'ಸ್ಥಗಿತಗೊಂಡ ಸಕ್ಕರೆ ಕಾರ್ಖಾನೆಗಳಿಗೆ ಮರುಜೀವ'!

By Kannadaprabha NewsFirst Published Feb 11, 2020, 1:53 PM IST
Highlights

ಪಾಂಡವಪುರ ಜಿಲ್ಲೆಯ ರೈತರ ಜೀವನಾಡಿ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ಮಂಡ್ಯ(ಫೆ.11): ಪಾಂಡವಪುರ ಜಿಲ್ಲೆಯ ರೈತರ ಜೀವನಾಡಿ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಕಾವೇರಿ ಗೋಪಾಲಕರ ಸಂಘದ ಹಾಗೂ ಪಶುಪಾಲನ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ನೀಡಿ ಮಾತನಾಡಿದ್ದಾರೆ.

ರಾತ್ರಿ 2 ಗಂಟೆಗೆ ಹೊತ್ತಿ ಉರಿದ ಕೆನರಾ ಬ್ಯಾಂಕ್..! ಎಲ್ಲವೂ ಭಸ್ಮ

ಜಿಲ್ಲೆಯಲ್ಲಿರುವ ಎರಡು ಕಾರ್ಖಾನೆಗಳು ಸ್ಥಗಿತಗೊಂಡಿವೆ. ಇದರಿಂದ ಜಿಲ್ಲೆಯ ರೈತರಿಗೆ ಎಷ್ಟೊಂದು ತೊಂದರೆಯಾಗಿದೆ ಎನ್ನುವ ಅರಿವು ನಮಗಿದೆ. ಈಗಾಗಲೇ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿ ಮಾಲೀಕತ್ವಕ್ಕೆ ಗುತ್ತಿಗೆ ನೀಡಲು ಸರಕಾರ ತೀರ್ಮಾನಿಸಿದೆ. ರೈತರ ಅಭಿಪ್ರಾಯವನ್ನು ಸಂಗ್ರಹಿಸಿಯೇ ಕಾರ್ಖಾನೆಯನ್ನು ಉತ್ತಮ ಗುತ್ತಿಗೆದಾರರಿಗೆ ನೀಡಲಾಗುವುದು ಎಂದು ತಿಳಿಸಿದರು.

ಕೆ.ಎಸ್‌.ಪುಟ್ಟಣ್ಣಯ್ಯ ನಿಜವಾದ ರೈತ ನಾಯಕ, ರೈತರ ಪರವಾಗಿ ಸಾಕಷ್ಟುಹೋರಾಟ, ಚಳವಳಿಗಳನ್ನು ನಡೆಸಿ ಗಮನಸೆಳೆಸಿದ್ದಾರೆ. ಶಾಸಕರಾಗಿ ರೈತರ ಪರವಾಗಿ ವಿಧಾನಸಭೆಯಲ್ಲೂ ಧ್ವನಿಗೂಡಿಸಿ ಹೋರಾಟ ನಡೆಸಿದ್ದಾರೆ. ಪುಟ್ಟಣ್ಣಯ್ಯನವರ ಹೋರಾಟವೆಂದರೆ ಈಡಿ ಸರಕಾರವೇ ಹೆದರುತ್ತಿತ್ತು ಅಷ್ಟರಮಟ್ಟಿಗೆ ಅವರು ಹೋರಾಟವಿತ್ತು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮನ್ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್‌, ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಎಚ್‌.ಎನ್‌.ಮಂಜುನಾಥ್‌, ಆಯೋಜಕರಾದ ಅನಿಲ್‌, ಯೋಗೇಶ್‌, ಕಿರಣ್‌ ಇದ್ದರು.

