದರು. ಭಗವದ್ಗೀತೆ, ಕುರಾನ್,ಬೈಬಲ್‌ ಸೇರಿದಂತೆ ವಿವಿಧ ರೀತಿಯ ಕನ್ನಡ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಿದ್ದರು. 

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲೈಬ್ರರಿ ಪುನರ್ ನಿರ್ಮಾಣದ ಭರವಸೆ :  ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ ಹಾಕಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಇದೀಗ ಘಟನಾ ಸ್ಥಳಕ್ಕೆ ಉಪ ಮೇಯರ್ ಅನ್ವರ್ ಬೇಗ್ ಭೇಟಿ ನೀಡಿ ಮರು ನಿರ್ಮಾಣದ ಭರವಸೆ ನೀಡಿದ್ದಾರೆ. 

ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಸುಟ್ಟು ಕರಕಲಾದ ಜಾಗಗವನ್ನು ಸಂಪೂರ್ಣ ಸ್ವಚ್ಚ ಮಾಡಿಸುತ್ತೇನೆ. ಇನ್ನು ಒಂದು ವಾರದಲ್ಲಿ ಇದೇ ಸ್ಥಳದಲ್ಲಿ ಕಟ್ಟಡ ಕಟ್ಟಿಕೊಡಲಾಗುತ್ತದೆ ಎಂದು ಅನ್ವರ್ ಬೇಗ್ ಹೇಳಿದ್ದಾರೆ. 

15 ದಿನಗಳಲ್ಲಿ ಲೈಬ್ರರಿ ಪುನರ್ ಸ್ಥಾಪಿಸುವ ವ್ಯವಸ್ಥೆ ಮಾಡಿಸುತ್ತೇನೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮೂಲಕ ಭರವಸೆ ಕೊಟ್ಟಿದ್ದಾರೆ. 

ಕನ್ನಡಪ್ರಭ-ಸುವರ್ಣನ್ಯೂಸ್‌ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿಗೆ ಭಾಜನರಾಗಿದ್ದ ಸೈಯದ್ ಇಸಾಕ್

"

ಕನ್ನಡಕ್ಕಾಗಿ ನನ್ನ ಉಸಿರು, ನನ್ನ ಪ್ರಾಣ: ಇಸಾಕ್

"

click me!