ನಾಲೆಗಳನ್ನು ಪ್ರಾಧಿಕಾರಕ್ಕೆ ಸೇರಿಸಲು ಮನವಿ

ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಸಿಡಿಎಸ್‌ ಹಾಗೂ ವಿರಿಜಾ ನಾಲೆಗಳನ್ನು ಪ್ರಾಧಿಕಾರಕ್ಕೆ ಸೇರಿಸಿಕೊಂಡಿಲ್ಲ ಎಂದು ಸಿಡಿಎಸ್‌ ಹಾಗೂ ವಿರಿಜಾ ನಾಲೆಗೆ ನೀರು ಬಿಡದಿರಲು ಕೇಂದ್ರ ಜಲಸಂಪನ್ಮೂಲ ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಈ ಭಾಗದ ಸುಮಾರು 60 ಸಾವಿರ ಎಕರೆಯ ಕೃಷಿ ಭೂಮಿ ಪ್ರದೇಶದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಸಚಿವರು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಪತ್ರಬರೆದು ಸಿಡಿಎಸ್‌ ಹಾಗೂ ವಿರಿಜಾ ನಾಲೆಯನ್ನು ಕಾವೇರಿ ಪ್ರಾಧಿಕಾರಕ್ಕೆ ಸೇರಿಸಿ ಈ ನಾಲೆಗಳಿಗೂ ನೀರು ಬಿಡಿಸುವಂತೆ ಮುಖಂಡ ಬಿ.ಟಿ.ಮಂಜುನಾಥ್‌ ಅವರು ಸಚಿವ ಕೆ.ಸಿ.ನಾರಾಯಣಗೌಡರಿಗೆ ವೇದಿಕೆ ಮೇಲೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾರಾಯಣಗೌಡ ಶೀಘ್ರವೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚೆರ್ಚಿಸಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಅಧಿಕ ಹಾಲು ಕರೆಯುವ ಸ್ಪರ್ಧೆಯ ವಿಜೇತರು

*ಬೆಂಗಳೂರಿನ ಜೆಪಿ ನಗರದ ನಿವಾಸಿ ಚಂದ್ರಮತಿ ಪ್ರಕಾಶ್‌ರ ಹಸು 49.380 ಕೆಜಿ ಹಾಲು ಕರೆದು ಪ್ರಥಮ ಸ್ಥಾನದೊಂದಿಗೆ 1 ಲಕ್ಷ ಬಹುಮಾನ

*ಬೆಂಗಳೂರು ನೆಲಮಂಗಲದ ಜೀವಗಾನ ಡೈರಿ ಫಾರಂನ ವೆಂಕಟೇಶ್‌ ಅವರ ಹಸು 48.800 ಕೆಜಿ ಹಾಲು ಕರೆದು ದ್ವಿತೀಯ ಸ್ಥಾನ, 75 ಸಾವಿರ ಬಹುಮಾನ

*ಬೆಂಗಳೂರಿನ ಮಲ್ಲಿಗೆ ತೋಟದ ಗೀತಾ ಯತೀಶ್‌ರ ಹಸು 46.640 ಕೆಜಿ ಹಾಲು ಕರೆದು ತೃತೀಯ ಸ್ಥಾನ, 50 ಸಾವಿರ

*ಬೆಂಗಳೂರಿನ ಕೌಶಿಕ್‌ ಡೈರಿ ಫಾರಂನ ಸಿ.ಜಗನ್ನಾಥ್‌ರ ಹಸು 41.940 ಕೆಜಿ ಹಾಲು ಕರೆದು ನಾಲ್ಕನೇ ಸ್ಥಾನ, 25 ಸಾವಿರ

*ಬೆಂಗಳೂರಿನ ರುಚಿತಾ ಮಿಲ್‌್ಕ ಸಪ್ಲಯರ್ಸ್‌ನ ಸುರೇಶ್‌ರ ಹಸು 41.640 ಕೆಜಿ ಹಾಲು ಕರೆದು ಐದನೇ ಸ್ಥಾನ, 10 ಸಾವಿರ

ಸುನೀತಾಪಟ್ಟಣ್ಣಯ್ಯರ ಆಶೀರ್ವಾದ ಪಡೆದ ಸಚಿವ

ರೈತನಾಯಕ ದಿ.ಕೆ. ಎಸ್‌. ಪುಟ್ಟಣ್ಣಯ್ಯನವರ ಹುಟ್ಟೂರು ಕ್ಯಾತನಹಳ್ಳಿಗೆ ಸಚಿವ ನಾರಾಯಣಗೌಡರು ಭೇಟಿ ನೀಡಿದ್ದರು. ಕ್ಯಾತನಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟ್ಟಣ್ಣಯ್ಯನವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಗ್ರಾಮಕ್ಕೆ ಆಗಮಸಿದ ಸಚಿವ ನಾರಾಯಣ ಗೌಡರಿಗೆ ಗ್ರಾಮಸ್ಥರು ಹಾಗೂ ರೈತಮುಖಂಡರಿಂದ ಸನ್ಮಾನ ಮಾಡಿ ಗೌರವಿಸಿದರು. ಈ ವೇಳೆ ಮಾತನಾಡಿದ ಸಚಿವ ನಾರಾಯಣ ಗೌಡರು ಪುಟ್ಟಣ್ಣಯ್ಯನವರ ಅವರ ಆಶಯಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ರೈತರ ಸಂಕಷ್ಟಗಳ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಹೇಳಿದರು.

click me!